ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ವಿಧಿವಶ
ವಿಜಯಪುರ, ಜುಲೈ 22 : ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ಇಂದು ವಿಧಿವಶರಾದರು. ವಿಮಲಾಬಾಯಿ ದೇಶಮುಖ್ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.
ವಿಮಲಾಬಾಯಿ ದೇಶಮುಖ್ (69) ಅವರ ಪತಿ ಜೆ.ಎಸ್.ದೇಶಮುಖ್ ಅವರು ಮೂರು ಬಾರಿ ಮುದ್ದೇಬಿಹಾಳ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಶಾಸಕರಾಗಿದ್ದರು. ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಪತಿಯ ನಿಧನದ ಬಳಿಕ 1994ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಗ ಸಚಿವರಾಗಿದ್ದ ಸಿ.ಎಸ್.ನಾಡಗೌಡರನ್ನು ವಿಮಲಾಬಾಯಿ ದೇಶಮುಖ್ ಸೋಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸಿರಲಿಲ್ಲ.
ಉಳುವವನೇ ಭೂ ಒಡೆಯ ಕಾಯ್ದೆ ಜಾರಿಯಾದಾಗ ಇವರ ಕುಟುಂಬ ಸಾವಿರಾರು ಎಕರೆ ಜಮೀನನ್ನು ದಾನವಾಗಿ ನೀಡಿತ್ತು. ವಿಮಲಾಬಾಯಿ ದೇಶಮುಖ್ ಅವರ ಪುತ್ರಿ ನಂದಿನಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ.
ವಿಮಲಾಬಾಯಿ ದೇಶಮುಖ್ ಅವರ ಅಂತ್ಯಕ್ರಿಯೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿನ ದೇಶಮುಖ್ ಅವರ ತೋಟದಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸಂತಾಪ : ವಿಮಲಾಬಾಯಿ ದೇಶಮುಖ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ವಿಮಲಾಬಾಯಿ ದೇಶಮುಖ್ ಅವರ ನಾಯಕತ್ವದ ಗುಣ ಹಾಗೂ ಮಹಿಳಾ ಏಳಿಗೆಯ ಕಾಳಜಿ ಎಲ್ಲರಿಗೂ ಮಾರ್ಗದರ್ಶಿಯಾಗಿರಲಿ ಎಂದು ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.