ಬಿಎಸ್ವೈ ಬರ ಪ್ರವಾಸ ರಾಜಕೀಯ ಗಿಮಿಕ್: ಎಂಬಿ ಪಾಟೀಲ್
ವಿಜಯಪುರ, ಜೂನ್ 09: ಮುಂಗಾರು ಮಳೆ ಪ್ರವೇಶಕ್ಕೆ ಇನ್ನೆರಡು ದಿನವಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯವರ ಬರ ಪ್ರವಾಸ ರಾಜಕೀಯ ಗಿಮಿಕ್ ಆಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಟಿಕಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಆಪರೇಷನ್ ಕಮಲ ಮಾಡಲು ಹೋಗಿ ಸೋತರು ಈಗ ಬರ ಅಧ್ಯಯನ ಎಂಬ ಗಿಮಿಕ್ ಆರಂಭಿಸಿದ್ದಾರೆ. ನಾಳೆ, ನಾಡಿದ್ದು ಮುಂಗಾರು ಮಳೆ ಆರಂಭವಾಗಲಿದೆ ಎಂದು ಹವಮಾನ ಮುನ್ಸೂಚನ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯವರು ಬರ ಅಧ್ಯಯನದ ನಾಟಕವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು
ಆಪರೇಷನ್ ಕಮಲ ವಿಫಲವಾಗಿದ್ದಕ್ಕೆ ಅವರಿಗೆ ಬರ ನೆನಪಾಗಿದೆ ಎಂದು ಎಂಬಿ ಪಾಟೀಲ್ ಅವರು ಟೀಕಿಸಿದ್ದಾರೆ. ಆಪರೇಷನ್ ಕಮಲ ಆಗ್ತಾ ಇಲ್ಲ ಅಂತಾ ಗೊತ್ತಾಗಿದ್ದಕ್ಕೆ ಮುಂಗಾರು ಮಳೆ ಆರಂಭದ ವೇಳೆ ಬರ ನೆನಪಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.
ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದೆ. ಮುಂದಿನ 2 -3 ದಿನಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿ ಜೊತೆಗೆ ಮಳೆ ಬೀಳಲಿದೆ ಹವಾಮಾನ ಇಲಾಖೆ ವರದಿ ನೀಡಿದೆ.