ಡಿಸಿಎಂ ಸ್ಥಾನಗಳನ್ನು ಕೈಬಿಡುವಂತೆ ಸ್ವಪಕ್ಷದ ಶಾಸಕರಿಂದಲೇ ಒತ್ತಾಯ
ವಿಜಯಪುರ, ಡಿಸೆಂಬರ್ 12: ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ಇನ್ನೂ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಚಿಂತನೆ ನಡೆಸುತ್ತಿರುವ ಬಿಜೆಪಿಗೆ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ಬಿಜೆಪಿ ಶಾಸಕ, ಮಾಜಿ ಕೇಂದ್ರ ಮಂತ್ರಿ ಬಸನಗೌಡ ಪಾಟೀಲ್ ಅವರು, ತಮ್ಮದೇ ಪಕ್ಷದ ಸರ್ಕಾರದ ಕಿವಿ ಹಿಂಡಿದ್ದು, ಡಿಸಿಎಂ ಹುದ್ದೆಗಳನ್ನು ಕೈಬಿಡಿ ಎಂದು ಒತ್ತಾಯಿಸಿದ್ದಾರೆ.
ಡಿಸಿಎಂ ಹುದ್ದೆ ಬೇಡ, ನಾನು ಸಿಎಂ ಹುದ್ದೆ ಆಕಾಂಕ್ಷಿ: ಉಮೇಶ್ ಕತ್ತಿ
'ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಸಾಕು, ಉಪಮುಖ್ಯಮಂತ್ರಿಗಳು ಬೇಡ, ಮೂರು-ಮೂರು ಉಪಮುಖ್ಯಮಂತ್ರಿಗಳು ಏಕೆ ಬೇಕು?' ಎಂದು ಪ್ರಶ್ನೆ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆಗೆ ಸಂವಿಧಾನಿಕ ಗೌರವ ಇಲ್ಲ, ರಾಜ್ಯದಲ್ಲಿ ಸೃಷ್ಟಿಸಿರುವ ಮೂರು ಉಪಮುಖ್ಯಮಂತ್ರಿ ಸ್ಥಾನವನ್ನು ಆದಷ್ಟು ಶೀಘ್ರ ಕೈಬಿಡಬೇಕು, ಅವರು ಮಂತ್ರಿಗಳಾಗಿರಲಿ ಸಾಕು' ಎಂದು ಯಾತ್ನಾಳ್ ಹೇಳಿದ್ದಾರೆ.
ತಮಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಯಾತ್ನಾಳ್, 'ಯಡಿಯೂರಪ್ಪ ಅವರು ಸೂಕ್ತ ಸ್ಥಾನ-ಮಾನ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ, ಕೊಟ್ಟರೆ ಸಂತೋಶ, ಕೊಡದೇ ಇದ್ದರೆ ಪರವಾಗಿಲ್ಲ' ಎಂದಿದ್ದಾರೆ.
"ನಾನಂತೂ ಸಚಿವ ಸ್ಥಾನ ಕೇಳಿಲ್ಲ, ಖಾತೆ ಬಗ್ಗೆ ಮಾತೇ ಇಲ್ಲ"
'ಗೂಟದ ಕಾರಿಗಾಗಿ ಮಂತ್ರಿಗಿರಿಗೆ ಆಸೆ ಪಟ್ಟವನಲ್ಲ, ಜಿಲ್ಲೆಯ ಅಭಿವೃದ್ಧಿ ನನಗೆ ಮುಖ್ಯ, ಜಿಲ್ಲೆಯ ಅಭಿವೃದ್ಧಿಗೆ ಇಂದು ಸಾವಿರಾರು ಕೋಟಿ ಬರುತ್ತಿದೆ, ಅಷ್ಟೇ ಸಾಕು' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬಿಜೆಪಿಯ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಚುನಾವಣೆ ಮುಗಿದ ಬೆನ್ನಲ್ಲೇ ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಚರ್ಚೆ ಎದ್ದಿದೆ.