'ಜಮೀರ್ ಅಹ್ಮದ್ ನನ್ನ ಗೆಳೆಯ' ಎನ್ನುವ ಡೈಲಾಗ್ ಹೊಡೆಯುವುದನ್ನು ಮೊದಲು ಬಿಡಲಿ!
ವಿಜಯಪುರ, ಜ 30: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿನ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಡಿಯೂರಪ್ಪ ವಿರುದ್ದ ನೇರವಾಗಿ ವಾಗ್ದಾಳಿ ನಡೆಸುವ ಯತ್ನಾಳ್ ಮತ್ತೊಮ್ಮೆ ಸಿಎಂ ಬಿಎಸ್ವೈಗೆ ಮಾತಿನಲ್ಲೇ ಚುಚ್ಚಿದ್ದಾರೆ.
'ಮುಂದಿನ ಮುಖ್ಯಮಂತ್ರಿ ನಾನೇ' ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ಯತ್ನಾಳ್, ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಬುದ್ದಿಮಾತನ್ನು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ನಾನೇ; ಯತ್ನಾಳ್ ಘೋಷಣೆ
ಬೆಂಗಳೂರಿನ ಯಶವಂತಪುರ ಅಸೆಂಬ್ಲಿ ವ್ಯಾಪ್ತಿಯಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹದ ವೇಳೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದ ಬಗ್ಗೆ ಮಾತನಾಡುತ್ತಿದ್ದ ಯತ್ನಾಳ್, "ಜಮೀರ್ ಅಹ್ಮದ್ ನನ್ನ ಪ್ರೀತಿಯ ಗೆಳೆಯ ಎಂದು ಮುಖ್ಯಮಂತ್ರಿಗಳು ಮತ್ತು ಗೃಹಸಚಿವ ಬೊಮ್ಮಾಯಿಯವರು ಡೈಲಾಗ್ ಹೊಡೆಯುವುದನ್ನು ಮೊದಲು ಬಿಡಲಿ"ಎನ್ನುವ ಸಲಹೆಯನ್ನು ಯತ್ನಾಳ್ ನೀಡಿದ್ದಾರೆ.
"ಬೆಂಗಳೂರು ಹಾಟ್ ಸ್ಪಾಟ್ ಆಗುತ್ತಿದೆ. ಬೆಂಗಳೂರಿನಲ್ಲಿ ನಿಧಿ ಸಂಗ್ರಹದ ವೇಳೆ ನಡೆದ ಘಟನೆಯನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು. ಜಮೀರ್ ಜೊತೆಗೆ ಸಲುಗೆಯಲ್ಲಿ ಇರುವುದನ್ನು ಬೊಮ್ಮಾಯಿ ಮೊದಲು ಬಿಡಲಿ"ಎಂದು ಯತ್ನಾಳ್ ಉಪದೇಶವನ್ನು ಮಾಡಿದ್ದಾರೆ.
ರಾಮಮಂದಿರ ನಿಧಿ ಸಂಗ್ರಹ ಮಾಡುತ್ತಿದ್ದ ವಾಹನದ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು !
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡುತ್ತಿದ್ದ ವಾಹನದ ಮೇಲೆ ಯಶವಂತಪುರ ವ್ಯಾಪ್ತಿಯ ಸುದ್ದುಗುಂಟೆ ಪಾಳ್ಯದ ಬಿಸ್ಮಿಲ್ಲಾ ನಗರದಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಪೊಲೀಸರು ಕೂಡಲೇ ಭಾರೀ ಬಂದೋಬಸ್ತ್ ನೀಡಿದ್ದರು.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾ, "ವೀರಶೈವ ಲಿಂಗಾಯತರು ಈಗ ನೆನಪಾಯ್ತಾ? ಕೇಂದ್ರವರು ಸಿಎಂ ಸ್ಥಾನದಿಂದ ವಜಾಗೊಳಿಸುವುದನ್ನು ಮನಗಂಡು ನೀವು ಲಿಂಗಾಯತರ ಅಭಿವೃದ್ಧಿ ನಿಗಮ ಮಾಡಿದ್ದೀರಾ" ಎಂದು ಬಿಎಸ್ವೈ ವಿರುದ್ದ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದರು.