ವಿಜಯಪುರ: ಬಿಜೆಪಿಗೆ ಪ್ರತಿಷ್ಠೆ, ಮೈತ್ರಿಗೆ ಅವಕಾಶ
ವಿಜಯಪುರ ಲೋಕಸಭಾ ಕ್ಷೇತ್ರವು ಈ ಬಾರಿ 17ನೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಮತದಾನವು ಏಪ್ರಿಲ್ 23ರಂದು ನಡೆಯಲಿದೆ. ಮೂರು-ನಾಲ್ಕು ದಶಕದ ಹಿಂದೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪ್ರಬಲವಾಗಿರುವ ಹೊತ್ತಿನಲ್ಲೂ ಸಹ ಇಲ್ಲಿ ಕಾಂಗ್ರೆಸ್ ಸತತವಾಗಿ ಗೆಲ್ಲಲು ವಿಫಲವಾಗಿತ್ತು. ಎಲ್ಲಾ ಮುಂಚೂಣಿಯ ಪಕ್ಷಗಳಿಗೂ ಅವಕಾಶ ನೀಡಿರುವ ಇಲ್ಲಿನ ಮತದಾರರು ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಗೇ ಮತ ಹಾಕಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬಿಜ್ಜನಹಳ್ಳಿ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈಗಿನ ವಿಜಯಪುರವನ್ನು ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿದರು. ಖಿಲ್ಜಿಗಳು, ಬಹುಮನಿ ಸುಲ್ತಾನರುಗಳಿಂದ ಆಳಿಸಿಕೊಳ್ಳಲ್ಪಟ್ಟ ಈ ಜಿಲ್ಲೆಯು ಇಂಡೋ-ಇಸ್ಲಾಂ ಕಲೆ, ಸಂಸ್ಕೃತಿಗೆ ಸಾಕ್ಷಿಯಾಗಿದೆ. ಸರ್ವ ಧರ್ಮ ಸಮನ್ವಯದ ಈ ನೆಲದಲ್ಲಿ ರಾಜಕೀಯವಾಗಿ ಒಂದೇ ಪಕ್ಷ ಹೆಚ್ಚಿನ ಸಮಯ ಪಾರುಪತ್ಯ ಸಾಧಿಸಲು ಆಗಿಲ್ಲವೆಂಬುದು ವಿಶೇಷ. ಬಿಜೆಪಿ ಮಾತ್ರ ಸತತ ನಾಲ್ಕು ಬಾರಿ ಗೆದ್ದು ಪಾರುಪತ್ಯ ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ.
ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವ್ಯಕ್ತಿ ಪರಿಚಯ
ಈ ವರೆಗೆ 16 ಲೋಕಸಭೆ ಚುನಾವಣೆ ಕಂಡಿರುವ ವಿಜಯಪುರದಲ್ಲಿ ಏಳು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ ಒಮ್ಮೆ ಕಾಂಗ್ರೆಸ್ (ಐ) ನ ಅಭ್ಯರ್ಥಿ ಗೆದ್ದಿದ್ದಾರೆ. ಒಮ್ಮೆ ಜನತಾ ದಳ, ಒಮ್ಮೆ ಸ್ವತಂತ್ರ್ಯ ಪಕ್ಷ ಒಮ್ಮೆ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಜನತಾ ಪಕ್ಷ ಒಮ್ಮೆ ಜಯಗಳಿಸಿದ್ದರೆ, ಬಿಜೆಪಿ ನಾಲ್ಕು ಬಾರಿ ಜಯಗಳಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆದ್ದು ಲೋಕಸಭೆಗೆ ತೆರಳಿದ್ದಾರೆ. ಮೊದಲೆರಡು ಬಾರಿ ಬಿಜೆಪಿಯ ಫೈರ್ಬ್ರಾಂಡ್ ಸಂಸದ ಬಸವರಾಜ ಪಾಟೀಲ್ ಯಾತ್ನಾಳ್ ಗೆದ್ದಿದ್ದರೆ, ಪ್ರಸ್ತುತ ರಮೇಶ್ ಚಂದಪ್ಪ ಜಿಗಜಿಣಗಿ ಅವರು ಸಂಸದರಾಗಿದ್ದಾರೆ. ಎರಡು ಬಾರಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿರುವ ಇವರು, ಈ ಬಾರಿ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿದ್ದಾರೆ.
ರಮೇಶ್ ಜಿಗಜಿಣಗಿ ಐದು ಬಾರಿ ಗೆದ್ದಿದ್ದಾರೆ
ವಿಜಯಪುರದ ಸಂಸದ ರಮೇಶ್ ಜಿಗಜಣಗಿ ಅವರು ಐದು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಅನುಭವಿ ಸಂಸತ್ ಪಟು. ಎಂಎ ಓದಿಕೊಂಡಿರುವ ಅವರು ಈ ಬಾರಿ ಲೋಕಸಭೆಯಲ್ಲಿ ರಾಜ್ಯದ ಕುರಿತಾಗಿ 195 ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಸತ್ನಲ್ಲಿ 97% ಹಾಜರಾತಿ ಸಹ ಇದೆ. ಈ ಬಾರಿಯೂ ಅವರು ಕಣಕ್ಕೆ ಇಳಿದಿದ್ದಾರೆ.
ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನ ಸುನೀತಾ ಚೌಹಾಣ್
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸ್ಪರ್ಧಿಸುತ್ತಿಲ್ಲ, ಬದಲಿಗೆ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಚುನಾವಣಾ ಚಿಹ್ನೆಯ ಅಡಿ ಮಹಿಳೆ ಸುನೀತಾ ಚೌಹಾಣ್ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಬಲಿಷ್ಠವಾಗಿದ್ದರೂ ಸಹ ಇಲ್ಲಿ ಜೆಡಿಎಸ್ಗೆ ಸೀಟು ನೀಡಲಾಗಿದೆ. ಇದು ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೋ ನೋಡಬೇಕಿದೆ.
ಬಿಜೆಪಿ ಶಾಸಕ ನಡಹಳ್ಳಿ ಮೇಲೆ ಎಂಬಿ ಪಾಟೀಲ್ ಬೆಂಬಲಿಗರಿಂದ ಹಲ್ಲೆ ಯತ್ನ
ಎಂಟು ವಿಧಾನಸಭೆ ಕ್ಷೇತ್ರಗಳು ಇವೆ
ವಿಜಯಪುರ ಲೋಕಸಭಾ ಕ್ಷೇತ್ರವು, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಬಬಲೇಶ್ವರ, ಇಂಡಿ, ಬಸವನಬಾಗೇವಾಡಿ, ಮುದ್ದೆಬಿಹಾಳ, ವಿಜಯಪುರ ನಗರ, ಸಿಂಧಗಿ, ನಾಗಠಾಣಾ, ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳ ಮತದಾರರು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಗ್ರಾಮೀಣ ಮತದಾರರ ಸಂಖ್ಯೆ ಹೆಚ್ಚಿದೆ.
ಬಿಜೆಪಿ-ಕಾಂಗ್ರೆಸ್ ಸಮಬಲ
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ, ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕರು ಇದ್ದಾರೆ, ಮುದ್ದೆಬಿಹಾಳದಲ್ಲಿ ಬಿಜೆಪಿ ಶಾಸಕ ಅಧಿಕಾರದಲ್ಲಿದ್ದಾರೆ, ದೇವರ ಹಿಪ್ಪರಗಿಯಲ್ಲಿ ಬಿಜೆಪಿ ಅಭ್ಯರ್ಥಿಯೇ ಶಾಸಕರಾಗಿ ಆಯ್ಕೆ ಆಗಿದ್ದಾರೆ, ಸಿಂಧಗಿಯಲ್ಲಿ ಜೆಡಿಎಸ್, ನಾಗಠಾಣಾದಲ್ಲಿ ಜೆಡಿಎಸ್, ಬಬಲೇಶ್ವರದಲ್ಲಿ ಕಾಂಗ್ರೆಸ್, ಬಸವನಬಾಗೇವಾಡಿಯಲ್ಲಿ ಕಾಂಗ್ರೆಸ್, ಇಂಡಿಯಲ್ಲಿ ಕಾಂಗ್ರೆಸ್ ಶಾಸಕರು ವಿಜಯ ಸಾಧಿಸಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದ ಅಡಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಸಮವಾದ ಶಕ್ತಿ ಹೊಂದಿವೆ. ಜೆಡಿಎಸ್ ಅಲ್ಪ ಶಕ್ತಿಯನ್ನು ಹೊಂದಿದೆ.
ಸುಮಲತಾ ಅಂಬರೀಶ್ ಬಿಜೆಪಿ ಸೇರ್ತಾರೆ ಎಂದ ರಮೇಶ್ ಜಿಗಜಿಣಗಿ
2014ರಲ್ಲಿ 16,22,635 ಮತದಾರರಿದ್ದರು
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಅಂಕಿ-ಸಂಖ್ಯೆ ಪ್ರಕಾರ 16,22,635 ಮತದಾರರು ಇದ್ದರು. ಇದರಲ್ಲಿ 8,47,815 ಪುರುಷ ಮತದಾರರು, 7,74,820 ಮಹಿಳಾ ಮತದಾರರು ಇದ್ದರು. ಈ ನಾಲ್ಕು ವರ್ಷದಲ್ಲಿ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.
ಗ್ರಾಮಾಂತರ ಮತದಾರರೇ ಹೆಚ್ಚು
ಕ್ಷೇತ್ರದಲ್ಲಿ 21,77,333 ಜನಸಂಖ್ಯೆ ಇದೆ. ಗ್ರಾಮಾಂತರದಲ್ಲಿ ಅತಿ ಹೆಚ್ಚು 76.95% ಜನಸಂಖ್ಯೆ ಇದ್ದರೆ. ನಗರ ಪ್ರದೇಶದಲ್ಲಿ 23.05% ಜನಸಂಖ್ಯೆ ಇದೆ. 2011 ರ ಜನಗಣತಿ ಅನುಸಾರ ಜಿಲ್ಲೆಯಲ್ಲಿ 65% ಹಿಂದೂ ಜನಸಂಖ್ಯೆ ಇದ್ದರೆ, ಮುಸ್ಲಿಂ ಜನಸಂಖ್ಯೆ 29% ರಷ್ಟಿದೆ. ಉತ್ತಮ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ 20.34% ಜನರಿದ್ದಾರೆ ಇವರ ಮತಗಳೂ ಸಹ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಗುಮ್ಮಟ ನಗರಿ ವಿಜಯಪುರ ಲೋಕಸಭಾ ಕ್ಷೇತ್ರ ಪರಿಚಯ
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
2014 ರ ವಿಜಯಪುರ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ 9,66,757 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ 5,21,565 ಮಂದಿ ಪುರುಷರು ಮತ ಚಲಾಯಿಸಿದ್ದರೆ. 4,45,192 ಮಂದಿ ಮಹಿಳೆಯರು ಮತ ಚಲಾಯಿಸಿದ್ದರು. ಒಟ್ಟು 60% ಮತಚಲಾವಣೆ ಆಗಿತ್ತು. ಗೆದ್ದ ಅಭ್ಯರ್ಥಿ ಬಿಜೆಪಿಯ ರಮೇಶ್ ಜಿಗಣಿಗಿ ಅವರು ಬರೋಬ್ಬರಿ 4,71,757 ಮತ ಗಳಿಸಿದ್ದರು. ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ನ ಪ್ರಕಾಶ್ ರಾಥೋಡ್ ಅವರನ್ನು 69,818 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ನೀರಿನ ಕೊರತೆ ಕ್ಷೇತ್ರದ ಬಹುಮುಖ್ಯ ಸಮಸ್ಯೆ
ಐದು ನದಿ ಹರಿಯುವ ಜಿಲ್ಲೆಯೆಂದು ಹೆಸರಾಗಿದ್ದ ವಿಜಯಪುರದ ಬಹುದೊಡ್ಡ ಸಮಸ್ಯೆ, ನೀರನ ಕೊರತೆ. ಬರಗಾಲ ಬಂತೆಂದರೆ ಗುಳೆ ಹೋಗುವವರ ಸಂಖ್ಯೆ ವಿಜಯಪುರದಲ್ಲಿ ಹೆಚ್ಚು. ಜೋಳ, ಸಜ್ಜೆ, ಶೆಂಗಾ, ಸೂರ್ಯಕಾಂತಿ, ಚಿಕ್ಕು ಹಣ್ಣುಗಳು ಇಲ್ಲಿನ ಪ್ರಧಾನ ಬೆಳೆಗಳು ಆದರೆ ನೀರಿಲ್ಲದ ಬೇಸಗೆಯ ಸಮಯದಲ್ಲಿ ರೈತರು ಕಂಗಾಲಾಗುವುದು ತಪ್ಪಿಲ್ಲ. ಎಷ್ಟೆ ಸರ್ಕಾರಗಳು ಬದಲಾದರೂ ಸಹ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಲು ಇನ್ನೂ ಸಾಧ್ಯವಾಗಿಲ್ಲ.
ಬಿಜೆಪಿ vs ಕಾಂಗ್ರೆಸ್-ಜೆಡಿಎಸ್
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬಂದು ಅದರ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೇ ಅಥವಾ ಪಕ್ಷಗಳು, ನಾಯಕರು ಅವರ ಪ್ರಭಾವಗಳು, ಜಾತಿ, ಧರ್ಮಗಳ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೋ ನೋಡಬೇಕು. ಬಿಜೆಪಿ ಮತ್ತು ಮೈತ್ರಿ ಅಭ್ಯರ್ಥಿಯ ನಡುವೆ ನೇರ ಹಣಾ-ಹಣಿ ಇದ್ದು, ವಿಜಯಪುರದ ಮತದಾರ ಯಾರಿಗೆ ಮತಚಲಾಯಿಸುತ್ತಾನೆ ಎಂಬುದು ಕಾದು ನೋಡಬೇಕು. ಏಪ್ರಿಲ್ 23 ಕ್ಕೆ ಮತದಾನ ನಡೆಯುತ್ತಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.