ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳ ಮೇಲೆ ಗುಂಡು: ಯತ್ನಾಳ್
ವಿಜಯಪುರ, ಜು.26: ಬುದ್ಧಿಜೀವಿಗಳಿಂದ ನಮ್ಮ ದೇಶ ಹಾಳಾಗಿದೆ ಒಂದೊಮ್ಮೆ ನಾನು ಗೃಹಮಂತ್ರಿಯಾಗಿದ್ದರೆ ಬುದ್ಧಿಜೀವಿಗಳನ್ನು ಗುಂಡಿಟ್ಟು ಕೊಲೆ ಮಾಡಿಸುತ್ತಿದ್ದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ವಿಜಯಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿರೋ ಬುದ್ಧಿಜೀವಿಗಳಿಂದಲೇ ದೇಶ ಹಾಳಾಗಿದೆ, ನಾನು ಏನಾದರೂ ಗೃಹಮಂತ್ರಿಯಾಗಿದ್ದರೆ ಅವ್ರಿಗೆ ಗುಂಡು ಹಾರಿಸಿ ಅಂತಿದ್ದೆ, ಪ್ರಧಾನಿ ಮೋದಿಗೂ ಆ ಆಸೆ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಬುರ್ಖಾ ಧರಿಸಿದವರನ್ನು ಕಚೇರಿಗೆ ಸೇರಿಸಲ್ಲ ಎಂದ ಶಾಸಕ ಯತ್ನಾಳ್
ಸೈನಿಕರು ಸಾಯೋಕೆ ಗಡಿಗೆ ಹೋಗ್ತಾರೆ ಎಂದು ದಿನೇಶ್ ಅಮೀನ್ಮಟ್ಟು ಹೇಳಿಕೆ ನೀಡುತ್ತಾರೆ ಅಷ್ಟು ಕಷ್ಟಪಟ್ಟು ಗಡಿಯನ್ನು ಕಾದು, ಉಗ್ರರ ಜೊತೆಗೆ ಸೆಣೆಸಾಡಿ ನಮ್ಮನ್ನು ಭದ್ರವಾಗಿರಿಸುವ ಸೈನಿಕರ ಮಹತ್ವ ಅವರಿಗೆ ತಿಳಿದಿಲ್ಲ.
ನಮ್ಮ ದೇಶದಲ್ಲೂ ಸೇನೆ ಸೇರುವ ವ್ಯವಸ್ಥೆ ಜಾರಿಯಾಗಬೇಕಿದೆ, ನಮ್ಮ ಸೈನಿಕರಿಗೆ ಭೂಪಟದಲ್ಲಿ ಪಾಕಿಸ್ತಾನ ಇಲ್ಲದೆ ರೀತಿ ಮಾಡುವ ತಾಕತ್ತಿದೆ, ಕೆಲವೊಂದು ದೇಶದ್ರೋಹಿ ಸಂಘಟನೆಗಳಿಂದ ದೇಶ ಹಾಳಾಗುತ್ತಿದೆ. ಅದರ ಮಧ್ಯೆ ರಾಜಕಾರಣಿಗಳು ಕೂಡ ದೇಶವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದರು.
1947ರಲ್ಲೇ ಪಾಕಿಸ್ತಾನಕ್ಕೆ ಏನು ಬೇಕೋ ಅದನ್ನು ಕೊಟ್ಟಿದ್ದೇವೆ, ಪಾಕಿಸ್ತಾನ ಹೇಡಿಗಳ ಕೆಲಸವನ್ನು ಮಾತ್ರ ಮಾಡೋದು, ಪಾಕಿಸ್ತಾನ ಭಾರತದ ವಿರುದ್ಧ ಯಾವಾಗಲೂ ಗೆದ್ದಿಲ್ಲ, ನಮ್ಮ ದೇಶದಲ್ಲೂ ಸೇನೆ ಸೇರುವ ವ್ಯವಸ್ಥೆ ಜಾರಿಯಾಗಬೇಕಿದೆ.ನಮ್ಮ ಸೈನಿಕರು 60 ಡಿಗ್ರಿ ಸೆಲ್ಸಿಯಸ್ನಲ್ಲಿ ಕೆಲಸ ಮಾಡುತ್ತಾರೆ, ಸರ್ದಾರ್ ಪಟೇಲ್ ಬದುಕಿದ್ದರೆ ಜಮ್ಮು-ಕಾಶ್ಮೀರದಲ್ಲಿ 370 ಕಾಯ್ದೆ ಜಾರಿಯಲ್ಲಿರುತ್ತಿರಲಿಲ್ಲ ಎಂದರು.