ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ಜೋಡೆತ್ತು ಯತ್ನ: ಬಸನಗೌಡ ಪಾಟೀಲ್
ವಿಜಯಪುರ, ಡಿಸೆಂಬರ್ 04: ಕಾಂಗ್ರೆಸ್ ನಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನನ್ನು ಮೂಲೆಗುಂಪು ಮಾಡಲು ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಎಂಬ ಜೋಡೆತ್ತುಗಳು ವ್ಯೆವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಬುಧವಾರ ವಿಜಯಪುರ ನಗರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಜೋಡೆತ್ತಿನ ಸಭೆಯ ಉದ್ದೇಶವೆನೆಂದರೆ ಸಿದ್ದರಾಮಯ್ಯನನ್ನು ಬದಿಗೆ ಸರಿಸಿ ನಾವು ಅಧಿಕಾರಕ್ಕೆ ಬರಬೇಕು ಎಂದು ಮಸಲತ್ತು ಮಾಡಿದ್ದಾರೆ ಎಂದರು.
ನಾನು ಯಾರಿಗೂ ಹೆದರೊಲ್ಲ: ಬಿಜೆಪಿ ನೋಟಿಸ್ಗೆ ಯತ್ನಾಳ್ ಸೆಡ್ಡು
ಈ ಜೋಡೆತ್ತುಗಳ ಕುತಂತ್ರ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ, ಕುಮಾರಸ್ವಾಮಿ ಮತ್ತು ಶಿವಕುಮಾರ್ ಅವರ ಕುತಂತ್ರ ವಿಫಲವಾಗಲಿದೆ ಎಂದು ತಿಳಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಳ್ಳಬೇಕು, ಇದರಿಂದ ನಿಮಗೆ ಅನುಕೂಲವಾಗಲಿದೆ ಎಂದು ಬಸನಗೌಡ ಪಾಟೀಲ್ ವಿನಂತಿಸಿದರು.
ದಿನೇಶ್ ಗುಂಡೂರಾವ್ ಅವರಿಗೆ ಬಿಜೆಪಿಯ ಸಾಧನೆ ನೋಡಿ ಭಯವಾಗಿದೆ, ಅವರ ಕೈಯಲ್ಲಿ ಶಾಸಕರು ನಿಲ್ಲುತ್ತಿಲ್ಲ, ಅವರ ಸ್ಥಾನವೇ ಗಟ್ಟಿಯಾಗಿ ಉಳಿದಿಲ್ಲ, ನಾಮಕಾವಸ್ಥೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಯಲ್ಲೂ ಶಾಸಕರು ಇಲ್ಲ, ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರಿಗೆ ವಾಸ್ತವ ಚಿತ್ರಣ ಗೊತ್ತಾಗಿದೆ. ಹೀಗಾಗಿ ಹತಾಶೆಯ ಮನೋಭಾವನೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
'ಯಡಿಯೂರಪ್ಪರನ್ನು ಇಳಿಸಲು ಬಿಜೆಪಿ ಸಂಸದರಿಂದಲೇ ಕುತಂತ್ರ'
ಡಿಸೆಂಬರ್ 09 ರ ಬಳಿಕ ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿ.ಎಸ್.ಯಡಿಯೂರಪ್ಪನವರೇ ಮೂರುವರೆ ವರ್ಷ ಅಧಿಕಾರ ಮಾಡಲಿದ್ದಾರೆ ಎಂದರು. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ, ಮಂತ್ರಿ ಆಗಬೇಕೆಂದು ಅಸಮಾಧಾನ ಆಗುವವರೇ ನಾವು, ಆದರೆ ನಾವ್ಯಾರು ಅಸಮಾಧಾನಗೊಳ್ಳಲ್ಲ ಹೀಗಾಗಿ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.