ಧರ್ಮದ ಬಗ್ಗೆ ಮಾತನಾಡುವ ಪೇಜಾವರರು ದಲಿತರ ಜೊತೆ ಊಟ ಮಾಡಲಿ: ಎಂಬಿ ಪಾಟೀಲ್
ವಿಜಯಪುರ, ಆಗಸ್ಟ್ 3: ಉಡುಪಿ ಪೇಜಾವರ ಶ್ರೀ ಹಾಗೂ ಎಂಬಿ ಪಾಟೀಲ್ ನಡುವೆ ದೊಡ್ಡ ಸಮರವೇ ಏರ್ಪಟ್ಟಿದೆ.
ಧರ್ಮದ ವಿಚಾರವಾಗಿ ಇಬ್ಬರೂ ಹೋರಾಟದ ಕಣಕ್ಕಿಳಿದಿದ್ದಾರೆ. ಪೇಜಾವರ ಶ್ರೀಗಳು ಇತ್ತೀಚೆಗೆ ಲಿಂಗಾಯತ ಧರ್ಮದ ಬಗ್ಗೆ ಚರ್ಚಿಸಲು ಎಲ್ಲಾ ನಾಯಕರಿಗೂ ಪಂಥಾಹ್ವಾನ ನೀಡಿದ್ದರು. ಈ ಕುರಿತು ಗುಡುಗಿರುವ ಶಾಸಕ ಎಂಬಿ ಪಾಟೀಲ್ ನಮಗೆ ಪಂಥಾಹ್ವಾನ ನೀಡಲು ಅವರ್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಮಠದಲ್ಲಿನ ಹುಳುಕನ್ನು ಮೊದಲು ಸರಿಪಡಿಸಿಕೊಳ್ಳಲಿ ಅದನ್ನು ಬಿಟ್ಟು ಬೇರೆ ಧರ್ಮದಲ್ಲಿ ಕಡ್ಡಿಯಾಡಿಸಲು ಬಂದರೆ ಸರಿ ಇರುವುದಿಲ್ಲ. ಆದರೆ ಇಂತಹ ಕೆಲಸಕ್ಕೆ ನಾವು ಯಾವತ್ತೂ ಸಮ್ಮತಿ ಸೂಚಿಸುವುದಿಲ್ಲ ಎಂದು ಖಾರವಾಗಿಯೇ ನುಡಿದಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಎಂಬಿ ಪಾಟೀಲ್ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಧರ್ಮದ ಹೋರಾಟದಲ್ಲಿ ಬೇರೊಬ್ಬರು ಮೂಗು ತೂರಿಸುತ್ತಿರುವುದಕ್ಕೆ ಕೆಂಡಾಮಂಡಲವಾಗಿದ್ದಾರೆ.
ಧರ್ಮದ ಬಗ್ಗೆ ಮಾತನಾಡುವ ಪೇಜಾವರ ಶ್ರೀಗಳು ದಲಿತರ ಜೊತೆ ಮೊದಲು ಭೋಜನ ಮಾಡಬೇಕು, ತಮ್ಮ ಮಠಗಳಿಗೆ ದಲಿತ ಮಠಾಧಿಪತಿಯಾಗಲೀ ಅಥವಾ ಲಿಂಗಾಯತ ವ್ಯಕ್ತಿಗಳನ್ನಾಗಲಿ ಮಠಾಧೀಶರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪೇಜಾವರ ಶ್ರೀಗಳು, ಶಿವನನ್ನು ಆರಾಧಿಸುವವರೆಲ್ಲರೂ ಹಿಂದೂಗಳೇ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುವ ಎಂ.ಬಿ.ಪಾಟೀಲ್, ಎಸ್.ಎಂ.ಜಾಮ್ ಧಾರ್, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಧರ್ಮದ ವಿಚಾರದ ಬಗ್ಗೆ ಮಾತನಾಡಲಿ ಎಂದು ಪಂಥಾಹ್ವಾನ ನೀಡಿದ್ದರು.
ಧರ್ಮದ ಬಗ್ಗೆ ಚರ್ಚಿಸಲು ತಮಗೆ ಪಂಥಾಹ್ವಾನ ಕೊಡಲು ಪೇಜಾವರ ಶ್ರೀಗಳು ಯಾರು? ಅವರು ಕರೆದ ಕಡೆ ಹೋಗಲು ಅವರೇನೂ ದೇಶದ ಪ್ರಧಾನಿಯೋ ಅಥವಾ ಕಾಂಗ್ರೆಸ್ ಪಕ್ಷದ ಹೈಕಮಾಂಡೋ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿ, ಪೇಜಾವರ ಶ್ರೀಗಳು ಪಂಥಾಹ್ವಾನ ನೀಡುವುದನ್ನು ಬಿಟ್ಟು ಲಿಂಗಾಯತ ಧರ್ಮದ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಕಿಡಿಕಾರಿದ್ದರು. ಇದೀಗ ಪೇಜಾವರರ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.