2024 ಕ್ಕೆ ನಾನೇ ಸಿಎಂ: ಕುರ್ಚಿ ಮೇಲೆ ಕರ್ಚೀಫ್ ಹಾಕಿದ ಬಿಜೆಪಿ ಶಾಸಕ
ವಿಜಯಪುರ, ಜನವರಿ 01: '2024 ಕ್ಕೆ ನಾನೇ ಸಿಎಂ ಆಗ್ತೀನಿ, ಅದು ನನ್ನ ಹಣೆಬರಹದಲ್ಲಿ ಬರೆದಿದ್ದರೆ ಯಾರೂ ಕಸಿದುಕೊಳ್ಳಲು ಆಗೊಲ್ಲ' ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, 'ಲಕ್ಷ್ಮಣ ಸವದಿ ಹಣೆಯಲ್ಲಿ ಡಿಸಿಎಂ ಆಗಬೇಕು ಎಂದು ಬರೆದಿದೆ ಅದಕ್ಕೆ ಆಗಿದ್ದಾರೆ, ಡಿಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಬರೆದಿದ್ದರೆ ಅವರೇ ಮುಂದುವರೆಯುತ್ತಾರೆ' ಎಂದು ಹೇಳಿದರು.
ಡಿಸಿಎಂ ಸ್ಥಾನಗಳನ್ನು ಕೈಬಿಡುವಂತೆ ಸ್ವಪಕ್ಷದ ಶಾಸಕರಿಂದಲೇ ಒತ್ತಾಯ
ಸಚಿವ ಸ್ಥಾನಕ್ಕಾಗಿ ಲಾಭಿ ನಡೆಯುತ್ತಿರುವ ವಿಷಯದ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, 'ಉಮೇಶ್ ಕತ್ತಿ ಅವರು ಸಿಎಂ ಸುತ್ತಾ ಗಿರಕಿ ಹೊಡೆಯುವ ಅವಶ್ಯಕತೆ ಇಲ್ಲ, ಅವರು ಸಚಿವರಾಗುವುದು ಗ್ಯಾರೆಂಟಿ' ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಸಚಿವ ಸ್ಥಾನ ಆಕಾಂಕ್ಷಿ ಆಗಿದ್ದು, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಆದರೆ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಕಷ್ಟವೆನ್ನಲಾಗುತ್ತಿದೆ.