ಮೈತ್ರಿ ಸರ್ಕಾರ ಸುಭದ್ರ, 4 ವರ್ಷ ಪೂರೈಸುತ್ತೇವೆ : ಎಂ.ಬಿ.ಪಾಟೀಲ
ವಿಜಯಪುರ, ಜುಲೈ 02 : 'ಈಗ ಸಂಖ್ಯಾಬಲ ನಮ್ಮ ಕಡೆ ಇದೆ. ಹೀಗಾಗಿ ಅಧಿಕಾರ ನಡೆಸುತ್ತೇವೆ. ನಾಲ್ಕು ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಮಂಗಳವಾರ ವಿಜಯಪುರದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್ ಅವರು, 'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕನಿಷ್ಠ 15 ಶಾಸಕರು ರಾಜೀನಾಮೆ ನೀಡಬೇಕು. ಅಷ್ಟು ಶಾಸಕರು ಯಾವ ಕಾಲಕ್ಕೂ ರಾಜೀನಾಮೆ ಕೊಡುವುದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ : ಯಾರು, ಏನು ಹೇಳಿದರು?
'ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರ ಕಳುಹಿಸಿದ ಮಾತ್ರಕ್ಕೆ ಅಂಗೀಕಾರವಾಗುವುದಿಲ್ಲ. ಅವರು ಖುದ್ದಾಗಿ ಬಂದು ಸ್ಪೀಕರ್ಗೆ ರಾಜೀನಾಮೆ ಪತ್ರ ನೀಡಬೇಕು' ಎಂದು ಎಂ.ಬಿ.ಪಾಟೀಲ್ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಇಬ್ಬರು ಶಾಸಕರ ರಾಜೀನಾಮೆ : ರಾಹುಲ್ಗೆ ಸಿದ್ದರಾಮಯ್ಯ ಕರೆ
ಕೆ.ಎಸ್.ಈಶ್ವರಪ್ಪ ದೊಡ್ಡವರು, ಮೇಧಾವಿಗಳು ಎಂದು ಲೇವಡಿ ಮಾಡಿದ ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಈಗ ಉದ್ಭವಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.....
ಬಿಜೆಪಿ ಸರ್ಕಾರ ರಚನೆ ಬಗ್ಗೆ ರವಿ ಕುಮಾರ್ ಹೇಳಿದ್ದೇನು?
ಕೆ.ಎಸ್.ಈಶ್ವರಪ್ಪಗೆ ತಿರುಗೇಟು
ಬಿಜೆಪಿ ನಾಯಕರ ಕೆ.ಎಸ್.ಈಶ್ವರಪ್ಪ ಅವರ 'ಇನ್ನೂ ನಾಲ್ಕು ಜನ ಶಾಸಕರು ರಾಜೀನಾಮೆ ನೀಡುವ ಬಗ್ಗೆ ಎಂ.ಬಿ.ಪಾಟೀಲರಿಗೆ ಮಾಹಿತಿ ಇದೆ' ಎಂಬ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವರು, 'ಈಶ್ವರಪ್ಪ ಅವರಷ್ಟು ಇಂಟೆಲಿಜೆನ್ಸಿ ನೆಟ್ವರ್ಕ್ ನಮ್ಮದಿಲ್ಲ. ಅವರು ದೊಡ್ಡವರು, ಮೇಧಾವಿಗಳು ಹೀಗಾಗಿ ಅವರನ್ನೇ ಕೇಳಿ' ಎಂದರು.
ಎಂ.ಬಿ.ಪಾಟೀಲ ಮುಖ್ಯಮಂತ್ರಿಯಾಗಲಿ
ಗೋವಾ ವಿಧಾನಸಭೆ ಉಪ ಸಭಾಧ್ಯಕ್ಷ ಮೈಕಲ್ ಲೊಬೊ ಅವರು, 'ದೇಶದ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಅದೇ ರೀತಿ ಎಂ.ಬಿ.ಪಾಟೀಲ ಅವರಿಗೂ ಒಳ್ಳೆಯದಾಗಲಿ. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿ' ಎಂದು ಹೇಳಿದ್ದಾರೆ.
ಎಂ.ಬಿ.ಪಾಟೀಲ ಸ್ಪಷ್ಟನೆ
ಮೈಕಲ್ ಲೊಬೊ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಂ.ಬಿ.ಪಾಟೀಲ ಅವರು, 'ಅವರು ನನ್ನ ಆತ್ಮೀಯ ಸ್ನೇಹಿತರು. ಅವರ ಪಕ್ಷ ಬೇರೆ, ನನ್ನ ಪಕ್ಷ ಬೇರೆ. ಸ್ನೇಹದ ಪ್ರತೀಕವಾಗಿ ಅವರು ಶುಭ ಹಾರೈಸಿದ್ದಾರೆ. ಒಂದಲ್ಲ ಒಂದು ದಿನ ಸಿಎಂ ಆಗಬೇಕು. ಇದಕ್ಕೆ ನೀವು ಈಗಲೇ ಬಣ್ಣಕೊಟ್ಟೆರೆ ಉಪಯೋಗವಿಲ್ಲ' ಎಂದರು.
ನಾವು ಬಯಸಿದರೆ ಸಿಎಂ ಆಗುವುದಿಲ್ಲ
ಮುಖ್ಯಮಂತ್ರಿಯಾಗುವ ಕುರಿತು ಮಾತನಾಡಿದ ಎಂ.ಬಿ.ಪಾಟೀಲ ಅವರು, 'ನಾವು ಬಯಸಿದರೆ ಸಿಎಂ ಆಗಲು ಆಗುವುದಿಲ್ಲ. ಜನರು ತೀರ್ಮಾನ ಮಾಡಬೇಕು. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು. ಪಕ್ಷ ನಿರ್ಣಯ ತೆಗೆದುಕೊಳ್ಳಬೇಕು, ಶಾಸಕರು ತೀರ್ಮಾನ ತೆಗೆದುಕೊಳ್ಳಬೇಕು' ಎಂದರು.