ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ
ವಿಜಯಪುರ, ಡಿಸೆಂಬರ್ 22: ವಿಜಯಪುರದಲ್ಲಿ ಕೆಲವು ದಿನದ ಹಿಂದೆ ನಡೆದ ದಲಿತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ.
ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳ ಬಂಧನ ನಡೆಸಿದ್ದಾರೆ. ಸಾಗರ ಮೋರೆ, ಶ್ರೀಶೈಲ ಮುಚ್ಚಂಡಿ, ಕೈಲಾಸ್ ರಾಠೋಡ ಹಾಗೂ ಮತ್ತೋರ್ವ ಆರೋಪಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಬಂಧನ ನಡೆಸಲಾಗಿದೆ ಎಂದು ವಿಜಯಪುರದಲ್ಲಿ ಸಿಐಡಿ ಎಸ್ಪಿ ಆನಂದ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಇನ್ನು ಇಂದು ಬೆಳಿಗ್ಗೆಯಷ್ಟೇ ಬಾಲಕಿ ಮನೆಗೆ ಸಿಐಡಿ ತಂಡ ಭೇಟಿ ನೀಡಿ ಪೋಷಕರ ಬಳಿ ಮಾಹಿತಿ ಕಲೆ ಹಾಕಿತ್ತು. ಈ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಆನಂದ್ ಕುಮಾರ್, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಪ್ರಕರಣ ಭೇದಿಸಲು ಮೂವರು ಡಿಎಸ್ಪಿ, ಒಬ್ಬರು ಎಸ್ಪಿ ನೇತೃತ್ವದಲ್ಲಿ ಹನ್ನೆರೆಡು ಜನರ ತಂಡವನ್ನು ನೇಮಕ ಮಾಡಲಾಗಿತ್ತು. ಪ್ರಕರಣ ನಡೆದ ಸ್ಥಳ, ಆರೋಪದ ಕುರಿತು ಒಂದೊಂದಾಗಿ ಕೂಲಂಕಷ ತನಿಖೆ ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ವರದಿ, ಎಲ್ಲಾ ವಿವರ ಪಡೆದು ಪ್ರಕರಣವನ್ನು ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು.