ಬಿಜೆಪಿ ಉಪ ಚುನಾವಣೆ ಗೆಲುವಿನ ಹಿಂದಿನ ಗುಟ್ಟು ರಟ್ಟು ಮಾಡಿದ ಎಚ್.ಡಿ. ಕುಮಾರಸ್ವಾಮಿ!
ವಿಜಯಪುರ, ಅ. 27: ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 7 ಗಂಟೆಗೆ ತೆರೆ ಬೀಳಲಿದೆ. ಆ ಮೂಲಕ ಕಳೆದ ಎರಡು ವಾರಗಳಿಂದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದ ರಾಜಕೀಯ ನಾಯಕರು ಕ್ಷೇತ್ರ ತೊರೆಯಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರು ಮಾತ್ರ ಇನ್ನೆರಡು ದಿನಗಳ ಕಾಲ ಮನೆಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ.
ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮೊದಲೇ ಹಣ ಹಂಚಿಕೆ ಕುರಿತು ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ವಸತಿ ಸಚಿವ ವಿ. ಸೋಮಣ್ಣ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಉಪ ಸಮರದಲ್ಲಿ ಇನ್ನೆರಡು ದಿನಗಳಲ್ಲಿ ಹಣ ಹರಿಯಲಿದೆ ಎಂಬ ಆರೋಪವನ್ನು ಎಚ್ಡಿಕೆ ಮಾಡಿದ್ದಾರೆ. ಆ ಮೂಲಕ ಕೊನೆಯ ಹಂತದಲ್ಲಿ ಪ್ರಚಾರದ ಭರಾಟೆ ಹೆಚ್ಚಾಗುವಂತೆ ಮಾಡಿದ್ದಾರೆ.
"ಇವತ್ತು ಸಾಯಂಕಾಲದ ತನಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಂದಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ ಎಂದು ಉಪ ಚುನಾವಣೆ ಬಹಿರಂಗ ಪ್ರಚಾರದ ಅಂತ್ಯವಾಗುವುದಕ್ಕೆ ಮೊದಲು ಹೇಳಿಕೆ ನೀಡಿರುವ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಟ ಎಂದರೆ ದುಡ್ಡು ಹಂಚುವುದಾ?
ವಿಜಯಪುರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ನಾಳೆಯಿಂದ ನಮ್ಮ ಆಟ ಆರಂಭ ಎಂದರೆ ಅರ್ಥವೇನು? ಆಟ ಎಂದರೆ ದುಡ್ಡು ಹಂಚುವುದಾ?" ಎಂದು ಪ್ರಶ್ನಿಸಿದ್ದಾರೆ.
"ನಿಮ್ಮ ಆಟವನ್ನು ಬರೀ ಚುನಾವಣೆಗಷ್ಟೇ ಸೀಮಿತ ಮಾಡಿಕೊಳ್ಳುತ್ತೀರೋ ಅಥವಾ ಸುಳ್ಳು ಹೇಳಿಕೊಂಡು, ಸುಳ್ಳು ಜಾಹೀರಾತುಗಳನ್ನು ಕೊಟ್ಟುಕೊಂಡು ಐದು ಲಕ್ಷ ಮನೆ ಕೊಟ್ಟೆ, ಆರು ಲಕ್ಷ ಮನೆ ಕೊಟ್ಟೆ ಅಂತ ಹೇಳಿಕೊಂಡು ತಿರುಗ್ತೀರೋ? ಎಂದು ಸೋಮಣ್ಣ ಅವರನ್ನು ಮಾಜಿ ಸಿಎಂ ಎಚ್ಡಿಕೆ ಪ್ರಶ್ನಿಸಿದ್ದಾರೆ
ಬಿಜೆಪಿ ಉಪ ಚುನಾವಣೆ ಗೆಲ್ಲುವ ಬಗೆ ವಿವರಿಸಿದ ಎಚ್ಡಿಕೆ!
ಹಿಂದೆ ಐದು ವರ್ಷ ಆಡಳಿತ ನಡೆಸಿದಾಗ ಹಾಗೂ ಈಗ ಎರಡೂವರೆ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರದಿಂದ ಸಿಂಧಗಿ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಈ ಕ್ಷೇತ್ರದತ್ತ ಸಚಿವರುಗಳು ತಲೆ ಹಾಕಿ ಮಲಗಿಲ್ಲ. ಆದರೆ, ನಾಳೆಯಿಂದ ಆಟ ಆಡ್ತೇವಿ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿರುವುದು ಬಿಜೆಪಿ ಉಪ ಚುನಾವಣೆಗಳನ್ನು ಹೇಗೆ ಗೆಲ್ಲುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿವರಿಸಿದ್ದಾರೆ.
ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಎಚ್ಡಿಕೆ!
ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಅವರ ಸರಣಿ ಸುಳ್ಳು ಮಾತುಗಳನ್ನು ಕೇಳಿಕೇಳಿ ಮುಸ್ಲೀಮರಿಗೆ ಸಾಕಾಗಿ ಹೋಗಿದೆ. ಅವರಲ್ಲಿ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸರಕಿಲ್ಲ, ಜನರ ಮುಂದೆ ಮಾತನಾಡಲು ಅವರಲ್ಲಿ ಏನೂ ಉಳಿದಿಲ್ಲ. ಹೀಗಾಗಿ ಹೇಳಿದ್ದನ್ನೇ ಹೇಳ್ತಿದ್ದಾರೆ. ಗಾದೆ ಮಾತಿನಂತೆ 'ಆಡಿದ್ದೇ ಆಡು ಕಿಸುಬಾಯಿ ದಾಸ' ಎನ್ನುವಂತೆ ಆಗಿದೆ ಸಿದ್ದರಾಮಯ್ಯ ಅವರ ಪರಿಸ್ಥಿತಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮಗೆ ಜನರ ಒಲವಿದೆ!
ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇವೇಗೌಡರು ಹಾಗೂ ನಾನು ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳನ್ನು ಜನರು ಮರೆತಿಲ್ಲ. ನಿರಂತರವಾಗಿ ದೇವೇಗೌಡರು, ನಾನು, ರೇವಣ್ಣ, ಪ್ರಜ್ವಲ್ ರೇವಣ್ಣ, ನಮ್ಮ ಶಾಸಕರು, ಮುಖಂಡರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದೇವೆ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ನಾವು ಭೇಟಿ ನೀಡಿದ್ದೇವೆ. ಬಹಿರಂಗ ಸಭೆಗಳ ಗೊಡವೆಯೇ ಇಲ್ಲದೆಯೇ ನೇರವಾಗಿ ಜನರ ಜತೆಯೇ ಸಂಪರ್ಕ ಸಾಧಿಸಿದ್ದೇವೆ, ಮನೆಗಳ ಜಗಲಿಯಲ್ಲೇ ಸಭೆಗಳನ್ನು ಮಾಡಿದ್ದೇವೆ. ಹೀಗಾಗಿ ಪಕ್ಷಕ್ಕೆ ಅತ್ಯುತ್ತಮ ಬೆಂಬಲ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
Recommended Video