ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ "ಸಿಡಿ"ಮದ್ದು!
ವಿಜಯಪುರ, ಮಾರ್ಚ್ 14: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಒಬ್ಬ ಬಿಜೆಪಿ ಮತ್ತು ಇನ್ನೊಬ್ಬ ಕಾಂಗ್ರೆಸ್ ನಾಯಕನ ಕೈವಾಡವಿದೆ ಎನ್ನುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಡಿ ಗರ್ಲ್ ಹೇಳಿಕೆ: ಪರದೆ ಹಿಂದಿನ ಅಸಲಿ ಸತ್ಯವೇನು?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪದಲ್ಲಿ ಸತ್ಯವಿದೆ. ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆಪ್ತರಿದ್ದಾರೆ. ಅವರು ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ದೂಷಿಸಿದ್ದಾರೆ.
ಸಿಡಿ ಪ್ರಕರಣದ ಹಿಂದೆ ಇಬ್ಬರು ನಾಯಕರ ಕೈವಾಡ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ನಾಯಕರಿದ್ದಾರೆ. ಬಿಜೆಪಿಯ ಒಬ್ಬ ಉನ್ನತ ನಾಯಕ ಮತ್ತು ಕಾಂಗ್ರೆಸ್ಸಿನ ಒಬ್ಬ ಉನ್ನತ ನಾಯಕರು ಈ ಸಿಡಿ ಪ್ರಕರಣದ ಹಿಂದಿದ್ದಾರೆ. ಸಿಡಿ ಪ್ರಕರಣವನ್ನು ಇಟ್ಟುಕೊಂಡು ರಮೇಶ್ ಜಾರಕಿಹೊಳಿಯವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಈ ಇಬ್ಬರೂ ನಾಯಕರು ಸೇರಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ಪ್ಲ್ಯಾನ್
ಯುವತಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡುತ್ತಿದ್ದಂತೆ ಸಂತ್ರಸ್ತೆಯ ವಿಡಿಯೋ ಹೊರ ಬರುತ್ತದೆ. ಅಂದರೆ ಇಡೀ ಪ್ರಕರಣದ ಹಿಂದೆ ಪಕ್ಕಾ ಪ್ಲ್ಯಾನ್ ಅಡಗಿದೆ. ಬಿಜೆಪಿ ಉನ್ನತ ನಾಯಕರ ಬಳಿ ಇನ್ನೂ ಹಲವರ ಸಿಡಿಗಳಿವೆ. ಕಾಂಗ್ರೆಸ್ಸಿನ ಉನ್ನತ ನಾಯಕರ ಮನೆಗಳಲ್ಲೂ ಇಂಥ ಸಿಡಿಗಳಿದ್ದು, ಬ್ಲ್ಯಾಕ್ ಮೇಲ್ ರಾಜಕಾರಣಿಗಳಿಗೆ ಪಾಠ ಕಲಿಸುವುದಕ್ಕೆ ಸಿಬಿಐ ತನಿಖೆ ನಡೆಸಬೇಕಿದೆ. ಅಲ್ಲದೇ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕಾದಲ್ಲಿ ಈ ಪ್ರಕರಣವನ್ನು ಕೇಂದ್ರ ತನಿಖಾ ತಂಡ(ಸಿಬಿಐ)ಕ್ಕೆ ಒಪ್ಪಿಸಬೇಕು ಎಂದು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ.
ಬಿಜಾಪುರ ಟು ಬೆಂಗಳೂರು ಯುವತಿ ಭಾಷೆ ಬದಲು ಹೇಗೆ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯು ತನಗೆ ರಕ್ಷಣೆ ನೀಡುವಂತೆ ಕೋರಿ 34 ಸೆಕೆಂಡ್ ಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಯುವತಿಯು ಮೊದಲಿನ ವಿಡಿಯೋದಲ್ಲಿ ಬಿಜಾಪುರದ ಭಾಷೆಯಲ್ಲಿ ಮಾತನಾಡಿದ್ದಾರೆ. ಆದರೆ ಇತ್ತೀಚಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಬೆಂಗಳೂರಿನ ಭಾಷೆಯಿದೆ. ದಿಢೀರನೇ ಈ ರೀತಿ ಭಾಷೆ ಬದಲಾಗಿದ್ದು ಹೇಗೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ತಾರ್ಕಿಕ ಅಂತ್ಯ ಕಾಣುವುದಕ್ಕೆ ಸಾಧ್ಯವಿಲ್ಲ ಎಂದು ಆರೋಪ
ರಾಜ್ಯದಲ್ಲಿ ಈ ಹಿಂದಿನ ಡ್ರಗ್ಸ್ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ವಹಿಸಲಾಗಿತ್ತು. ಅಂದು ಡ್ರಗ್ಸ್ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ತಂಡದಿಂದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಾಗಲಿಲ್ಲ. ಇಂಥ ಎಸ್ಐಟಿ ತಂಡದಿಂದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸುವುದಕ್ಕಾ ಆಗುವುದಿಲ್ಲ. ಹೀಗಾಗಿಯೇ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
Recommended Video
ಎಸ್ಐಟಿ ತಂಡದಲ್ಲಿ ಇರುವ ಅಧಿಕಾರಿಗಳು
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ಖಡಕ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಿಡಿ ಪ್ರಕರಣದ ತನಿಖೆ ನಡೆಸಲಿದೆ. ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಸಿಸಿಬಿ ಎಸಿಬಿ ಧರ್ಮೇಂದ್ರ, ಸಿಸಿಬಿ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಈ ಎಸ್ಐಟಿ ತಂಡದಲ್ಲಿದ್ದಾರೆ.