ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ ಪತ್ನಿ ಆತ್ಮಹತ್ಯೆ
ವಿಜಯಪುರ, ಜೂನ್ 29 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿಯ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿ ಸಿದ್ದಗೊಂಡಪ್ಪ ಮುಡವೆ ಜೂನ್ 27ರಂದು ನ್ಯಾಯಾಲಯಕ್ಕೆ ಶರಣಾಗಿದ್ದರು.
ಸಿದ್ದಗೊಂಡಪ್ಪ ಮುಡವೆ ಪತ್ನಿ ಕಾಂಚನಾ (32) ಭೀಮಾನದಿಯ ಬ್ಯಾರೇಜ್ಗೆ ಹಾರಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಿದ್ದಗೊಂಡಪ್ಪ ತಾವಾಗಿಯೇ ನ್ಯಾಯಾಲಯಕ್ಕೆ ಶರಣಾಗಿದ್ದರು.
ಮಹಾದೇವ ಸಾಹುಕಾರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್
ಹೆಚ್ಚಿನ ವಿಚಾರಣೆಗಾಗಿ ಸಿದ್ದಗೊಂಡಪ್ಪ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಎಲ್ಲಾ ಘಟನೆಗಳಿಂದ ಮನನೊಂದು ಕಾಂಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಕಾಂಚನಾ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನ ಸಂಬಂಧಿಯಾಗಿದ್ದರು. ಸಿದ್ದಗೊಂಡಪ್ಪ ಸಂಬಂಧದಲ್ಲಿ ಮಹಾದೇವನಿಗೆ ಅಳಿಯನಾಗಿದ್ದಾನೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣ : ಮಹಾರಾಷ್ಟ್ರಕ್ಕೆ ಎಸ್ಐಟಿ ತಂಡ
ಹತ್ತು ವರ್ಷಗಳ ಹಿಂದೆ ಕಾಂಚನಾ ಮತ್ತು ಸಿದ್ದಗೊಂಡಪ್ಪ ವಿವಾಹವಾಗಿದ್ದರು. ಕಾಂಚನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ ಮಹಾದೇವ ಸಾಹುಕಾರ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ವಿಜಯಪುರ ನ್ಯಾಯಾಲಯ ಕಾಯ್ದಿರಿಸಿದೆ. ಜುಲೈ 2ರಂದು ತೀರ್ಪು ಪ್ರಕಟವಾಗಲಿದೆ.