ಸಿದ್ದರಾಮಯ್ಯ ಸಂಪರ್ಕದಲ್ಲಿ ಇಬ್ಬರು ಅತೃಪ್ತರು: ಎಂಬಿ ಪಾಟೀಲ
ವಿಜಯಪುರ, ಜುಲೈ 27: ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಇಬ್ಬರು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಮಾಜಿ ಗೃಹಸಚಿವ ಎಂಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, 'ಇಬ್ಬರು ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರಿಗೆ ನಿರಂತರವಾಗಿ ಕರೆಗಳನ್ನು ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಆ ಕರೆಗಳನ್ನು ಸ್ವೀಕರಿಸುತ್ತಿಲ್ಲ' ಎಂದು ಹೇಳಿದರು.
ಈಗ ರಚನೆಯಾಗಿರುವ ಸರ್ಕಾರ ಅನೈತಿಕವಾದುದು. ಯಡಿಯೂರಪ್ಪ ಅವರು ದುರಾಸೆಯಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಡಿಯೂರಪ್ಪ ತಮ್ಮ ರಾಜೀಕೀಯ ಜೀವನದ ಕಟ್ಟಕಡೆಯ ಹಂತದಲ್ಲಿದ್ದಾರೆ. ತಾಳ್ಮೆ ವಹಿಸಿ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ವಿಶ್ವಾಸ ಅವರಲ್ಲಿಲ್ಲ. ಈ ಸರ್ಕಾರ ಆರು ತಿಂಗಳಿನಿಂದ ಒಂದು ವರ್ಷವಷ್ಟೇ ಆಯಸ್ಸು ಹೊಂದಿದೆ ಎಂದರು.
ಬಹುಮತವಿಲ್ಲದೆ ಸಿಎಂ ಆದವರು:
ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಲು ಬಹುಮತದ ಅಗತ್ಯವಿದೆ. ಆದರೆ, ಬಹುಮತ ಇಲ್ಲದೆಯೇ ಮುಖ್ಯಮಂತ್ರಿ ಆದವರು ಯಡಿಯೂರಪ್ಪ ಮಾತ್ರ. ಯಾವ ಅಧಾರದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಮುಂಬೈಗೆ ಹೊದವರಿಗೆ ಪಕ್ಷ ನಿಷ್ಠೆ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ತ್ಯಜಿಸಿದ ವಿಶ್ವನಾಥ್ ಅವರು ಪಕ್ಷ ನಿಷ್ಠೆಯನ್ನೂ ಬಿಟ್ಟಿದ್ದಾರೆ. ಒಂದು ಪಕ್ಷದಿಂದ ಗೆದ್ದು ರೆಸಾರ್ಟ್ನಲ್ಲಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.