ಗಂಗಾಧರ ಚಡಚಣ ಹತ್ಯೆ : ಎಲ್ಲಾ ಆರೋಪಿಗಳು ಸಿಐಡಿ ವಶಕ್ಕೆ
ವಿಜಯಪುರ, ಜೂನ್ 19 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದ್ದು, ವಿಜಯಪುರಕ್ಕೆ ಎಡಿಜಿಪಿ ಚರಣ್ ರೆಡ್ಡಿ ಭೇಟಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿಯ ಜೆಎಂಎಫ್ಸಿ ಕೋರ್ಟ್ ಮಂಗಳವಾರ ಎಲ್ಲಾ ಆರೋಪಿಗಳನ್ನು 5 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಆರೋಪಿಗಳ ವೈದ್ಯಕೀಯ ಪರೀಕ್ಷೆ ಬಳಿಕ ರಹಸ್ಯ ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಗಂಗಾಧರ ಚಡಚಣ ಹತ್ಯೆ : ಪಿಎಸ್ಐ, ಮೂವರು ಪೇದೆಗಳ ಬಂಧನ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಗೋಪಾಲ ಹಳ್ಳೂರ, ಪೊಲೀಸ್ ಪೇದೆಗಳಾದ ಸಿದ್ಧಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರನ್ನು ಬಂಧಿಸಲಾಗಿತ್ತು. ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದರು. ಇಂದು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.
ಎಡಿಜಿಪಿ ಭೇಟಿ : ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಮಂಗಳವಾರ ವಿಜಯಪುರದಲ್ಲಿ ತನಿಖಾ ತಂಡದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಭೀಮಾತೀರದ ಹಂತಕ ಧರ್ಮರಾಜ ಶೂಟೌಟ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಪಿಎಸ್ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರನ್ನು ಸಿಐಡಿ ವಶಕ್ಕೆ ನೀಡುವಂತೆ ಸೋಮವಾರ ಸಿಐಡಿ ಅಧಿಕಾರಿಗಳು ಇಂಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣನನ್ನು ಪೊಲೀಸರು ಬಂಧಿಸಿದ್ದರು ಎಂಬ ಮಾಹಿತಿ ಇತ್ತು. ಎನ್ಕೌಂಟರ್ನಲ್ಲಿ ಧರ್ಮರಾಜ ಚಡಚಣ ಮೃತಪಟ್ಟಿದ್ದ. ಬಳಿಕ ಗಂಗಾಧರ ಚಡಚಣ ನಾಪತ್ತೆಯಾಗಿದ್ದ. ಕೆಲವು ದಿನಗಳ ಬಳಿಕ ಗಂಗಾಧರ ಚಡಚಣ ಹತ್ಯೆಯಾಗಿರುವ ವಿಚಾರ ಬಹಿರಂಗವಾಗಿತ್ತು.
ಪೊಲೀಸ್ ವಶದಲ್ಲಿದ್ದ ಗಂಗಾಧರ ಚಡಚಣ ನಾಪತ್ತೆಯಾಗಿದ್ದು ಹೇಗೆ?, ಆತನನ್ನು ಹತ್ಯೆ ಮಾಡಿದ್ದು ಯಾರು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಗಂಗಾಧರ ಚಡಚಣ ಹತ್ಯೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಎಂಬ ಆರೋಪ ಇದ್ದು ತನಿಖೆ ನಡೆಯುತ್ತಿದೆ.