ರೈಲು ನಿಲ್ದಾಣದಲ್ಲಿ ಸಿಗಲಿದೆ ರೊಟ್ಟಿ, ಚಟ್ನಿ, ಉಪ್ಪಿನಕಾಯಿ!
ವಿಜಯಪುರ ಜು.5: ವಿಜಯಪುರ ರೈಲು ನಿಲ್ದಾಣಕ್ಕೆ ತೆರಳುವವರು ಇಲ್ಲವೇ ಆ ನಿಲ್ದಾಣ ಮಾರ್ಗದಲ್ಲಿ ಹಾದು ಹೋಗುವ ಪ್ರಯಾಣಿಕರು ರೊಟ್ಟಿ ಸವಿಯಬಹುದಾಗಿದೆ. ಒಂದು ನಿಲ್ದಾಣ, ಒಂದು ಉತ್ಪನ್ನ ಯೋಜನೆ ಅಡಿ ರೊಟ್ಟಿ, ಚಟ್ನಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಕೈಗೆಟುವ ಬೆಲೆಗೆ ಆ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳೆದ ಅಥವಾ ತಯಾರಿಸಿದ ಕರಕುಶಲ ವಸ್ತು, ಆಹಾರ ಪದಾರ್ಥಗಳನ್ನು ರೈಲು ನಿಲ್ದಾಣದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಕೇಂದ್ರ ಬಜೆಟ್ 2022-23ರಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆ ಘೋಷಣೆ ಮಾಡಲಾಗಿತ್ತು.
ರೈಲು ಸಂಚಾರ ರದ್ದು: ಹೆಚ್ಚು ಹಣ ವ್ಯಯಿಸುತ್ತಿರುವ ಪ್ರಯಾಣಿಕರು
ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಕರಕುಶಲ ವಸ್ತುಗಳ ಜೊತೆ ಲಿಂಬೆ, ಲಿಂಬೆ ಉಪ್ಪಿನಕಾಯಿ, ಜೋಳದ ರೊಟ್ಟಿ ಸೇರಿದಂತೆ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲು ತೀರ್ಮಾನಿಸಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ನಿಲ್ದಾಣಗಳ ಪೈಕಿ ಲಿಂಬೆ, ಲಿಂಬೆ ಉಪ್ಪಿನಕಾಯಿ, ಜೋಳದ ರೊಟ್ಟಿ ಆಹಾರೋತ್ಪನ್ನಗಳ ಮಾರಾಟ ಈ ನಿಲ್ದಾಣದಲ್ಲಿ ಮೊದಲು ಅವಕಾಶ ನೀಡಲಾಗಿದೆ.
'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯನ್ನು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ತನ್ನ ವ್ಯಾಪ್ತಿಯ ವಿಜಯಪುರ ಸೇರಿದಂತೆ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ 71 ರೈಲು ನಿಲ್ದಾಣಗಳಿಗೆ ವಿಸ್ತರಿಸಲು ಈಗಾಗಲೇ ತೀರ್ಮಾನಿಸಿದೆ. ಇದರಿಂದ ರೈತರಿಗೆ, ಉತ್ಪಾದಕರಿಗೆ ಅನುಕೂಲವಾಗಲಿದ್ದು, ಉದ್ಯೋಗ ಸೃಷ್ಟಿ ಆಗಲಿದೆ.
ಬೈಯಪ್ಪನಹಳ್ಳಿ ಟರ್ಮಿನಲ್ನಿಂದ ಓಡಲಿವೆ 6 ರೈಲು, ಪಟ್ಟಿ
ಉಪ್ಪಿನಕಾಯಿ, ಚಟ್ನಿ, ರೊಟ್ಟಿ ಮಾರಾಟ
ಯೋಜನೆಯ ಅಡಿಯಲ್ಲಿ ಪ್ರಾಯೋಗಿಕವಾಗಿ ವಿಜಯಪುರ ನಿಲ್ದಾಣದಲ್ಲಿ ಲಿಂಬೆ, ಲಿಂಬೆ ಉಪ್ಪಿನಕಾಯಿ, ಜೋಳದ ರೊಟ್ಟಿ, ಕಡಲೆಕಾಯಿ ಚಟ್ನಿ ಹಾಗೂ ಇನ್ನಿತರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ನಿಲ್ದಾಣದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
15 ದಿನದ ಅವಧಿಗೆ ಅವಕಾಶ
ಯೋಜನೆಯಡಿ ಉತ್ಪನ್ನ ಮಾರಾಟ ಮಾಡುವ ಉತ್ಪಾದಕರು ಮೊದಲು ನಿಲ್ದಾಣ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕು. ನಿಲ್ದಾಣಗಳಲ್ಲಿನ ಮಳಿಗೆ ಬಳಕೆಗಾಗಿ 15 ದಿನಗಳ ಅವಧಿಗೆ 1000 ರೂ. ನೀಡಿ ಮಳಿಗೆ ಬಳಸಬಹುದು. ಸದ್ಯಕ್ಕೆ ಮಾರಾಟಕ್ಕಾಗಿ 15 ದಿನ ಮಾತ್ರವೆ ಅವಕಾಶ ನೀಡಲಾಗಿದೆ. ವ್ಯಾಪಾರಿ ಎರಡು ವಾರದ ನಂತರ ಮತ್ತೆ ಮಾರಾಟಕ್ಕಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಯಾವುದೇ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ ಎಂದು ವಿಜಯಪುರ ರೈಲು ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರುಚಿಗೆ ಹೆಸರುವಾಸಿಯಾಗಿರುವ ಈ ಭಾಗದ ಕೊಲ್ಹಾರ್ ಮೊಸರು ಉತ್ಪಾದಕರು ಮಾರಾಟಗಾರರನ್ನು ಸಂಪರ್ಕಿಸಿದರು. ಆದರೆ ಈ ಮೊಸರು ಮಾರಾಟದ ಪ್ರಸ್ತಾವನೆಯನ್ನು ಯಾರು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.
ಸಾಗಾಣೆ ವೆಚ್ಚ ಹೆಚ್ಚಳದಿಂದ ಹಿಂದೇಟು
ಉತ್ತರ ಕರ್ನಾಟಕದ ಬಸವನ ಬಾಗೇವಾಡಿಯಲ್ಲಿ ರೈಲು ನಿಲ್ದಾಣವಿದೆ. ಆದರೆ ಕೊಲ್ಹಾರದಲ್ಲಿ ರೈಲು ನಿಲ್ದಾಣ ಇಲ್ಲ. ಕೊಲ್ಹಾರದಿಂದ ರೈಲು ನಿಲ್ದಾಣಕ್ಕೆ ಬರುವ ಸಾಗಾಣೆ ವೆಚ್ಚದ ಅಧಿಕವಾಗುತ್ತದೆ. ಹೀಗಾಗಿ ಮೊಸರು ಮಾರಾಟ ಮಾಡಲು ವ್ಯಾಪಾರಿಗಳು ಹಿಂದೇಟು ಹಾಕಿದ್ದಾರೆ. ಸಾಧ್ಯವಾದರೆ ಈ ಮೊಸರು ಪ್ರಸ್ತಾವನೆ ಪುನಃ ಪರಿಶೀಲಿಸುವಂತೆ ನಿಲ್ದಾಣದಲ್ಲಿನ ಮಾರಾಟಗಾರರಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವಸ್ತುಗಳ ಮಾರಾಟದಲ್ಲಿ ಆಸಕ್ತಿವುಳ್ಳವರು ವಿಜಯಪುರ ರೈಲು ನಿಲ್ದಾಣದ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಯೋಜನೆಗೆ ವ್ಯಾಪಕ ಸ್ಪಂದನೆ
ಹುಬ್ಬಳ್ಳಿಯ ಶ್ರೀ ಸಿದ್ದರೂಢ ಸ್ವಾಮೀಜಿ ನಿಲ್ದಾಣದಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಗೆ ವ್ಯಾಪಕ ಸ್ಪಂದನೆ ದೊರೆತಿದೆ. ಇದೇ ರೀತಿ ರೈಲು ನಿಲ್ದಾಣಗಳ ಮೂಲಕ ಜನಪ್ರಿಯಗೊಳಿಸಲು, ದೇಶದ ಆಹಾರ, ಸಂಸ್ಕೃತಿ ಪರಂಪರೆ ಪ್ರಯಾಣಿಕರಿಗೆ ತಲುಪಿಸುವ ಉದ್ದೇಶ ಹೊಂದಿರುವ ಯೋಜನೆ ನೈಋತ್ಯ ರೈಲ್ವೆ ಇಲಾಖೆ ವ್ಯಾಪ್ತಿಯ ಅನೇಕ ನಿಲ್ದಾಣಗಳಲ್ಲಿ ಜಾರಿ ಆಗಿದೆ.
Recommended Video