ವಿಜಯಪುರದಲ್ಲಿ ಯುವಕನ ಕೊಲೆ; ನ್ಯಾಯಕ್ಕೆ ಸಿಪಿಐಎಂ ಒತ್ತಾಯ
ವಿಜಯಪುರ, ಆಗಸ್ಟ್ 28: ದೇವಸ್ಥಾನದಲ್ಲಿ ತಮ್ಮ ಸಮನಾಗಿ ಕುಳಿತ ಎಂಬ ಕಾರಣಕ್ಕೆ ವಿಜಯಪುರದಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಅಪರಾಧಿಗಳನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕೆಂದು ಸಿಪಿಐಎಂ ಸರ್ಕಾರವನ್ನು ಒತ್ತಾಯಿಸಿದೆ.
Recommended Video
ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಗಾಳ್ ಪಿ.ಎಚ್ ಗ್ರಾಮದ ಅನಿಲ್ ಇಂಗಳಗಿ ಎಂಬ ಯುವಕ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ತಮ್ಮ ಸಮನಾಗಿ ಕುಳಿತನೆಂಬ ಕಾರಣಕ್ಕೆ ಅದೇ ಗ್ರಾಮದ ಸಿದ್ದು ಬಿರಾದಾರ್ ಜಾಗೂ ಸಂತೋಷ ಬಿರಾದಾರ್ ಎಂಬುವವರು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಇದೊಂದು ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯ ಆಚರಣೆಯ ಕೃತ್ಯ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಭಾರತದ ಸಂವಿಧಾನಾತ್ಮಕ ಕಾನೂನು ಜಾರಿಯಲ್ಲಿಲ್ಲವೆಂಬ ಬಲಹೀನತೆಯನ್ನು ಮತ್ತೊಮ್ಮೆ ಎತ್ತಿ ತೋರಿದೆ. ತಕ್ಷಣವೇ ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಅವರ ಈ ದುಷ್ಕೃತ್ಯದ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಸಿಪಿಐಎಂ ರಾಜ್ಯ ಸಮಿತಿ ಒತ್ತಾಯಿಸಿದೆ.
ಇದರೊಂದಿಗೆ ಗ್ರಾಮದ ದಲಿತರಿಗೆ ಅಗತ್ಯ ರಕ್ಷಣೆ ಒದಗಿಸಲು ಹಾಗೂ ಜಾತಿ ತಾರತಮ್ಯ ತಡೆ ಕಾಯ್ದೆಗಳನ್ನು ಜಾರಿಗೆ ತರಲು ಅಗತ್ಯ ಕ್ರಮ ವಹಿಸಬೇಕು ಎಂದು ಸಿಪಿಐ(ಎಂ) ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.