ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ: ಆಸ್ಪತ್ರೆ ಬಾಗಿಲಲ್ಲೇ ಮಹಿಳೆಗೆ ಹೆರಿಗೆ
ವಿಜಯಪುರ, ಅಕ್ಟೋಬರ್ 18: ಪ್ರಾಥಮಿಕ ಆರೋಗ್ಯ ಕೇಂದ್ರ ಬಾಗಿಲು ಮುಚ್ಚಿದ್ದ ಕಾರಣ ಆಸ್ಪತ್ರೆ ಬಾಗಿಲಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ತೆರೆಯುವುದೇ ಅಪರೂಪ. ದಿನಕ್ಕೆ ಹತ್ತಾರು ಮಂದಿ ಆಸ್ಪತ್ರೆ ಬಾಗಿಲಿಗೆ ಬಂದು ವಾಪಸಾಗುತ್ತಿದ್ದರು. ಆದರೆ ಮಹಿಳೆಗೆ ಹೆರಿಗೆ ನೋವು ಜೋರಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಬಾಗಿಲು ಮುಚ್ಚಿತ್ತು. ಕೊನೆಗೆ ಆಸ್ಪತ್ರೆಗ ಬಾಗಿಲಲ್ಲೇ ಹೆರಿಗೆ ಮಾಡಿಸಲಾಯಿತು.
ಸುನಂದಾ ಹೂಗಾರ ಹೆರಿಗೆ ನೋವೆಂದು ಬಳಗಾನೂರ ಆಸ್ಪತ್ರೆಗೆ ಬಂದಿದ್ದರು. ಆದರೆ ಅಲ್ಲಿ ಯಾವುದೇ ಸಿಬ್ಬಂದಿ ಅಥವಾ ವೈದ್ಯರಿರಲಿಲ್ಲ. ಜೊತೆಗೆ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು.
ಮತ್ತೊಂದು ಆಸ್ಪತ್ರೆಗೆ ಹೋಗಲು ಹೆಚ್ಚು ಸಮಯ ಬೇಕಿತ್ತು. ಆಗ ಅಲ್ಲಿಯೇ ಇದ್ದ ಸ್ಥಳೀಯ ಮಹಿಳೆಯರು ಬೇರೆ ದಾರಿ ಕಾಣದೆ ತಕ್ಷಣ ಆಸ್ಪತ್ರೆಯ ಹೊರಗೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ಸುನಂದಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ 7 ಗಂಟೆಯಲ್ಲಿ ನಡೆದಿದೆ. ಇಂತಹ ಪ್ರಕರಣಗಳು ನಡೆದಿರುವುದು ಇದೇ ಮೊದಲೇನಲ್ಲ. ಅಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ಗಳೇ ಹೆರಿಗೆ ಮಾಡಿಸುತ್ತಾರೆ ಎನ್ನಲಾಗಿದೆ. ಈ ಪ್ರಕರಣ ಮೂರನೆಯದ್ದಾಗಿದೆ. ವೈದ್ಯರು ಬರುವುದೇ ಅಪರೂಪ. ಇಲ್ಲಿ ನರ್ಸ್ಗಳದ್ದೇ ಕಾರುಬಾರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.