ಸಿಂಧಗಿ ಉಪ ಚುನಾವಣೆ ಚಿತ್ರಣ ಬದಲಿಸಿದ ಜೆಡಿಎಸ್!
ವಿಜಯಪುರ, ಅಕ್ಟೋಬರ್ 12; ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಕ್ಟೋಬರ್ 30ರಂದು ನಡೆಯಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಜೆಡಿಎಸ್ ಕ್ಷೇತ್ರದ ಚುನಾವಣಾ ಚಿತ್ರಣವನ್ನೇ ಬದಲಿಸಿದೆ.
ಸಿಂಧಗಿ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 13 ಕೊನೆ ದಿನವಾಗಿದೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಎಲ್ಲಾ ನಾಮಪತ್ರ ಕ್ರಮಬದ್ಧ; ಕುತೂಹಲ ಕೆರಳಿಸಿದ ಸಿಂಧಗಿ ಉಪ ಚುನಾವಣೆ
ಉಪ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್, ಬಿಜೆಪಿ ನಡುವೆ ನೇರ ಪೈಪೋಟಿ ಜೆಡಿಎಸ್ ಲೆಕ್ಕಕ್ಕಿಲ್ಲ ಎಂಬ ಮಾತು ಹಬ್ಬಿತ್ತು. ಆದರೆ ಮಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಚುನಾವಣಾ ಚಿತ್ರಣವನ್ನು ಬದಲಿಸಿದೆ.
ಸಿಂಧಗಿ ಕ್ಷೇತ್ರದ ಉಪ ಚುನಾವಣೆ; ಸ್ಪಷ್ಟನೆ ಕೊಟ್ಟ ಲಕ್ಷ್ಮಣ ಸವದಿ
2018ರಲ್ಲಿ ಜೆಡಿಎಸ್ನ ಎಂ. ಸಿ. ಮನಗೂಳಿ ಕ್ಷೇತ್ರದಲ್ಲಿ ಗೆದ್ದಿದ್ದರು. ಕಾಂಗ್ರೆಸ್ ಪಕ್ಷ 3ನೇ ಸ್ಥಾನಕ್ಕೆ ಕುಸಿದಿತ್ತು. ಎಂ. ಸಿ. ಮನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ನಿಂದ ಎಂ. ಸಿ. ಮನಗೂಳಿ ಕುಟುಂಬದವರು ಅಭ್ಯರ್ಥಿಗಳಲ್ಲ.
ಉಪ ಚುನಾವಣೆ ಉಸ್ತುವಾರಿ; ಸ್ಪಷ್ಟನೆ ಕೊಟ್ಟ ವಿಜಯೇಂದ್ರ
ಉಪ ಚುನಾವಣೆ ಅಭ್ಯರ್ಥಿಗಳು
ಕಾಂಗ್ರೆಸ್ನಿಂದ ಅಶೋಕ ಮನಗೂಳಿ, ಬಿಜೆಪಿಯಿಂದ ರಮೇಶ ಭೂಸನೂರು, ಜೆಡಿಎಸ್ನಿಂದ ನಾಜಿಯಾ ಅಂಗಡಿ ಅಭ್ಯರ್ಥಿಗಳು. ಕ್ಷೇತ್ರದ ಚುನಾವಣಾ ಚಿತ್ರಣವನ್ನು ಗಮನಿಸಿದರೆ ಯಾವ ಅಭ್ಯರ್ಥಿಗೂ ಗೆಲುವು ಅಷ್ಟು ಸುಲಭವಲ್ಲ. ಎಂ. ಸಿ. ಮನಗೂಳಿ ಕುಟುಂಬದವರನ್ನು ಪಕ್ಷಕ್ಕೆ ಸೆಳೆದು ಕಾಂಗ್ರೆಸ್ ದಾಳ ಉರುಳಿಸಿದರೆ, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ಕಾಂಗ್ರೆಸ್ ಮತ ಬ್ಯಾಂಕಿಗೆ ಕೈ ಹಾಕಿದೆ. ಕಳೆದ ಚುನಾವಣೆಯಲ್ಲಿ 22,818 ಮತಗಳನ್ನು ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದರು. ಆದರೆ ಈ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ.
ಬಿಜೆಪಿಗೆ ಪ್ಲಸ್ ಪಾಯಿಂಟ್ ಏನು?
2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 61,560 ಮತಗಳನ್ನು ಪಡೆದ ರಮೇಶ ಭೂಸನೂರು ಈಗ ಪುನಃ ಬಿಜೆಪಿಯ ಅಭ್ಯರ್ಥಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇರುವುದು ಪಕ್ಷದ ದೊಡ್ಡ ಪ್ಲಸ್ ಪಾಯಿಂಟ್. ಗಾಣಿಗ ಸಮುದಾಯ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ಬಿಜೆಪಿಗೆ ಅನುಕೂಲಕರವಾಗಬಹುದು. ಎಲ್ಲಾ ಸಮುದಾಯದ ಜೊತೆ ಹೊಂದಿಕೊಂಡು ಹೋಗುವ ಗುಣವನ್ನು ಅಭ್ಯರ್ಥಿ ಹೊಂದಿದ್ದಾರೆ. ಆದರೆ ಬೆಲೆ ಏರಿಕೆ, ಬಿಜೆಪಿ ಆಡಳಿತದ ಬಗ್ಗೆ ಜನರಿಗೆ ಇರುವ ಆಕ್ರೋಶ ಉಪ ಚುನಾವಣೆಯಲ್ಲಿ ಪ್ರಭಾವ ಬೀರಲಿದೆಯೇ? ಕಾದು ನೋಡಬೇಕಿದೆ.
ಎಂ. ಸಿ. ಮನಗೂಳಿ ಕುಟುಂಬ ಕಾಂಗ್ರೆಸ್ಗೆ
ಜೆಡಿಎಸ್ ನಾಯಕರಾಗಿದ್ದ ಎಂ. ಸಿ. ಮನಗೂಳಿ ನಿಧನದ ಬಳಿಕ ಅವರ ಕುಟುಂಬ ಕಾಂಗ್ರೆಸ್ ಸೇರಿದೆ. ಎಂ. ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿ. ತಂದೆಯ ಸಾವಿನ ಅನುಕಂಪ ಪಕ್ಷದ ಪರವಾಗಿ ಕೆಲಸ ಮಾಡಬಹುದು. ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪಂಚಮಸಾಲಿ ಸಮಾಜದ ಮತದಾರರು ಇದ್ದು ಕಾಂಗ್ರೆಸ್ ಪಕ್ಷಕ್ಕೆ ಸಹಾಯಕವಾಗಬಹುದು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಚುನಾವಣೆಯಲ್ಲಿ ಮೌನಕ್ಕೆ ಶರಣಾದರೆ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಜೆಡಿಎಸ್ ಕ್ಷೇತ್ರವನ್ನು ಮರಳಿ ಪಡೆಯುತ್ತಾ?
ಎಂ. ಸಿ. ಮನಗೂಳಿ ಕುಟುಂಬದವರು ಕಾಂಗ್ರೆಸ್ ಸೇರುತ್ತಿದ್ದಂತೆ ಕ್ಷೇತ್ರದಲ್ಲಿ ಜೆಡಿಎಸ್ ಕಥೆ ಮುಗಿಯಿತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ ನಾಜಿಯಾ ಅಂಗಡಿಗೆ ಟಿಕೆಟ್ ಕೊಡುವ ಮೂಲಕ ಕ್ಷೇತ್ರದ ಮುಸ್ಲಿಂ ಮತಗಳಿಗೆ ಜೆಡಿಎಸ್ ಕೈ ಹಾಕಿದೆ. ನಾಜಿಯಾ ಅಂಗಡಿಗೆ ರಾಜಕೀಯ ಹೊಸದು. ಅವರ ಮಾವ ರಾಜಕೀಯದಲ್ಲಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಗೆದ್ದಿರುವುದು ಈ ಉಪ ಚುನಾವಣೆಯಲ್ಲಿ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವಿದೆ.