ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ: ಕೆಎಸ್ ಈಶ್ವರಪ್ಪ ವಾಗ್ದಾಳಿ
ವಿಜಯಪುರ, ಡಿಸೆಂಬರ್ 5: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯಲ್ಲಿ ಮೆದುಳೇ ಇಲ್ಲ. ತಲೆಯಲ್ಲಿ ಮೆದುಳಿನ ಬದಲು ಸಗಣಿ ತುಂಬಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಟೀಕಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಬರ ಅಧ್ಯಯನ ಕಾರ್ಯಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬರದಿಂದ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಚ್ಚಿನ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ಆಪರೇಷನ್ ಕಮಲ : ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ಬರ ಅಧ್ಯಯನ ನಡೆಸಲು ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಯಾರೂ ಬರುತ್ತಿಲ್ಲ. ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಹ ಇತ್ತ ತಲೆಹಾಕುತ್ತಿಲ್ಲ. ಹೀಗಿರುವಾಗ ರೈತರ ಸಂಕಷ್ಟ ಅರ್ಥಮಾಡಿಕೊಳ್ಳುವವರು ಯಾರು ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.
ಸಿದ್ದರಾಮಯ್ಯ ತಲೆಯಲ್ಲಿ ಸಗಣಿ
ಸಿದ್ದರಾಮಯ್ಯ ತಲೆಯಲ್ಲಿ ಸಗಣಿ ಇದೆ. ಸರ್ಕಾರ ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಕೈಯಲ್ಲಿದೆ. ಸಿದ್ದರಾಮಯ್ಯ ಕೈಯಲ್ಲಿ ಇಲ್ಲ. ನಾವು ಒಂದು ಲಕ್ಷ ರೈತರನ್ನು ಸೇರಿಸಿದರೆ, ತಾವು ಎರಡು ಲಕ್ಷ ರೈತರನ್ನು ಸೇರಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಕಳೆದ 40 ವರ್ಷಗಳಲ್ಲಿ ಇಂತಹ ಬರಗಾಲ ಬಂದೇ ಇಲ್ಲ ಎಂದರು.
ರೈತರಿಗೆ ಸ್ಪಂದಿಸುತ್ತಿಲ್ಲ
ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಕರ್ತವ್ಯದಿಂದ ನುಣುಚಿಕೊಳ್ಳುತ್ತಿವೆ. ಬರಗಾಲ ಪೀಡಿತ ಪ್ರದೇಶಗಳಿಗೆ ಸಚಿವರು, ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. ರೈತರ ಸಂಕಷ್ಟದ ಕಡೆಗೆ ಗಮನ ಹರಿಸುತ್ತಿಲ್ಲ. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ದೇವೇಗೌಡ, ಸಿದ್ದರಾಮಯ್ಯ ಹೊರಬರಲಿ
ದೇವೇಗೌಡ, ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಕುಮಾರಸ್ವಾಮಿ ಅವರಿಗೆ ಆಗ್ರಹಿಸುತ್ತೇನೆ, ಎಸಿ ಕೊಠಡಿಗಳಲ್ಲಿ ಕೂರುವುದನ್ನು ಬಿಟ್ಟು ನೀವೇ ಬರ ಅಧ್ಯಯನ ಮಾಡಿ. ದೇವೇಗೌಡರು ಮತ್ತು ಸಿದ್ದರಾಮಯ್ಯ ಬರ ಪರಿಶೀಲನೆಗೆ ತೆರಳಲಿ. ಅದನ್ನು ನೋಡಿದ ಬಳಿಕವಾದರೂ ಉಳಿದ ಸಚಿವರು ಬರ ಅಧ್ಯಯನ ನಡೆಸಬಹುದು. ಮೊದಲು ಹೊಲಗಳಿಗೆ ಭೇಟಿ ನೀಡಲಿ. ಪರಿಹಾರ ನೀಡುವ ಬಗ್ಗೆ ಆಮೇಲೆ ಯೋಚಿಸಲಿ.
ಅಧಿವೇಶನದ ವೇಳೆ ಪ್ರತಿಭಟನೆ
ಈ ಬಾರಿ ಮಳೆ ಇಲ್ಲದೆ 1740 ಕೋಟಿ ರೂ ಮುಂಗಾರು ಬೆಳೆ ನಷ್ಟವಾಗಿದೆ. ಅದರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಲಿದೆ. ರಾಜ್ಯದಲ್ಲಿನ ಬರಕ್ಕೆ ಪರಿಹಾರ ನೀಡಬೇಕು. ಡಿಸೆಂಬರ್ 10ರಂದು ವಿಧಾನಸಭೆ ಅಧಿವೇಶನದ ವೇಳೆ ಒಂದು ಲಕ್ಷ ರೈತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ. ರೈತರ ಬಗ್ಗೆ ಸರ್ಕಾರ ಕಾಳಜಿ ತೋರದೆ ಇದ್ದರೆ ಉಗ್ರ ಪ್ರತಿಭಟನೆ ನಡೆಯಲಿದೆ. ಆಗಲಾರದೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದರು.
ಅವರದು ಆಪರೇಷನ್ ಅಲ್ಲವೇ?
ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಗುಪ್ತಚರ ಇಲಾಖೆಯು ಬಿಜೆಪಿಯ ನಾಯಕರ ಯಾವ ಮಾಹಿತಿ ಸಂಗ್ರಹಿಸಲು ಹೋದರೂ ನಮ್ಮ ಸಣ್ಣ ಕೂದಲೂ ಸಿಗುವುದಿಲ್ಲ. ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿಗೆ ಯಾರೇ ಬಂದರೂ ನಾವು ಅವರನ್ನು ವಿರೋಧಿಸುವುದಿಲ್ಲ. ನಾವೇನೂ ಸನ್ಯಾಸಿಗಳಲ್ಲ. ನಾವು ಯಾರನ್ನಾದರೂ ಕರೆದುಕೊಂಡು ಬಂದರೆ ಆಪರೇಷನ್ ಕಮಲ ಎನ್ನುತ್ತೀರಿ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್-ಜೆಡಿಎಸ್ನವರು ಕರೆದುಕೊಂಡರಲ್ಲ, ಅದು ಏನು? ಎಂದು ಪ್ರಶ್ನಿಸಿದರು.