ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್ನಲ್ಲೇನಿದೆ?
ವಿಜಯಪುರ, ಸೆಪ್ಟೆಂಬರ್ 08 : ವಿಜಯಪುರದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಇಂಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಕೊಲೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳ ಪಾತ್ರ ಇರುವುದು ಸಾಬೀತಾಗಿದೆ.
ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳ ವಿರುದ್ಧ 373 ಪುಟದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಪ್ರಕರಣದ 13ನೇ ಆರೋಪಿ ಚಡಚಣ ಠಾಣೆಯ ಸಿಪಿಐ ಎಂ.ಬಿ.ಅಸೋಡೆ ಇನ್ನೂ ನಾಪತ್ತೆಯಾಗಿದ್ದಾನೆ.
ಧರ್ಮರಾಜ್ ಚಡಚಣ ಎನ್ಕೌಂಟರ್ ತನಿಖೆ ಆರಂಭಿಸಿದ ಸಿಐಡಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಎಂ.ಬಿ.ಅಸೋಡೆ ಸೇರಿ ಇನ್ನೂ 6 ಆರೋಪಿಗಳನ್ನು ಬಂಧಿಸಬೇಕಿದೆ. ಇವರನ್ನು ಬಂಧಿಸಿದ ಬಳಿಕ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಗಂಗಾಧರ ಚಡಚಣ ಹತ್ಯೆ : 373 ಪುಟದ ಚಾರ್ಜ್ ಶೀಟ್ ಸಲ್ಲಿಕೆ
ಮಹಾದೇವ ಭೈರಗೊಂಡ ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾನೆ. ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣ ಹತ್ಯೆ ಮಾಡಲು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದೆ ಎಂದು ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಪಿಎಸ್ಐ ಎಂ.ಬಿ.ಅಸೋಡೆ ಇನ್ನೂ ಸಿಕ್ಕಿಲ್ಲ
15 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್
ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದಲ್ಲಿ 15 ಆರೋಪಿಗಳ ವಿರುದ್ಧ ಸಿಐಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಮಹಾದೇವ ಭೈರಗೊಂಡ ಮೊದಲ ಆರೋಪಿ. ಪೊಲೀಸ್ ಅಧಿಕಾರಿ ಪಿಎಸ್ಐ ಗೋಪಾಲ ಹಳ್ಳೂರ 12ನೇ ಆರೋಪಿ, ಪೊಲೀಸ್ ಪೇದೆಗಳಾದ ಸಿದ್ದರೂಢ ರೂಗಿ 9, ಚಂದ್ರಶೇಖ ಜಾಧವ 10, ಗೆದ್ದಪ್ಪ ನಾಯ್ಕೋಡಿ 11ನೇ ಆರೋಪಿ. ನಾಪತ್ತೆಯಾಗಿರುವ ಚಡಚಣ ಠಾಣೆ ಪಿಎಸ್ಐ ಆಗಿದ್ದ ಎಂ.ಬಿ.ಅಸೋಡೆ 13ನೇ ಆರೋಪಿಯಾಗಿದ್ದಾರೆ.
ಯಾವುದೇ ಅಂಗಗಳು ಸಿಕ್ಕಿಲ್ಲ
ಗಂಗಾಧರ ಚಡಚಣ ನಿಗೂಢ ಹತ್ಯೆಯ ಬಳಿಕ ದೇಹವನ್ನು ನದಿಗೆ ಎಸೆಯಲಾಗಿದೆ. ಗಂಗಾಧರನ ದೇಹದ ಯಾವುದೇ ಭಾಗ ಪತ್ತೆಯಾಗಿಲ್ಲ. ಹತ್ಯೆಯಲ್ಲಿ ಭಾಗಿರುವ ಪೊಲೀಸ್ ಅಧಿಕಾರಿಗಳು ಸೇರಿ 12 ಮಂದಿಯನ್ನು ಪ್ರಮುಖ ಸಾಕ್ಷಿಯನ್ನಾಗಿ ಮಾಡಲಾಗಿದೆ.
ಕೊಲೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ತನಿಖೆ ವೇಳೆ ಎಲ್ಲರ ಪಾತ್ರ ಇರುವುದು ಸಾಬೀತಾಗಿದೆ. ಒಬ್ಬ ಪೊಲೀಸ್ ಅಧಿಕಾರಿಯನ್ನು ಇನ್ನೂ ಬಂಧಿಸಬೇಕಾಗಿದೆ.
ಕೈ-ಕಾಲು ಕತ್ತರಿಸಿ ನದಿಗೆ ಎಸೆದರು
ಗಂಗಾಧರ ಚಡಚಣನನ್ನು ಉಮರಾಣಿ-ಕೆರೂರು ನಡುವಿನ ತೊಗರಿ ಹೊಲದಲ್ಲಿ ಹತ್ಯೆ ಮಾಡಲಾಗಿದೆ. ಕೈ-ಕಾಲು, ದೇಹವನ್ನು ಕತ್ತರಿಸಿ 6 ಬ್ಯಾಗ್ಗಳಲ್ಲಿ ತುಂಬಿ ಹಿಂಗಣಿ ಬ್ಯಾರೇಜ್ನಲ್ಲಿ ಭೀಮಾ ನದಿಗೆ ಎಸೆಯಲಾಗಿದೆ.
ಗಂಗಾಧರ ಚಡಚಣ ಶವದ ಯಾವ ಭಾಗವೂ ಸಿಕ್ಕಿಲ್ಲ. ಕೊಲೆಯಾದ ಸ್ಥಳದಲ್ಲಿ ಕಲ್ಲಿನ ಮೇಲೆ ರಕ್ತ ಚೆಲ್ಲಾಡಿತ್ತು. ಕಲ್ಲಿನ ಮೇಲೆ ಪತ್ತೆಯಾದ ರಕ್ತದ ಕಲೆಗೂ ಗಂಗಾಧರ ಚಡಚಣನ ಪುತ್ರನ ಡಿಎನ್ಎ ಮಾದರಿಗೂ ಹೊಂದಾಣಿಕೆಯಾಗಿದ್ದು, ಹತ್ಯೆಯನ್ನು ದೃಢೀಕರಿಸಲಾಗಿದೆ ಎಂದು ಸಿಐಡಿ ಹೇಳಿದೆ.
ಪೊಲೀಸರ ಜೊತೆ ಒಪ್ಪಂದ
ಧರ್ಮರಾಜ ಚಡಚಣ ಮಹಾದೇವ ಭೈರಗೊಂಡನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾನೆ ಎಂಬ ಮಾಹಿತಿ ಭೈರಗೊಂಡನಿಗೆ ಸಿಕ್ಕಿತ್ತು. ಆದ್ದರಿಂದ, ಧರ್ಮರಾಜ ಚಡಚಣ, ಗಂಗಾಧಡ ಚಡಚಣನನ್ನು ಹತ್ಯೆ ಮಾಡಿಸಲು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದ.
ಮಹಾದೇವ ಭೈರಗೊಂಡ ಎಂ.ಬಿ.ಅಸೋಡೆ, ಪಿಎಸ್ಐ ಗೋಪಾಲ ಹಳ್ಳೂರ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಕೋಟಿ ಕೋಟಿ ಹಣ ನೀಡಿದ್ದ. 2017ರ ಅಕ್ಟೋಬರ್ 30ರಂದು ವಿಜಯಪುರದಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಧರ್ಮರಾಜ ಚಡಚಣ ಹತ್ಯೆಯಾಗಿತ್ತು.
ಎನ್ಕೌಂಟರ್ ತನಿಖೆಯೂ ಸಿಐಡಿಗೆ
ಸರ್ಕಾರ ವಿಜಯಪುರ ಎಸ್ಪಿ ಸಲಹೆಯಂತೆ ಧರ್ಮರಾಜ ಚಡಚಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಲವು ಆರೋಪಿಗಳು ಧರ್ಮರಾಜ ಚಡಚಣ ಹತ್ಯೆ ಪ್ರಕರಣದಲ್ಲಿಯೂ ಆರೋಪಿಗಳು.
ಕೊಲೆ, ಬೆದರಿಕೆ, ಅಪಹರಣ ಮುಂತಾದ 40 ಕ್ಕೂ ಅಧಿಕ ಪ್ರಕರಣದಲ್ಲಿ ಧರ್ಮರಾಜ ಚಡಚಣ ಆರೋಪಿಯಾಗಿದ್ದ. 2017ರ ಅಕ್ಟೋಬರ್ 30ರಂದು ವಿಜಯಪುರದ ಕೊಂಕಣಗಾಂವ್ ಬಳಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಪತ್ತೆ ಹಚ್ಚಲು ಮನೆಯ ಮೇಲೆ ದಾಳಿ ಮಾಡಿದ್ದರು.
ಆ ಮನೆಯಲ್ಲಿ ಅವಿತಿದ್ದ ಧರ್ಮರಾಜ ಚಡಚಣ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಆಗ ನಡೆದ ಎನ್ಕೌಂಟರ್ನಲ್ಲಿ ಆತನ ಹತ್ಯೆಯಾಗಿತ್ತು. ಆದರೆ, ಈ ಎನ್ಕೌಂಟರ್ ನಕಲಿ ಎಂಬ ಆರೋಪವಿದೆ.