ವಿಜಯಪುರ ಕಾಂಗ್ರೆಸ್ ನಾಯಕಿಯ ಕೊಲೆ: ಸೇತುವೆ ಕೆಳಗೆ ಶವ ಪತ್ತೆ
ವಿಜಯಪುರ, ಮೇ 17: ವಿಜಯಪುರದ ಕಾಂಗ್ರೆಸ್ ನಾಯಕಿ, ಜೆಡಿಎಸ್ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ರೇಷ್ಮಾ ಪಡೇಕನೂರ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಕೊಲ್ಹಾರದ ಸೇತುವೆಯೊಂದರ ಕೆಳಗೆ ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ರೇಷ್ಮಾ ಅವರ ಶವ ಕಂಡುಬಂದಿದೆ. ದುಷ್ಕರ್ಮಿಗಳು ಗುರುವಾರ ರಾತ್ರಿ ಅವರನ್ನು ಕೊಲೆ ಮಾಡಿ, ಶವವನ್ನು ಸೇತುವೆಯ ಕೆಳಗೆ ಎಸೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ವಿಚಾರಗಳು ಅವರ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಗರ್ಭಿಣಿಯ ಕೊಂದು ಹೊಟ್ಟೆಯನ್ನು ಬಗೆದು ಮಗು ಹೊರ ತೆಗೆದ ರಾಕ್ಷಸಿ
ಮಹಾರಾಷ್ಟ್ರದ ಸೊಲ್ಲಾಪುರದ ಎಂಐಎಂ ಮುಖಂಡರೊಬ್ಬರೊಂದಿಗೆ ರೇಷ್ಮಾ ಒಡನಾಟ ಹೊಂದಿದ್ದರು. ಈ ವಿಚಾರವಾಗಿ ಎಂಐಎಂ ಮುಖಂಡನ ಹೆಂಡತಿ ರೇಷ್ಮಾ ಅವರ ಮನೆ ಬಳಿ ರಂಪಾಟ ನಡೆಸಿದ್ದರು. ಆ ಮುಖಂಡನ ಜೊತೆ ರೇಷ್ಮಾ ಅವರು ಗುರುವಾರ ಕಾರಿನಲ್ಲಿ ತೆರಳಿದ್ದರು ಎಂದು ಹೇಳಲಾಗಿದೆ.
ಜೆಡಿಎಸ್ನ ವಿಜಯಪುರ ಜಿಲ್ಲಾಧ್ಯಕ್ಷೆ ಆಗಿದ್ದ ರೇಷ್ಮಾ ಪಡೇಕನೂರ, 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿದ್ದರು. ಆದರೆ, ಅವರು ನಿರಾಸೆ ಅನುಭವಿಸಿದ್ದರು. ಜೆಡಿಎಸ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಇದರಿಂದ ಅವರು ತೀವ್ರ ಬೇಸರಗೊಂಡಿದ್ದರು.
ಸ್ನೇಹಿತನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ್ದ ವ್ಯಕ್ತಿಯ ಬಂಧನ
ಬಳಿಕ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ತೊರೆದು ಗೃಹ ಸಚಿವ ಎಂ.ಬಿ. ಪಾಟೀಲ್, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಸಕ್ರಿಯರಾಗಿದ್ದ ಅವರಿಗೆ ಪಕ್ಷ ಯಾವುದೇ ಹುದ್ದೆಯ ಜವಾಬ್ದಾರಿ ನೀಡಿರಲಿಲ್ಲ.
ಈ ಘಟನೆ ಕುರಿತಂತೆ ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saddened to hear about the death of the Vijayapura district Congress party worker Reshma Padekanur. My deepest condolences to her near & dear ones.
— M B Patil (@MBPatil) 17 May 2019
An investigation is being carried out into her death.
ರೇಷ್ಮಾ ಅವರ ಸಾವಿಗೆ ಗೃಹ ಸಚಿವ ಎಂಬಿ ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. 'ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ರೇಷ್ಮಾ ಪಡೇಕನೂರ್ ಅವರ ಸಾವಿನ ಸುದ್ದಿ ಕೇಲಿ ದುಃಖವಾಗಿದೆ. ಅವರ ಕುಟುಂಬದವರಿಗೆ ನನ್ನ ಸಾಂತ್ವನಗಳು. ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.