ಮುಸ್ಲಿಂ ಮತಗಳ ಓಲೈಕೆಗಾಗಿ ಆರ್ಎಸ್ಎಸ್ ವಿರುದ್ಧ ಎಚ್ಡಿಕೆ ಟೀಕೆ: ಯಡಿಯೂರಪ್ಪ
ವಿಜಯಪುರ, ಅಕ್ಟೋಬರ್ 21: "ಮತದಾರರು ನಮ್ಮ ಪಕ್ಷದ ಜೊತೆಗಿದ್ದಾರೆ. ಆದ್ದರಿಂದ ಉಪ ಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ," ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.
ನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ವೈ, "ಪ್ರಧಾನಿ ನರೇಂದ್ರ ಮೋದಿ ಸಾಧನೆ, ನಾವಿದ್ದಾಗ ಕೊಟ್ಟ ಯೋಜನೆಗಳನ್ನು ಮತದಾರರಿಗೆ ತಿಳಿಸುತ್ತೇವೆ. ಪಕ್ಷಕ್ಕೆ ಜನರು ಬೆಂಬಲ ಕೊಡುತ್ತಾರೆ. ಸಿಂದಗಿಯ ಎರಡು ಸಮಾವೇಶ, ಮೆರವಣಿಗೆ ಕಂಡು ಜೆಡಿಎಸ್, ಕಾಂಗ್ರೆಸ್ಗೆ ಮನವರಿಕೆಯಾಗಿದೆ," ಎಂದು ತಿಳಿಸಿದರು.
"ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ. ಆರ್ಎಸ್ಎಸ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಆರ್ಎಸ್ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಮುಂದೆ ಕುಮಾರಸ್ವಾಮಿ ಪಶ್ಚಾತ್ತಾಪ ಪಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಸಿಎಂಗಳು ಬಹುತೇಕರು ಆರ್ಎಸ್ಎಸ್ ಮೂಲದವರು," ಎಂದರು.
"ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣವನ್ನು ಆರ್ಎಸ್ಎಸ್ ಕಲಿಸಿದೆ. ಮುಸ್ಲಿಂ ಮತಗಳ ಓಲೈಕೆಗಾಗಿ ಎಚ್ಡಿಕೆ ಹೀಗೆ ಮಾತನಾಡುತ್ತಿದ್ದಾರೆ. ಆರ್ಎಸ್ಎಸ್ ವಿರುದ್ಧ ಮಾತಾಡಿದರೆ ಮುಸ್ಲಿಂ ಓಟು ಸಿಗುತ್ತವೆ ಅನ್ನೋ ಭ್ರಮೆಯಲ್ಲಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.
"ನಾನು ಕೂಡಾ ಆರ್ಎಸ್ಎಸ್ನಿಂದ ಬಂದವನು. ಈ ದೇಶದಲ್ಲಿ 26 ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ. ಎಲ್ಲರೂ ಆರ್ಎಸ್ಎಸ್ನಿಂದ ಬಂದವರು. ಸಂಘದ ಬಗ್ಗೆ ಕೇಳುವ ನೈತಿಕ ಹಕ್ಕು ಎಚ್.ಡಿ. ಕುಮಾರಸ್ವಾಮಿ ಅವರಿಗಿಲ್ಲ. ಸಂಘದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡುವ ಅಗತ್ಯತೆ ಇಲ್ಲ, ಉತ್ತರ ನೀಡುವ ಅಗತ್ಯತೆಯೂ ಇಲ್ಲ. ಯಾವ ಪಕ್ಷದ ಬಗ್ಗೆಯೂ ಯಾರೂ ಹಗುರವಾಗಿ ಮಾತನಾಡಬಾರದು," ಎಂದು ಎಚ್ಚರಿಸಿದರು.
"ಇನ್ನು ಎರಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ನಾನು ಪ್ರಚಾರಕ್ಕೆ ಹೋದ ಸಮಯದಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಜನರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ. ನಿರೀಕ್ಷೆ ಮಿರಿ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ನನ್ನ ಅವಧಿಯಲ್ಲಾದ ಅಭಿವೃದ್ಧಿ ಕೆಲಸ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ನಡೆಯುತ್ತಿರುವ ಉತ್ತಮ ಕೆಲಸ ನಮ್ಮ ಕೈಹಿಡಿಯುತ್ತವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ನನ್ನ ರಾಜಕೀಯ ಜೀವನದಲ್ಲಿ ಅಲ್ಪಸಂಖ್ಯಾತ, ಮುಸ್ಲಿಂ ಬಂಧುಗಳಿಗೆ ಅನ್ಯಾಯ ಮಾಡುವ ಕೆಲಸ ಮಾಡಿಲ್ಲ. ನಾವು ಅಥವಾ ಪ್ರಧಾನಿ ಮೋದಿಯವರು ಹಿಂದೂಗಳಿಗೆ ಕೊಟ್ಟು, ಅಲ್ಪಸಂಖ್ಯಾತರಿಗೆ ಕೊಡದೇ ಇರುವ ಯಾವುದಾದರೂ ಒಂದು ಕಾರ್ಯಕ್ರಮ ತೋರಿಸಿ. ಪ್ರಧಾನಿ ಮೋದಿಯವರಾಗಲಿ, ನಾವಾಗಲಿ ಎಲ್ಲ ಕಾಲದಲ್ಲೂ ಎಲ್ಲ ಯೋಜನೆಗಳನ್ನು ಹಿಂದೂ, ಮುಸ್ಲಿಂ, ಕ್ರೈಸ್ತರೆಂದು ಭೇದ- ಭಾವ ಮಾಡದೇ ಕೊಟ್ಟಿದ್ದೇವೆ," ಎಂದರು.
"ಅನ್ನ ಭಾಗ್ಯದ ಅಕ್ಕಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಕೊಟ್ಟ ಯೋಜನೆ ಅಲ್ಲ. ಭಾಗಲಕ್ಷ್ಮೀ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮ ಕೊಟ್ಟಿದ್ದೇವೆ. ಈ ಕಾರ್ಯಕ್ರಮದ ಫಲವಾಗಿಯೇ ಇಂದು ದೇಶದಲ್ಲಿ ಬಿಜೆಪಿಯ ಪರವಾಗಿ ಜನರ ಒಲವಿದೆ," ಎಂದು ತಿಳಸಿದರು.
"ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯ ಬಳಿಕ ರಾಜ್ಯ ಪ್ರವಾಸ ಶುರು ಮಾಡುತ್ತೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ರಾಜ್ಯ ಪ್ರವಾಸ ಮಾಡುತ್ತಿದ್ದು, ಪ್ರತಿ ಜಿಲ್ಲೆ ಜಿಲ್ಲೆಗೂ ಭೇಟಿ ಕೊಡುತ್ತೇನೆ. ಪ್ರಧಾನಿ ಮೋದಿಯವರ ಸಾಧನೆ, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆಂದು," ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
Recommended Video