ರೇಷ್ಮಾ ಪಡೇಕನೂರ ಹತ್ಯೆ : ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸರು
ವಿಜಯಪುರ, ಆಗಸ್ಟ್ 23 : ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪೊಲೀಸರು ಆರೋಪಿಗಳ ಕುಟುಂಬದ ಮುಂದೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕಾರ ಮಾಡುವಾಗ ರೈಟರ್ ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗದ ರೈಟರ್ ಮಲ್ಲಿಕಾರ್ಜುನ ಪೂಜಾರಿ ಬಂಧಿತರು. ರಿಯಾಜ್ ಕೊಕಟನೂರ್ ಎಂಬುವವರಿಂದ 1 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಜಯಪುರ ಕಾಂಗ್ರೆಸ್ ನಾಯಕಿಯ ಕೊಲೆ: ಸೇತುವೆ ಕೆಳಗೆ ಶವ ಪತ್ತೆ
ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಆರೋಪಿಯಾದ ತೌಫಿಕ್ ಪೈಲ್ವಾನ್ ಕುಟುಂಬದವರ ಮುಂದೆ ಬಸವನಬಾಗೇವಾಡಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ವರಗೌಡ ಮತ್ತು ರೈಟರ್ ಮಲ್ಲಿಕಾರ್ಜುನ ಪೂಜಾರಿ 5 ಲಕ್ಷ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.
ಕಾಂಗ್ರೆಸ್ ನಾಯಕಿ ಕೊಲೆಗೆ ಹಣಕಾಸು ವ್ಯವಹಾರ ಕಾರಣವೇ?
ಈ ಡೀಲ್ ಮಾಡಿಸಿದ್ದ ಮಧ್ಯವರ್ತಿ ರಿಯಾಜ್ ಅಂತಿಮವಾಗಿ 1.5 ಲಕ್ಷ ರೂ.ಗೆ ಒಪ್ಪಿಸಿದ್ದರು. ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ಹಣ ನೀಡಲು ಒಪ್ಪಿದ್ದರು. ಈ ಹಣವನ್ನು ನೀಡುವಾಗ ದಾಳಿ ನಡೆಸಿದ ಎಸಿಬಿ ರೈಟರ್ ಮತ್ತು ರಿಯಾಜ್ ಬಂಧಿಸಿದೆ.
ಬಸವನಬಾಗೇವಾಡಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ವರಗೌಡ ಬಂಧಿಸಲು ಒಂದು ತಂಡವನ್ನು ಮಹಾರಾಷ್ಟ್ರದ ಎಸಿಬಿ ವಿಜಯಪುರಕ್ಕೆ ಕಳಿಸಿದೆ. ರೇಷ್ಮಾ ಪಡೇಕನೂರ ಹತ್ಯೆ ಆರೋಪಿಗಳನ್ನು ರಕ್ಷಿಸಲು ಲಂಚ ಪಡೆಯಲಾಗಿತ್ತೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಮೇ 17ರಂದು ಕಾಂಗ್ರೆಸ್ ನಾಯಕಿ ಮತ್ತು ವಿಜಯಪುರ ಜಿಲ್ಲಾ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷೆ ರೇಷ್ಮಾ ಪಡೇಕನೂರ ಹತ್ಯೆ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿ ಸೊಲ್ಲಾಪುರದ ಎಂಐಎಂ ಮುಖಂಡ ತೌಫೀಕ್ ಇಸ್ಮಾಯಿಲ್ ಅಲಿಯಾಸ್, ಪೈಲ್ವಾನ್ನನ್ನು ಪೊಲೀಸರು ಬಂಧಿಸಿದ್ದರು.