ಲಕ್ಷ್ಮಣ ಸವದಿ ಗೆ ಡಿಸಿಎಂ ಸ್ಥಾನ ಕೊಡಿಸಿದ್ದು ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಜಯಪುರ, ಜನವರಿ 04: ಯಡಿಯೂರಪ್ಪ ಸರ್ಕಾರ ರಚನೆ ಆಗಿ ಸಂಪುಟ ವಿಸ್ತರಣೆ ಆದಾಗ ಪಕ್ಷದಲ್ಲಿದ್ದವರಿಗೇ ಭಾರಿ ಆಶ್ಚರ್ಯ ಮೂಡಿಸಿದ್ದ ಹೆಸರು ಲಕ್ಷ್ಮಣ ಸವದಿ ಅವರದ್ದು.
ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಡಿಸಿಎಂ ಪಟ್ಟ ಕೊಟ್ಟಿದ್ದು ಏಕೆ ಮತ್ತು ಡಿಸಿಎಂ ಸ್ಥಾನವನ್ನು ಕೊಡಿಸಿದ್ದು ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.
ಆದರೆ ಈ ಪ್ರಶ್ನೆಗೆ ಈಗ ಸ್ವತಃ ಲಕ್ಷ್ಮಣ ಸವದಿ ಉತ್ತರ ನೀಡಿದ್ದಾರೆ. ಇಂದು ವಿಜಯಪುರದಲ್ಲಿ ನಡೆದ ಕೃಷಿ ಸಮ್ಮೇಳನದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಯಾರು ತಮಗೆ ಡಿಸಿಎಂ ಸ್ಥಾನ ಕೊಡಿಸಿದ್ದು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
ವೇದಿಕೆ ಮೇಲೆ ಮಾತನಾಡಿದ ಲಕ್ಷ್ಮಣ ಸವದಿ, 'ಸಂಸದ ರಮೇಶ್ ಜಿಗಜಿಣಗಿ ಅವರಿಂದಲೇ ನಾನು ಡಿಸಿಎಂ ಆಗಿದ್ದು, ಈ ವಿಷಯವನ್ನು ಹೇಳಿಕೊಳ್ಳಲು ನನಗೇನು ಮುಜುಗರವಿಲ್ಲ' ಎಂದು ಹೇಳಿದರು.
'ನನ್ನನ್ನು ಡಿಸಿಎಂ ಮಾಡಿದ್ದು ರಮೇಶ್ ಜಿಗಜಿಣಗಿ, ನನಗೆ ಮತ್ತು ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲು ರಮೇಶ್ ಜಿಗಜಿಣಗಿ ಕಾರಣ' ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಲಕ್ಷ್ಮಣ ಸವದಿ, 'ಹಿಂಬಾಗಿಲ ರಾಜಕೀಯ ನಡೆಸಿ ನನಗೆ ಡಿಸಿಎಂ ಸ್ಥಾನ ಕೊಡಿಸಿಕೊಟ್ಟಿರಿ, ಮಗು ಅಂಬೆಗಾಲಿಡಲು ಪ್ರಾರಂಭಿಸಿದಾಗ ಹೇಗೆ ತಂದೆ ಮಗುವಿಗೆ ನಡೆಯಲು ಸಹಾಯ ಮಾಡುತ್ತಾನೋ ಹಾಗೆ ನೀವು ನನಗೆ ಸಹಾಯ ಮಾಡಿದ್ದೀರಿ' ಎಂದರು.
ಭಾವುಕರಾಗಿ ಮಾತನಾಡಿದ ಲಕ್ಷ್ಮಣ ಸವದಿ, 'ನನ್ನ ರಾಜಕೀಯ ಭವಿಷ್ಯ ರೂಪಿಸಿದವರು ನೀವು' ಎಂದು ಹೇಳಿದರು. ಲಕ್ಷ್ಮಣ ಸವದಿ ಅವರ ಭಾವುಕ ಭಾಷಣ ಕೇಳಿ ರಮೇಶ್ ಜಿಗಜಿಣಗಿ ಅವರು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.