ಡಿಸೆಂಬರ್ 31ರಂದು ನಮ್ಮ ಕಾಂಗ್ರೆಸ್ ಪಕ್ಷದ ಉದಯ
ವಿಜಯಪುರ, ಡಿಸೆಂಬರ್ 26 : 'ಡಿಸೆಂಬರ್ 31ರಂದು ನಮ್ಮ ಕಾಂಗ್ರೆಸ್ ಪಕ್ಷ ಉದಯವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಹಲವಾರು ಪ್ರಮುಖ ನಾಯಕರು ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ' ಎಂದು ಕೋಲಾರ ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ನಮ್ಮ ಕಾಂಗ್ರೆಸ್ಸಿನಿಂದ 40 ಕ್ಷೇತ್ರಗಳಲ್ಲಿ ಸ್ಪರ್ಧೆ : ವರ್ತೂರು ಪ್ರಕಾಶ್
ಮಂಗಳವಾರ ವಿಜಯಪುರದ ನಿಡಗುಂದಿಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, 'ಡಿಸೆಂಬರ್ 31ರಂದು ನಮ್ಮ ಕಾಂಗ್ರೆಸ್ ಪಕ್ಷ ಬಸವನನಾಡು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸ್ಥಾಪನೆಯಾಗಲಿದೆ' ಎಂದರು.
'ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹಲವಾರು ಪ್ರಮುಖ ನಾಯಕರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಂದು ಸೇರ್ಪಡೆ ಆಗಲಿದ್ದಾರೆ. ಕಾಗ್ರೆಸ್ ಪಕ್ಷದಲ್ಲಿ ವಂಚಿತರಾದವರು, ದೀನ ದಲಿತರು, ಅಲ್ಪಸಂಖ್ಯಾತರು ನಮ್ಮ ಪಕ್ಷದ ಶಕ್ತಿ' ಎಂದರು.
'ಅಹಿಂದದಿಂದ ಗೆದ್ದು ಬಂದ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ದ್ರೋಹ'
'ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಹಿಂದುಳಿದ ವರ್ಗದವರು ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರು ಎರಡನೇ ಹಂತದ ನಾಯಕರಿಗೆ ಅವಕಾಶ ನೀಡುತ್ತಿಲ್ಲ' ಎಂದು ವರ್ತೂರು ಪ್ರಕಾಶ್ ಆರೋಪಿಸಿದರು.
'ಅಹಿಂದ ಹೆಸರಿನಲ್ಲಿ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡಲಾಗುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರನನ್ನು ಚುನಾವಣೆಗೆ ನಿಲ್ಲಿಸುವ ತಯಾರಿ ನಡೆಸಿದ್ದಾರೆ. ಅಹಿಂದ, ಶೋಷಿತ ವರ್ಗದವರನ್ನು ಗುರುತಿಸುವ ಕೆಲಸವನ್ನು ಅವರು ಮಾಡುತ್ತಿಲ್ಲ' ಎಂದು ದೂರಿದರು.
'ಸಿದ್ದರಾಮಯ್ಯ ಅನ್ನಕೊಟ್ಟಂತಹ ಸತೀಶ ಜಾರಕಿಹೊಳಿ ಅವರ ಖಾತೆಯನ್ನು ಕಸಿದುಕೊಂಡರು. ಎಚ್.ವಿಶ್ವನಾಥ್, ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯ ಅವರೇ ಕಾರಣ' ಎಂದು ವರ್ತೂರು ಪ್ರಕಾಶ್ ಹೇಳಿದರು.