ಭೀಮಾತೀರದಲ್ಲಿ ಮತ್ತೆ ಗುಂಡಿನ ದಾಳಿ; ಮಹಾದೇವ ಭೈರಗೊಂಡನ ಸ್ಥಿತಿ ಗಂಭೀರ
ವಿಜಯಪುರ, ನವೆಂಬರ್ 2: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಭೀಮಾತೀರದ ಕುಖ್ಯಾತ ಹಂತಕ ಮಹಾದೇವ ಭೈರಗೊಂಡನ ಮೇಲೆ ಗುಂಡಿನ ದಾಳಿ ನಡೆದಿದೆ.
ಭೀಕರವಾಗಿ ಗಾಯಗೊಂಡಿರುವ ಮಹಾದೇವ ಭೈರಗೊಂಡನನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾದೇವ ಭೈರಗೊಂಡ ಮೇಲೆ ಅಪರಿಚಿತರ ತಂಡ ದಾಳಿ ನಡೆಸಿದೆ. ಮೂರು ಸುತ್ತು ಗುಂಡು ಹಾರಿಸಿ ಅಪರಿಚಿತರು ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಿಂದ ಮಹಾದೇವ ಭೈರಗೊಂಡ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದ್ದರೆ, ಮತ್ತೋರ್ವ ವ್ಯಕ್ತಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ವಿಜಯಪುರದ ಅರಕೇರೆ ತಾಂಡ ಬಳಿಯಲ್ಲಿ ಭೀಮಾತೀರದ ಹಂತಕ ಮಹಾದೇವ ಭೈರಗೊಂಡ ಕಾರಿಗೆ ಟಿಪ್ಪರ್ ಲಾರಿಯಿಂದ ಡಿಕ್ಕಿ ಹೊಡೆಸಲಾಗಿದೆ. ಹೀಗೆ ಡಿಕ್ಕಿ ಹೊಡೆದು ಕಾರು ಅಡ್ಡಗಟ್ಟಿದಂತ ಮೂವರು ಅಪರಿಜಿತರು ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ.
ಅಪರಿಚಿತರ ಗುಂಡಿನ ದಾಳಿಯಿಂದಾಗಿ ಮಹಾದೇವ ಭೈರಗೊಂಡ ಅವರು ಗಾಯಗೊಂಡು, ಅವರ ಸಹಚರ ಬಾಬುರಾಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪರಿಚಿತರ ಗುಂಡಿನ ದಾಳಿಯಿಂದಾಗಿ ಮಹಾದೇವ ಭೈರಗೊಂಡನಿಗೆ ಮೂರು ಗುಂಡು ದೇಹದ ಒಳಹೊಕ್ಕಿದ್ದು, ಮಹಾದೇವ ಭೈರಗೊಂಡ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ.
Recommended Video
ಗುಂಡೇಟಿನಿಂದ ಮಹಾದೇವ ಅವರ ಆರೋಗ್ಯ ಗಂಭೀರ ಸ್ಥಿತಿಯನ್ನು ತಲುಪಿರುವುದಾಗಿ ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಚಡಚಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಪೊಲೀಸರಿಂದ ಲಭ್ಯವಾಗಬೇಕಿದೆ.