ಮತ್ತೆ ಬಿಜೆಪಿಯತ್ತ ಹೊರಟ ಬಸನಗೌಡ ಪಾಟೀಲ ಯತ್ನಾಳ್
ವಿಜಯಪುರ, ಫೆಬ್ರವರಿ 05: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿ ಸೇರುವ ಸಾಧ್ಯತೆ ಇದೆ.
ಸ್ವತಃ ಅವರೇ ಈ ಬಗ್ಗೆ ಸುಳಿವು ನೀಡಿದ್ದು, ಕೇಂದ್ರ ನಾಯಕರೇ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ವಿಜಯಪುರದಲ್ಲಿ ಲಕ್ಷ ಜನರನ್ನು ಸೇರಿಸಿ ಕೇಂದ್ರದ ಮುಖಂಡರ ಎದುರು ಪಕ್ಷ ಸೇರುವ ಸಾಧ್ಯತೆ ಇದೆ ಎಂದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಬಿಜೆಪಿ ಸೇರುವುದಾದರೆ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತೇನೆ ತನ್ನ ಬಳಿ ಒಂದು ಶಕ್ತಿ ಇದೆ, ಅದನ್ನು ಬಿಜೆಪಿ ಉಪಯೋಗ ಪಡೆದುಕೊಳ್ಳಲಿ ಎನ್ನುವುದರಲ್ಲಿ ತಪ್ಪೇನಿದೆ' ಎಂದು ಹೇಳಿದರು.
ರಾಜಕೀಯದಲ್ಲಿ ಹಿಂದಿನ ಕೆಟ್ಟ ದಿನಗಳು ಹೋಗಿ ಮುಂದೆ ಎಲ್ಲ ನಮ್ಮ ಕೈಯಲ್ಲೆ ಸಿಕ್ಕರೂ ಸಿಗಬಹುದು ನಮ್ಮ ಬೇಡಿಕೆಗಳಿಗೆ ಒಪ್ಪಿಕೊಳ್ಳಲಾಗಿದೆ, ಸೇರ್ಪಡೆ ವೇಳೆ ಮಾಹಿತಿ ಕೊಡ್ತೇನೆ ಎಂದು ಅವರು ಹೇಳಿದ್ದಾರೆ.
ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬಂದಿದ್ದಾನೆ, ಈಗ ನನಗೆ ಏರುವ ಕಾಲ ಬಂದಿದೆ ಇನ್ನು ಐದು ವರ್ಷದಲ್ಲಿ ಕರ್ನಾಟಕದಲ್ಲಿ ವಿಜಯಪುರ ಇತಿಹಾಸದಲ್ಲಿ ಉಳಿಯುವ ಕೆಲಸ ಆಗಲಿದೆ ಎಂದು ಯತ್ನಾಳ್ ಹೇಳಿದರು.
'ಕೇಂದ್ರದ ನಾಯಕರು ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳಲೇಬೇಕು ಎಂದು ನಿರ್ಧರಿಸಿದ್ದಾರೆ, ಯಾವುದೇ ಭ್ರಷ್ಟಾಚಾರದಲ್ಲಿ, ಹಗರಣದಲ್ಲಿ ಇಲ್ಲದ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಅನುಕೂಲ ಆಗಲಿದೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ, ಹಾಗಾಗಿ ನನ್ನನ್ನು ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.