ಗೌರಿ ಲಂಕೇಶ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಜುಲೈ 7: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ ಪೊಲೀಸರು ಮತ್ತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ರತ್ನಾಪುರದ ಶ್ರೀನಿವಾಸ ಭಂಡಾರಿ ಮತ್ತು ಆತನ ಸಹೋದರ ರಘುನಾಥ ಎಂಬುವವರನ್ನು ಪೊಲೀಸರು ಅರಿಕೇರಿ ಗ್ರಾಮದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಹಿಂದೆ ಸೇನೆಯ ನಿವೃತ್ತ ಕರ್ನಲ್?
ಶ್ರೀನಿವಾಸ ಭಂಡಾರಿ, ಈಗಾಗಲೇ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ರತ್ನಾಪುರದ ಗ್ರಾಮದವರೇ ಆದ ಮನೋಹರ ದುಂಡಪ್ಪ ಯಡವೆಯ ಸ್ನೇಹಿತ.
ಮನೋಹರ ಯಡವೆ ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದ. ವಿಜಯಪುರ ಊರು ತೊರೆದು ದಶಕಗಳಾಗಿವೆ. ಸಂಬಂಧಿ ಸೀತಾರಾಂ ಯಡವೆ ಅವರ ಮೂಲಕ ಆತ ಮಂಗಳೂರಿನ ಸುರತ್ಕಲ್ನಲ್ಲಿ ಸನಾತನ ಸಂಸ್ಥೆಯ ಜತೆ ನಂಟು ಹೊಂದಿದ್ದ ಎನ್ನಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಇದುವರೆಗೆ ಕೆ.ಟಿ. ನವೀನ್ ಕುಮಾರ್, ಪರಶುರಾಮ್ ವಾಘ್ಮೋರೆ, ಮನೋಹರ ದುಂಡಪ್ಪ ಯಡವೆ, ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಎಂಬುವವರನ್ನು ಬಂಧಿಸಿದೆ.
ಈಗ ಅವರ ಜತೆಗೆ ಇನ್ನಿಬ್ಬರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.