ಯಡಿಯೂರಪ್ಪ ಕಾಂಗ್ರೆಸ್ಗೆ ಸೇರಿದರೆ ಮುಖ್ಯಮಂತ್ರಿ ಹುದ್ದೆ!
ವಿಜಯಪುರ, ಜೂನ್ 5: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಬಂದರೆ ಮುಖ್ಯಮಂತ್ರಿಯಾಗಲು ಸಹಕಾರ ನೀಡುವುದಾಗಿ ಗೃಹ ಸಚಿವ ಎಂಬಿ ಪಾಟೀಲ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ಅವರು, ನಾನು ಮತ್ತು ಯಡಿಯೂರಪ್ಪ ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬಂದರೆ ಮುಖ್ಯಮಂತ್ರಿ ಹುದ್ದೆಗೆ ಏರಲು ಸಹಕಾರ ಕೊಡುತ್ತೇನೆ ಎಂದರು.
ಲಿಂಗಾಯತ ಮುಖಂಡರು 'ಸಿಎಂ' ಗಾದಿಗೆ,ಎಂಬಿ ಪಾಟೀಲರ ನೆರವು ಕೇಳಿದ ರವಿ
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಹಾಯ ಮಾಡಿ ಎಂದು ಬಿಜೆಪಿ ಶಾಸಕ ಸಿಟಿ ರವಿ ಅವರು ಹಾಕಿದ್ದ ಸವಾಲಿಗೆ ಪ್ರತಿಕ್ರಿಯೆಯಾಗಿ ಎಂಬಿ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.
ಪ್ರಹ್ಲಾದ ಜೋಶಿ ನಾಲ್ಕು ಬಾರಿ, ಸುರೇಶ್ ಅಂಗಡಿ ಕೂಡಾ ನಾಲ್ಕು ಬಾರಿ ಗೆದ್ದಿದ್ದಾರೆ, ಆದರೆ, ಜೋಶಿ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದೆ, ಅಂಗಡಿ ಅವರಿಗೆ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ ಇದು ಲಿಂಗಾಯತರಿಗೆ ಆಗಿರುವ ಅನ್ಯಾಯ, ಯಾಕೆ ಈ ರೀತಿ ತಾರತಮ್ಯದ ನೀತಿ ಎಂದು ಎಂಬಿ ಪಾಟೀಲ್ ಅವರು ಟ್ವೀಟ್ ಮಾಡಿದ್ದರು.
ಸಂಘಟನಾ ಚತುರ ಸಂತೋಷ್ ಗೆ ಬಡ್ತಿ, ಬಿಜೆಪಿ ಅಧ್ಯಕ್ಷ ಸ್ಥಾನ ರವಿಗೆ ಖಾತ್ರಿ?
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಟಿ ರವಿ, ಕರ್ನಾಟಕ ಬಿಜೆಪಿ ಸಂಸದರ ಬಗ್ಗೆ ಯಾಕೆ ಚಿಂತಿಸುತ್ತೀರಿ? ರಾಜ್ಯದಲ್ಲಿ ಲಿಂಗಾಯತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳೋಣ, ನಿಮಗೆ ನಿಜಕ್ಕೂ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ, ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಬೆಂಬಲಿಸಿ ಎಂದಿದ್ದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬರಲಿ
ನಾನು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಮುಖ್ಯಮಂತ್ರಿ ಆಗಬೇಕೆಂದು ಅವರು ಆಸೆ ಇಟ್ಟುಕೊಂಡಿರುವುದು ತಪ್ಪೇನಲ್ಲ. ಅದರ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ ಅವರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಬಂದರೆ ಸಿಎಂ ಆಗಲು ಸಹಕರಿಸುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದರು.
ಯಡಿಯೂರಪ್ಪ ಅವರನ್ನು ಸಿಎಂ ಮಾಡಿ!
ಮಾನ್ಯ ಎಂಬಿ ಪಾಟೀಲ್ ಅವರೇ, ರೈತ ಬಂಧು, ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಸಿದ್ಧವಿದೆ. ನಿಮ್ಮ ಕೈಯಲ್ಲಿ ಇಲ್ಲದ ಭವಿಷ್ಯ ಹೇಳುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಮಾತನಾಡಿ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಮ್ಮ ಕೈಯಲ್ಲಿಯೇ ಇದೆ. ಲಿಂಗಾಯತ ಪರ ಕಾಳಜಿ ತೋರಿಸಿ ನೋಡೋಣ ಎಂದು ಸಿಟಿ ರವಿ, ಎಂಬಿ ಪಾಟೀಲ್ ಅವರ ಟ್ವೀಟ್ಗೆ ಸವಾಲು ಹಾಕಿದ್ದರು.
|
ಯಡಿಯೂರಪ್ಪ ಸ್ಥಿತಿಯೂ...
ಸಿಟಿ ರವಿ ಅವರ ಸವಾಲಿಗೆ ಪ್ರತಿಯಾಗಿ ಟಾಂಗ್ ನೀಡಿದ್ದ ಎಂಬಿ ಪಾಟೀಲ್, 'ನಮ್ಮ ಯಡಿಯೂರಪ್ಪ ಅವರ ಪರಿಸ್ಥಿತಿಯೂ ಇದೇ ಆಗಬಹುದೇನೋ ಅನಿಸುತ್ತಿದೆ' ಎಂದು ವ್ಯಂಗ್ಯವಾಡುವ ಮೂಲಕ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿದರೂ ಅಚ್ಚರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು.
ಮುಖ್ಯಮಂತ್ರಿ ಆಸೆ ಬೇಡ
ಬಿಜೆಪಿ ನಾಯಕರು ಕಳೆದ ಒಂದು ವರ್ಷದಿಂದಲೂ ಸರ್ಕಾರ ಬಿದ್ದು ಹೋಗುತ್ತದೆ, ನಾವು ಪರ್ಯಾಯವಾಗಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಆಸೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಎಂಬಿ ಪಾಟೀಲ್ ಲೇವಡಿ ಮಾಡಿದ್ದಾರೆ.
|
ಅತ್ತು ಕರೆದು ಮಂತ್ರಿ ಆದಿರಿ
ಅಯ್ಯೋ ಎಂಬಿ ಪಾಟೀಲ್ ಅವರೇ, ನೀವು ಎಷ್ಟು ಅತ್ತು ಸುರಿದು ಮಂತ್ರಿ ಆದಿರಿ ಎಂದು ಜಗತ್ತಿಗೆ ತಿಳಿದಿದೆ. ಇನ್ನು ನೀವು ಶ್ರೀ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ? ನಿಮ್ಮ ನಾಯಕ ರಾಹುಲ್ ಗಾಂಧಿ ತರಹ full-time ಕಾಮಿಡಿ ಮಾಡಲು ಹೊರಟಿದ್ದೀರಾ? ಮೊದಲು ನಿಮ್ಮ ಪಕ್ಷದ ಲಿಂಗಾಯತ ನಾಯಕರಿಗೆ ಮಂತ್ರಿಗಿರಿ ಕೊಡಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ಸಿ.ಟಿ. ರವಿ ಮತ್ತೆ ಲೇವಡಿ ಮಾಡಿ ಟ್ವೀಟಿಸಿದ್ದಾರೆ.