ವಿಜಯಪುರ: ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಜಿಲ್ಲಾ ಬಂದ್
ವಿಜಯಪುರ, ಡಿಸೆಂಬರ್ 23: ವಿಜಯಪುರದಲ್ಲಿ ಇತ್ತೀಚಗೆ ಬಾಲಕಿಯೊಬ್ಬಾಕೆ ಮೇಲೆ ನಡೆದ ಅಮಾನವೀಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಇಂದು ವಿಜಯಪುರ ಬಂದ್ ಆಚರಿಸಲಾಗುತ್ತಿದೆ.
ವಿಜಯಪುರ ದಲಿತ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ 4 ಜನರ ಬಂಧನ
ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಜನರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ವಿಜಯಪುರ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ: ಫೀಲ್ಡಿಗಿಳಿದ ಸಿಐಡಿ ತಂಡ
ಬಂದ್ ಹಿನ್ನೆಲಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ, ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಸಂಘಟನೆಗಳು ಮನವಿ ಮಾಡಿದ್ದಾರೆ. ನಿನ್ನೆ ಸಾಯಂಕಾಲ ಮುಸುಕುದಾರಿಗಳು ಕೆಲವರು ಬಸ್ ಗೆ ಬೆಂಕಿ ಇಡಲು ಯತ್ನಿಸಿದ್ದ ಕಾರಣ ಇಂದು ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.
ಶಾಂತಿ ಕಾಪಾಡುವಂತೆ ಮನವಿ
ಬಂದ್ ಹಿನ್ನೆಲೆಯಲ್ಲಿ ನಗರದಾದ್ಯಂತ 7 ಕೆಎಸ್ಆರ್ಪಿಸಿ ತುಕಡಿಗಳು, 6ಡಿಎಆರ್ ತುಕಡಿಗಳು, 350 ಪೊಲೀಸ್ ಸಿಬ್ಬಂದಿ ಹಗೂ ಹೋಮ್ ಗಾರ್ಡ್ಸ್ಗಳನ್ನು ನೇಮಿಸಲಾಗಿದೆ. ಮೇಲುಸ್ತುವಾರಿಗೆಂದು 35 ಪೊಲೀಸ್ ಅಧಿಕಾರಿಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ.
ಬಂದ್ ಆಚರಿಸುವವರು ಶಾಂತಿ ಕಾಪಾಡಬೇಕೆಂದು ಎಸ್.ಪಿ.ಕುಲದೀಪ್ ಜೈನ್ ಹೇಳಿದ್ದಾರೆ, ಬಂದ್ ನಲ್ಲಿ ಪಾಲ್ಗೊಳ್ಳುತ್ತಿರುವ ಸಂಘಟನೆಗಳು ಬಲವಂತವಾಗಿ ಬಂದ್ ಆಚರಿಸಲು ಮುಂದಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಇಂಡಿ ರಸ್ತೆಯಲ್ಲಿ ಘಟನೆ
ಬಂದ್ ವೇಳೆ ಕಿಡಿಗೇಡಿಗಳು ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ ನಿರ್ವಾಹಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ್ದಾರೆ. ನಗರದ ಇಂಡಿ ರಸ್ತೆಯಲ್ಲಿರೋ ರೈಲ್ವೆ ಗೇಟ್ ಬಳಿ ಘಟನೆ ನಡೆದಿದ್ದು, ಬಸ್ ಗೆ ಪೆಟ್ರೋಲ್ ಹಾಕಿ ಬೆಂಕಿ ಇಡಲು ದುಷ್ಕರ್ಮಿಗಳು ಯತ್ನಿಸಿದ್ದು ಕಂಡೆಕ್ಟರ್ ಶಿವಲಿಂಗಪ್ಪ ಪೆಟ್ರೊಲ್ ಸಿಡಿದ ಕಾರಣ ಗಾಯಗಳಾಗಿವೆ ಕೂಡಲೇ ಕಿಡಿಗೇಡಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ.
ಬಿಜೆಪಿಯಿಂದ ಒಂದು ಲಕ್ಷ ಪರಿಹಾರ
ಮೃತ ಸಂತ್ರಸ್ಥ ಬಾಲಕಿ ಮನೆಗೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಬಿಜೆಪಿ ವತಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಆ ನಂತರ ಮಾತನಾಡಿದ ಅವರು ಇದೊಂದು ಅಮಾನವೀಯ ಘಟನೆ ಎಂದಿದ್ದಾರೆ. ರಮೇಶ ಜಿಗಣಗಿ ಜೊತೆಗೆ ಮಾಜಿ ಸಚಿವ ಅಪ್ಪು ಪಟ್ಟಣಶಟ್ಟಿ ಪರಿಷತ್ ಸದಸ್ಯ ಅರುಣ ಶಹಾಪುರ ಸೇರಿ ಹಲವು ಮುಖಂಡರು ಸಂತ್ರಸ್ಥೆ ಮನೆಗೆ ಭೇಟಿ ನೀಡಿದ್ದಾರೆ.
ವಾಹನ ಸಂಚಾರ ಸಂಪೂರ್ಣ ಬಂದ್
ವಿಜಯಪುರ ಬಂದ್ ಹಿನ್ನೆಲೆ ಶಾಲಾ ಮಕ್ಕಳ ಪರದಾಡುವಂತಾಗಿದೆ, ವಿಜಯಪುರ ನಗರದಲ್ಲಿ ವಾಹನ ಸಂಚಾರ ಸಂಫೂರ್ಣ ಬಂದ್ ಆಗಿರುವ ಕಾರಣ ಬೇರೆ ಬೇರೆ ಜಿಲ್ಲೆಗಳಿಂದ ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳಿಗೂ ಸಹ ತೊಂದರೆ ಆಗಿದೆ, ಐತಿಹಾಸಿಕ ಗೋಲಗುಂಬಜ್, ಬಾರಾಕಮಾನ್, ಇಬ್ರಾಹಿಂರೋಜಾ ನೋಡಲು ಬಂದ ಮಕ್ಕಳು ಈಗ ನಡೆದುಕೊಂಡೇ ಓಡಾಡುವ ಸ್ಥಿತಿ ಬಂದಿದೆ. ವಿಜಯಪುರ ಬಂದ್ ಮಾಹಿತಿ ಇಲ್ಲದ್ದರಿಂದ ಪ್ರವಾಸಕ್ಕೆ ಆಗಮಿಸಿದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ
ಸಂತ್ರಸ್ತ ಮೃತ ಬಾಲಕಿ ನಿವಾಸದಿಂದ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ಮಾಡಲಾಯಿತು, ಪ್ರತಿಭಟನೆಯಲ್ಲಿ ಸಂತ್ರಸ್ಥ ಬಾಲಕಿಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಸಂತ್ರಸ್ಥೆಯ ತಾಯಿ ಸಿದ್ದಮ್ಮ ಕಣ್ಣೀರು ಹಾಕುತ್ತಲೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳಿಗೆ ಮೃತ ಬಾಲಕಿಯ ಕುಟುಂಬಸ್ಥರು ಮನವಿ ನೀಡಲಿದ್ದಾರೆ. ನಗರದ ಗಾಂಧಿ ಚೌಕ್ ನಲ್ಲಿಯೂ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಆರೋಪಿಗಳನ್ನು ನೇಣಿಗೆ ಹಾಕಿ
ವಿಜಯಪುರ ನಗರದಲ್ಲಿ ನಡೆದಿರುವ ಈ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತ ಕಿಚ್ಚು ಹೊತ್ತಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಬಂದ್ಗಳು ನಡೆದಿವೆ. ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ವಿಜಯಪುರ ಜಿಲ್ಲಾಯಾದ್ಯಂತ ಬಂದ್ ಆಚರಿಸುತ್ತಿದ್ದು, ಜಿಲ್ಲೆಯ ಸಿಂದಗಿ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ, ತಿಕೋಟಾ ಪಟ್ಟಣಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ದಲಿತಪರ, ಕನ್ನಡಪರ ಸೇರಿದಂತೆ ವಿವಿಧ ಸಂಘಟನೆಗಳಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಸಂಘಟನೆಗಳ ಒತ್ತಾಯ ಮಾಡಿವೆ.