ಕಾಂಗ್ರೆಸ್ ನಾಯಕಿ ಕೊಲೆಗೆ ಹಣಕಾಸು ವ್ಯವಹಾರ ಕಾರಣವೇ?
ವಿಜಯಪುರ, ಮೇ 18: ವಿಜಯಪುರದ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಅವರ ಹತ್ಯೆ ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ.
ಡಿವೈಎಸ್ಪಿ ಮಟ್ಟದ ಎರಡು ತಂಡಗಳು ಈ ಹತ್ಯೆ ಪ್ರಕರಣವನ್ನು ಭೇದಿಸಲು ತನಿಖೆ ನಡೆಸಲಿವೆ. ಬಸವನಬಾಗೇವಾಡಿ ಡಿವೈಎಸ್ಪಿ ಮಹೇಶ್ವರ ಗೌಡ ಮತ್ತು ವಿಜಯಪುರ ಡಿವೈಎಸ್ಪಿ ಅಶೋಕ್ ನೇತೃತ್ವದ ಎರಡು ತಂಡಗಳು ಹತ್ಯೆ ಪ್ರಕರಣದ ಜಾಡು ಹಿಡಿಯಲಿವೆ. ಡಿವೈಎಸ್ಪಿ, ಒಬ್ಬ ಸಿಪಿಐ, ಇಬ್ಬರು ಪಿಎಸ್ಐ ಮತ್ತು ಒಬ್ಬ ಕಾನ್ಸ್ಟೆಬಲ್ ಈ ತಂಡಗಳಲ್ಲಿ ಇರಲಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರೇಷ್ಮಾ ಅವರ ಹತ್ಯೆಗೆ ಸಂಬಂಧಿಸಿದಂತೆ ಅವರ ಪತಿ ಖಾಜಾಬಂದೇನವಾಜ ಪಡೇಕನೂರ ಅವರು ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಇಸ್ಮಾಯಿಲ್ ಶೇಕ್ ವಿರುದ್ಧ ದೂರು ದಾಖಲಿಸಿದ್ದಾರೆ.
ತೌಫಿಕ್ ಅವರೊಂದಿಗೆ ರೇಷ್ಮಾ ಎರಡು ವರ್ಷಗಳಿಂದ ಹಣಕಾಸಿನ ವ್ಯವಹಾರ ನಡೆಸಿದ್ದರು. ರೇಷ್ಮಾ ಅವರಿಗೆ ತೌಫಿಕ್ 13 ಲಕ್ಷ ರೂಪಾಯಿ ನಗದು ಹಣ ನೀಡಬೇಕಿತ್ತು. ಆದರೆ, ಈ ಹಣವನ್ನು ಅವರು ಮರಳಿಸಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಜಗಳ ಸಹ ನಡೆದಿತ್ತು. ಇಬ್ಬರೂ ಸೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು.
ವಿಜಯಪುರ ಕಾಂಗ್ರೆಸ್ ನಾಯಕಿಯ ಕೊಲೆ: ಸೇತುವೆ ಕೆಳಗೆ ಶವ ಪತ್ತೆ
ಮೇ 16ರಂದು ವಿಜಯಪುರಕ್ಕೆ ಬಂದಿದ್ದ ತೌಫಿಕ್, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ 12ರ ಸುಮಾರಿಗೆ ಕರೆ ಮಾಡಿ ಮಾತನಾಡಿದ್ದ. ಬಳಿಕ ಹತ್ತು ನಿಮಿಷ, ರೊಕ್ಕದ ವಿಚಾರವಾಗಿ ಮಾತನಾಡಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಗೆ ಹೋದ ರೇಷ್ಮಾ ಅವರು ಮರಳಿ ಬರಲಿಲ್ಲ.
ಹಣಕಾಸಿನ ವ್ಯವಹಾರದ ಕುರಿತ ಚರ್ಚೆಗೆ ರೇಷ್ಮಾ ಅವರನ್ನು ಕರೆಸಿಕೊಂಡ ತೌಫಿಕ್, ಅವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಶವವನ್ನು ತಂದು ಕೊಲ್ಹಾರ ಸೇತುವೆ ಕೆಳಗೆ ಎಸೆದಿದ್ದಾನೆ ಎಂದು ರೇಷ್ಮಾ ಪತಿ ದೂರಿನಲ್ಲಿ ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಮಾಹಿತಿ
ಬೇರೆ ಎಲ್ಲಿಯೋ ಕೊಲೆ ಮಾಡಿ ಶವವನ್ನು ಕೊಲ್ಹಾರ ಸೇತುವೆ ಕೆಳಭಾಗಕ್ಕೆ ತಂದು ಎಸೆಯಲಾಗಿದೆ ಎನ್ನುವುದು ಮೊದಲ ನೋಟಕ್ಕೆ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವು ಹೇಗಾಗಿದೆ ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆ ಮಾಡಿದ್ದ ತೌಫಿಕ್ ಪತ್ನಿ
ಕೆಲವು ವರ್ಷದ ಹಿಂದೆ ತೌಫಿಕ್ ಪತ್ನಿ ರೇಷ್ಮಾ ಅವರ ಮನೆಗೆ ಬಂದು ಗಲಾಟೆ ನಡೆಸಿದ್ದಳು. ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ, ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿದ್ದರು ಎನ್ನಲಾಗಿದೆ.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ
ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಮೊದಲುನ ಗುರುತಿಸಿಕೊಂಡಿದ್ದ ರೇಷ್ಮಾ, ಬಳಿಕ ಜೆಡಿಎಸ್ ಸೇರಿಕೊಂಡು ರಾಜಕೀಯಕ್ಕೆ ಕಾಲಿರಿಸಿದ್ದರು. ಕೆಲವು ವರ್ಷ ವಿಜಯಪುರ ಜಿಲ್ಲಾ ಜೆಡಿಎಸ್ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಕಾಂಗ್ರೆಸ್ ಸೇರಿಕೊಂಡಿದ್ದರು
2018ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿದ್ದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ಬೇಸರಗೊಂಡಿದ್ದ ಅವರು ಜೆಡಿಎಸ್ ತೊರೆದು, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅವರಿಗೆ ಕಾಂಗ್ರೆಸ್ ಯಾವುದೇ ಹುದ್ದೆ ನೀಡಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ್ದರು.