ಸಿಂಧಗಿಯಲ್ಲಿ ಗೌಡ್ರು -ಎಚ್ಡಿಕೆ ಠಿಕಾಣಿ: ಸ್ಪೋಟಕ ಕಾರಣ ಬಿಚ್ಚಿಟ್ಟ ಜಮೀರ್ ಅಹ್ಮದ್
ವಿಜಯಪುರ, ಅ 24: ಉಪ ಚುನಾವಣೆಯಲ್ಲಿ ಯಾವುದೇ ಖಚಿತ ಮಾಹಿತಿಯಿಲ್ಲದೇ, ಮೂರೂ ಪಕ್ಷಗಳ ಆರೋಪ/ಪ್ರತ್ಯಾರೋಪ ಎಲ್ಲೆ ಮೀರುತ್ತಿದೆ. ಕಾಂಗ್ರೆಸ್ ಮುಖಂಡ ಮತ್ತು ಚಾಮರಾಜಪೇಟೆಯ ಶಾಸಕರೂ ಆಗಿರುವ ಜಮೀರ್ ಅಹ್ಮದ್ ಖಾನ್ ಅವರು ದಳಪತಿಗಳ ಮೇಲೆ ಗುರುತರ ಆರೋಪ ಮಾಡಿದ್ದಾರೆ.
ಈ ಹಿಂದೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ವಿರುದ್ದ ಸೂಟ್ಕೇಸ್ ತೆಗೆದುಕೊಂಡು ಪ್ರಚಾರಕ್ಕೆ ಬರುತ್ತಾರೆ ಎಂದು ಆರೋಪಿಸಿದ್ದ ಜಮೀರ್, ಸಿಂಧಗಿ ಚುನಾವಣಾ ಸಭೆಯಲ್ಲಿ ಮತ್ತೆ ಅದನ್ನು ಪುನರುಚ್ಚಿಸಿದ್ದಾರೆ.
ದೇವೇಗೌಡ್ರ ತುಂಬಿದ ಕುಟುಂಬಕ್ಕೆ ಹುಳಿ ಹಿಂಡಿದ ಜಮೀರ್ ಅಹ್ಮದ್ ಖಾನ್!
ಮುಸ್ಲಿಂ ಮತಗಳು ಕಾಂಗ್ರೆಸ್ಸಿಗೆ ಬೀಳದೇ ಇರಲಿ ಎನ್ನುವ ಕಾರಣಕ್ಕಾಗಿ ಜೆಡಿಎಸ್, ಆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಈಗ, ಅವರ ಶಿಷ್ಯ ಜಮೀರ್ ಅಹ್ಮದ್ ಖಾನ್ ಕೂಡಾ ಅದೇ ಮಾತನ್ನು ಹೇಳಿದ್ದಾರೆ.
ಉಪ ಚುನಾವಣೆ: "ಎರಡು ರಾಷ್ಟ್ರೀಯ ಪಕ್ಷಗಳಿಗೆ ನಿರಾಶೆ ಕಟ್ಟಿಟ್ಟಬುತ್ತಿ"
ಮಾತಿನ ಮಧ್ಯೆ ಮತ್ತೆ ಎಚ್ಡಿಕೆಯವರನ್ನು 'ಕಾಲಾ ಕುಮಾರಸ್ವಾಮಿ'ಎಂದು ಸಂಭೋದಿಸಿದ ಜಮೀರ್, ಯಾವ ಕಾರಣಕ್ಕಾಗಿ ಅಪ್ಪ-ಮಗ (ದೇವೇಗೌಡ್ರು ಮತ್ತು ಕುಮಾರಸ್ವಾಮಿ) ಸಿಂಧಗಿಯಲ್ಲಿ ಕೂತು ಪ್ರಚಾರ ನಡೆಸುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ನನ್ನನ್ನು ಸಚಿವರನ್ನಾಗಿ ಮಾಡಿದರು
"ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರು ನನ್ನನ್ನು ಸಚಿವರನ್ನಾಗಿ ಮಾಡಿ ನಾಲ್ಕು ಖಾತೆಯನ್ನು ನೀಡಿದ್ದರು ಕಾಲಾ ಕುಮಾರಸ್ವಾಮಿ..ಸಿಂಧಗಿ ಮತ್ತು ಹಾನಗಲ್ ನಲ್ಲಿ ಟಿಕೆಟ್ ನೀಡಿ ನಿಮಗೆ ಮುಸ್ಲಿಮರ ಮೇಲೆ ಪ್ರೀತಿ ಬಂತಾ? ರಾಮನಗರ ನಿಮ್ಮ ಭದ್ರಕೋಟೆಯಲ್ಲವೇ ಅಲ್ಲಿ ಯಾಕೆ ಮುಸ್ಲಿಮರಿಗೆ ಟಿಕೆಟ್ ನೀಡಲಿಲ್ಲ. ರಾಮನಗರದಲ್ಲಿ ನಮ್ಮ ಅಭ್ಯರ್ಥಿ ಇಕ್ಬಾಲ್ ಅವರನ್ನು ಸೋಲಿಸಿದಿರಲ್ವಾ ಆಗ ನಿಮಗೆ ಮುಸ್ಲಿಮರ ಮೇಲೆ ಪ್ರೀತಿ ಇರಲಿಲ್ಲವೇ" ಎಂದು ಜಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ.
ರಾಮನಗರದಲ್ಲಿ ಯಾಕೆ ನಿಮ್ಮ ಧರ್ಮಪತ್ನಿಗೆ ಟಿಕೆಟ್ ನೀಡಿದಿರಿ
"ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆದ್ದು, ರಾಮನಗರವನ್ನು ಬಿಟ್ಟು ಕೊಟ್ಟಿರಿ, ಅಲ್ಲಿ ಯಾಕೆ ನಿಮ್ಮ ಧರ್ಮಪತ್ನಿಗೆ ಟಿಕೆಟ್ ನೀಡಿದಿರಿ, ಮುಸ್ಲಿಮರಿಗೆ ಟಿಕೆಟ್ ಕೊಡಬಹುದ್ದಿತ್ತಲ್ಲವೇ. ಮುಸ್ಲಿಮರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಕ್ಕು ಇಲ್ಲವೇ ಎಂದು ಪ್ರಶ್ನಿಸುವ ನಿಮಗೆ, ಕ್ಷೇತ್ರದಲ್ಲಿ ವೋಟ್ ಡಿವೈಡ್ ಆಗುವ ಉದ್ದೇಶವನ್ನು ಹೊಂದಿದ್ದೀರಿ. ಚಾಮರಾಜಪೇಟೆಯಲ್ಲಿ ನನಗೂ ಹಾಗೆ ಮಾಡಿದ್ದೀರಿ, ತನ್ವೀರ್ ಸೇಠ್ ಗೂ ಅದೇ ಬುದ್ದಿ ತೋರಿಸಿದ್ದೀರಿ"ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸಿಂಧಗಿಯಲ್ಲಿ ಅವರಿಗೆ ಸೂಟ್ಕೇಸ್ ಬಂದಿದೆ, ಹಾನಗಲ್ ನಲ್ಲಿ ಇನ್ನೂ ಬಂದಿಲ್ಲ
"ಹಾನಗಲ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ, ದೇವೇಗೌಡ್ರು ಮತ್ತು ಎಚ್ ಡಿ ಕುಮಾರಸ್ವಾಮಿಯವರು ಸಿಂಧಗಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ ಎಂದರೆ ಸಿಂಧಗಿಯಲ್ಲಿ ಅವರಿಗೆ ಸೂಟ್ಕೇಸ್ ಬಂದಿದೆ, ಹಾನಗಲ್ ನಲ್ಲಿ ಇನ್ನೂ ಸೂಟ್ಕೇಸ್ ಬಂದಿಲ್ಲ ಎಂದು. ನಾನು ಈಗ ಹೇಳಿಕೆ ಕೊಟ್ಟ ಮೇಲೆ ಹಾನಗಲ್ ಗೆ ಹೋದರೂ ಹೋಗಬಹುದು"ಎಂದು ಜಮೀರ್ ಅಹ್ಮದ್ ಖಾನ್, ಗೌಡ್ರು ಮತ್ತು ಎಚ್ಡಿಕೆ ಗಂಭೀರ ಆರೋಪ ಮಾಡಿದ್ದಾರೆ.
ಪ್ರತೀ ಬಾರಿಯೂ ಹಜ್ ಯಾತ್ರೆಯನ್ನು ಉದ್ಘಾಟಿಸುವವರು ಮುಖ್ಯಮಂತ್ರಿಗಳು
"ಪ್ರತೀ ಬಾರಿಯೂ ಹಜ್ ಯಾತ್ರೆಯನ್ನು ಉದ್ಘಾಟಿಸುವವರು ಮುಖ್ಯಮಂತ್ರಿಗಳು. ಅವರು ಸಿಎಂ ಆಗಿದ್ದಾಗ, ನಾನೂ ಸಚಿವನಾಗಿದ್ದೆ. ಅವರನ್ನು ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೆ, ಬರುತ್ತೇನೆ ಎಂದು ಕೈಕೊಟ್ಟರು. ಬಿಜೆಪಿ ತನ್ನ ಸರಕಾರದ ಅವಧಿಯಲ್ಲೂ ಮುಖ್ಯಮಂತ್ರಿಗಳು ಹಜ್ ಉದ್ಘಾಟನೆ ನಡೆಸಿಕೊಟ್ಟಿದ್ದರು. ಇದನ್ನು ತಪ್ಪಿಸಿಕೊಂಡ ಏಕೈಕ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ. ಇವರು ನಮ್ಮ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವುದು ದುರಂತ"ಎಂದು ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತ ಪಡಿಸಿದರು.