ಅಮಿತ್ ಶಾ ಕರ್ನಾಟಕ ಭೇಟಿ ಮತ್ತು ಯತ್ನಾಳ್ 'ರಾಜಕೀಯ ಸಂಕ್ರಮಣದ' ಹೇಳಿಕೆ
ವಿಜಯಪುರ, ಡಿ 25: ಕೇಂದ್ರ ಗೃಹಸಚಿವ ಅಮಿತ್ ಶಾ ಎರಡು ದಿನಗಳ ಭೇಟಿಗಾಗಿ ಜನವರಿ ಮೂರನೇ ವಾರದಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ವೇಳೆ, ಬೆಂಗಳೂರು, ಕಲಬುರಗಿ, ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ.
ಅಮಿತ್ ಶಾ ಅವರ ಭೇಟಿ ಅಧಿಕೃತವಾಗಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದರೂ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರ ಮತ್ತೆ ವೇಗ ಪಡೆದುಕೊಳ್ಳಲಾರಂಭಿಸಿದೆ. ಬರುವ ಮಕರ ಸಂಕ್ರಾಂತಿಯ ಸಮಯದಲ್ಲಿ ಅಮಿತ್ ಶಾ, ರಾಜ್ಯಕ್ಕೆ ಬರುವ ಸಾಧ್ಯತೆಯಿದೆ.
ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿದೆಯೇ?
ಮುಖ್ಯಮಂತ್ರಿ ಬದಲಾವಣೆ ವಿಚಾರ ಇನ್ನೂ ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿರುವುದರಿಂದ, ಅಮಿತ್ ಶಾ ಅವರ ಭೇಟಿಯ ವಿಚಾರ ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನು, ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವರಿಗೂ ಶಾ ಭೇಟಿ ಹೊಸ ಆಶಾಕಿರಣವಾಗುತ್ತಿದೆ.
ಇವೆಲ್ಲದರ ನಡುವೆ, ಬಿಜೆಪಿಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರೋಧಿಯಾಗಿರುವ ವಿಜಯಪುರ (ನಗರ) ಶಾಸಕ ಬಸನಗೌಡ ಪಾಟೀಳ್ ಯತ್ನಾಳ್ ಅವರು ನೀಡಿರುವ ಹೇಳಿಕೆಗೂ, ಅಮಿತ್ ಶಾ ಭೇಟಿಗೂ ಒಂದಕ್ಕೊಂದು ತಾಳೆಯಾಗುತ್ತಿದೆಯೇ ಎನ್ನುವುದು ಹೊಸ ಚರ್ಚೆಯ ವಿಷಯವಾಗಿದೆ.
ರಾಜರಾಜೇಶ್ವರಿ ನಗರ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆ
ರಾಜರಾಜೇಶ್ವರಿ ನಗರ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಸಂಪುಟ ವಿಸ್ತರಣೆ ಆಗಬಹುದು ಎಂದು ಗ್ರಹಿಸಲಾಗಿತ್ತು. ಇನ್ನು ಮೂರ್ನಾಲ್ಕು ದಿನಗಳಲ್ಲಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗಲಿದೆ ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ ಕನಿಷ್ಠ ನಾಲ್ಕು ಬಾರಿ ಹೇಳಿ, ಆಮೇಲೆ ಸುಮ್ಮನಾಗಿದ್ದರು. ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದವರೂ ನಂತರ ಸುಮ್ಮನಾಗಿದ್ದರು. ಈಗ, ಈ ವಿಚಾರ ಮತ್ತೆ ಧುತ್ತೆಂದು ಕೂತಿದೆ.
ಎರಡು ದಿನಗಳ ಭೇಟಿಗೆ ಅಮಿತ್ ಶಾ ಅವರು ಕರ್ನಾಟಕಕ್ಕೆ
ಜನವರಿ 15-16ಕ್ಕೆ ಎರಡು ದಿನಗಳ ಭೇಟಿಗೆ ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಲಿದ್ದಾರೆ. ಈ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಖಚಿತ ಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡುತ್ತಿದ್ದ ಯತ್ನಾಳ್, "ಐಆರ್ ಬಿ ಬೆಟಾಲಿಯನ್ ಉದ್ಘಾಟನೆಗೆ, ಜನವರಿ ಹದಿನಾರನೇ ತಾರೀಕಿಗೆ ಅಮಿತ್ ಶಾ ಅವರು ವಿಜಯಪುರಕ್ಕೆ ಬರಲಿದ್ದಾರೆ"ಎಂದು ಯತ್ನಾಳ್ ಹೇಳಿದರು.
ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ
"ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಂಪುಟ ವಿಸ್ತರಣೆಯ ಪಟ್ಟಿಯಲ್ಲೂ ನನ್ನ ಹೆಸರಿಲ್ಲ. ನೀವು, ಸುಮ್ಮನೆ ನನ್ನ ಹೆಸರು ಇದೆ ಎಂದು ಪ್ರಸಾರ ಮಾಡಬೇಡಿ" ಎಂದು ಹೇಳಿರುವ ಯತ್ನಾಳ್, ಯಾರ ಹಣೆಯಲ್ಲಿ ಬ್ರಹ್ಮ ಏನು ಬರೆದಿದ್ದಾನೋ, ಯಾರಿಗೆ ಗೊತ್ತು"ಎಂದು ಯತ್ನಾಳ್ ಹೇಳುವ ಮೂಲಕ, ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ.
Recommended Video
ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ
"ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡುವ ಮೊದಲೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲ"ಎಂದು ಹೇಳಿರುವ ಯತ್ನಾಳ್, "ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಬದಲಿಸಿದ್ದಾನೆ, ಇನ್ನು ರಾಜ್ಯದಲ್ಲೂ ಬದಲಾವಣೆಯಾಗಲಿದೆ"ಎಂದು ಹೇಳಿದರು.