ವಿಜಯಪುರ ಕಾಂಗ್ರೆಸ್ ನಾಯಕಿ ಕೊಲೆ: ಕೊನೆಗೂ ಆರೋಪಿ ಬಂಧನ
ವಿಜಯಪುರ, ಜೂನ್ 3: ಮೇ 17ರಂದು ನಡೆದಿದ್ದ ಕಾಂಗ್ರೆಸ್ ನಾಯಕಿ, ವಿಜಯಪುರ ಜೆಡಿಎಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ರೇಷ್ಮಾ ಪಡೇಕನೂರ ಅವರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸೊಲ್ಲಾಪುರದ ಎಂಐಎಂ ಮುಖಂಡ ತೌಫೀಕ್ ಇಸ್ಮಾಯಿಲ್ ಶೇಕ್ ಅಲಿಯಾಸ್ ಪೈಲ್ವಾನ್ನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸವನಬಾಗೇವಾಡಿ ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಕಾಂಗ್ರೆಸ್ ನಾಯಕಿ ಕೊಲೆಗೆ ಹಣಕಾಸು ವ್ಯವಹಾರ ಕಾರಣವೇ?
ರೇಷ್ಮಾ ಪಡೇಕನೂರ ಅವರ ಶವ ಮೇ 17ರಂದು ಕೊಲ್ಹಾರ ಸಮೀಪದ ಸೇತುವೆ ಕೆಳಗೆ ಪತ್ತೆಯಾಗಿತ್ತು. ಅವರ ಸಾವಿಗೆ ತೌಫೀಕ್ ಶೇಕ್ ಕಾರಣ ಎಂದು ರೇಷ್ಮಾ ಪತಿ ಖಾಜಾ ಬಂದೇನವಾಜ ಪಡೇಕನೂರ ದೂರು ಸಲ್ಲಿಸಿದ್ದರು.
ಆರೋಪಿಗಳ ಪತ್ತೆಗೆ ಪೊಲೀಸರು ಬಸವನಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ಮತ್ತು ವಿಜಯಪುರ ಡಿಎಸ್ಪಿ ಅಶೋಕ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.
'ಹಾಫ್ ಮರ್ಡರ್ ಕೂಡ ಮಾಡಿಲ್ಲ'
ರೇಷ್ಮಾ ಹಾಗೂ ತೌಫೀಕ್ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಬೆಳೆದಿತ್ತು. ರೇಷ್ಮಾ ಅವರಿಂದ ಪಡೆದ ಹಣವನ್ನು ತೌಫೀಕ್ ಹಿಂದಿರುಗಿಸಿರಲಿಲ್ಲ ಎಂದು ಹೇಳಲಾಗಿದೆ. ರೇಷ್ಮಾ ಅವರು ತಮಗೆ ಆಪ್ತರಾಗಿದ್ದ ಸಮೀವುಲ್ಲಾ ಎಂಬುವವರ ಬಳಿ ಈ ಹಣಕಾಸು ವ್ಯವಹಾರದ ಬಗ್ಗೆ ಮಾತನಾಡಿದ್ದರು. 'ತೌಫೀಕ್ ಜೀವನದುದ್ದಕ್ಕೂ ನರಳುತ್ತಿರಬೇಕು. ಸಾಯಲೂಬಾರದು ಇತ್ತ ಜೀವಂತವೂ ಇರಬಾರದು' ಎಂದು ರೇಷ್ಮಾ ಹೇಳಿದ್ದ ಆಡಿಯೋ ಇತ್ತೀಚೆಗೆ ಎಲ್ಲೆಡೆ ಹರಿದಾಡಿತ್ತು.
'ಆತ ಒಬ್ಬ ಹೇಡಿ. ಇಂದಿಗೂ ಒಂದು ಮರ್ಡರ್ ಅಥವಾ ಹಾಫ್ ಮರ್ಡರ್ ಮಾಡಿಲ್ಲ. ಅವನೊಬ್ಬ ರಾಜಕೀಯ ವ್ಯಕ್ತಿಯೆಂದು ಸುಮ್ಮನೆ ಇದ್ದೇನೆ' ಎಂದು ರೇಷ್ಮಾ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ತೌಫೀಕ್ ಸೇರಿ ಆರು ಜನ ರೇಷ್ಮಾ ಅವರನ್ನು ಕೊಲೆ ಮಾಡಿದ್ದರು ಎನ್ನಲಾಗಿದೆ.
ಹಣಕಾಸಿನ ವಿಚಾರಕ್ಕೆ ಜಗಳ
ತೌಫಿಕ್ ಅವರೊಂದಿಗೆ ರೇಷ್ಮಾ ಎರಡು ವರ್ಷಗಳಿಂದ ಹಣಕಾಸಿನ ವ್ಯವಹಾರ ನಡೆಸಿದ್ದರು. ರೇಷ್ಮಾ ಅವರಿಗೆ ತೌಫಿಕ್ 13 ಲಕ್ಷ ರೂಪಾಯಿ ನಗದು ಹಣ ನೀಡಬೇಕಿತ್ತು. ಆದರೆ, ಈ ಹಣವನ್ನು ಅವರು ಮರಳಿಸಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಜಗಳ ಸಹ ನಡೆದಿತ್ತು. ಇಬ್ಬರೂ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು.
ವಿಜಯಪುರ ಕಾಂಗ್ರೆಸ್ ನಾಯಕಿಯ ಕೊಲೆ: ಸೇತುವೆ ಕೆಳಗೆ ಶವ ಪತ್ತೆ
ಮನೆಗೆ ಬಂದಿದ್ದ ತೌಫೀಕ್
ಮೇ 16ರಂದು ವಿಜಯಪುರಕ್ಕೆ ಬಂದಿದ್ದ ತೌಫಿಕ್, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ 12ರ ಸುಮಾರಿಗೆ ಕರೆ ಮಾಡಿ ಮಾತನಾಡಿದ್ದ. ಬಳಿಕ ಹತ್ತು ನಿಮಿಷ, ರೊಕ್ಕದ ವಿಚಾರವಾಗಿ ಮಾತನಾಡಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಗೆ ಹೋದ ರೇಷ್ಮಾ ಅವರು ಮರಳಿ ಬರಲಿಲ್ಲ. ಹಣಕಾಸಿನ ವ್ಯವಹಾರದ ಕುರಿತ ಚರ್ಚೆಗೆ ರೇಷ್ಮಾ ಅವರನ್ನು ಕರೆಸಿಕೊಂಡ ತೌಫಿಕ್, ಅವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಶವವನ್ನು ತಂದು ಕೊಲ್ಹಾರ ಸೇತುವೆ ಕೆಳಗೆ ಎಸೆದಿದ್ದಾನೆ ಎಂದು ರೇಷ್ಮಾ ಪತಿ ದೂರಿನಲ್ಲಿ ಆರೋಪಿಸಿದ್ದರು.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಹೋಗಿದ್ದರು
ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಮೊದಲು ಗುರುತಿಸಿಕೊಂಡಿದ್ದ ರೇಷ್ಮಾ, ಬಳಿಕ ಜೆಡಿಎಸ್ ಸೇರಿಕೊಂಡು ರಾಜಕೀಯಕ್ಕೆ ಕಾಲಿರಿಸಿದ್ದರು. ಕೆಲವು ವರ್ಷ ವಿಜಯಪುರ ಜಿಲ್ಲಾ ಜೆಡಿಎಸ್ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿದ್ದ ಅವರಿಗೆ ನಿರಾಸೆಯಾಗಿತ್ತು. ಇದರಿಂದ ಅವರು ಜೆಡಿಎಸ್ ತೊರೆದು, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅವರಿಗೆ ಕಾಂಗ್ರೆಸ್ ಯಾವುದೇ ಹುದ್ದೆ ನೀಡಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ್ದರು.