ಯಡಿಯೂರಪ್ಪ ಬಗ್ಗೆ'ಅಯ್ಯೋ ಪಾಪ' ಎಂದು ಬೇಸರ ವ್ಯಕ್ತ ಪಡಿಸಿದ ಯತ್ನಾಳ್
ವಿಜಯಪುರ, ಜ 25: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರಿಸ್ಥಿತಿಯನ್ನು ನೋಡಿದರೆ ಅಯ್ಯೋ ಪಾಪ ಎಂದು ಅನಿಸುತ್ತದೆ ಎಂದು ಬಿಜೆಪಿಯಲ್ಲಿದ್ದರೂ ಅವರ ಕಟ್ಟಾ ವಿರೋಧಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ, ಅವರ ಬಗ್ಗೆ ವಿರೋಧ ಪಕ್ಷದವರೂ ನಾಚಿಸುವಂತೆ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್, ಅವರ ಇಂದಿನ ಸ್ಥಿತಿಗೆ ಅವರ ಪುತ್ರರೇ ಕಾರಣ. ಪುತ್ರ ವ್ಯಾಮೋಹ ಅವರನ್ನು ಮನೆಯಲ್ಲಿ ಕೂರುವಂತೆ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.
ಡಿಕೆಶಿ ವೇಗ ತಡೆಯಲು ಹಳೇ ದ್ವೇಷ ಮರೆತು ಒಂದಾದ ಯತ್ನಾಳ್, ರೇಣುಕಾಚಾರ್ಯ
ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಮಾತ್ರ ನನಗೆ ರಾಜಕೀಯದಲ್ಲಿ ವಿರೋಧಿ ಎಂದು ಹೇಳುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, "ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದೀರಿ. ಲಿಂಗಾಯತ ಸಮುದಾಯದ ನಾಯಕರು ನೀವು, ಜನಪರ ಕೆಲಸವನ್ನು ಮಾಡಿ ನಮ್ಮ ಸಮುದಾಯಕ್ಕೆ ಒಳ್ಳೆಯ ಹೆಸರನ್ನು ತನ್ನಿ"ಎಂದು ತುಮಕೂರು ಸಿದ್ದಗಂಗಾ ಮಠದಲ್ಲಿ ಯಡಿಯೂರಪ್ಪನವರಿಗೆ ಸಲಹೆ ನೀಡಿದ್ದೆ. ಆ ವೇಳೆ, ಬಸವರಾಜ ಬೊಮ್ಮಾಯಿ ಕೂಡಾ ನಮ್ಮ ಜೊತೆಗಿದ್ದರು"ಎಂದು ಯತ್ನಾಳ್ ಹೇಳಿದರು.
"ಮಕ್ಕಳನ್ನು ದೂರವಿಡಿ, ಭ್ರಷ್ಟಾಚಾರ ಮುಕ್ತ ಸರಕಾರವನ್ನು ಕೊಡಿ. ಭಗವಂತ ಕರೆದಾಗ ನಾವೆಲ್ಲಾ ಹೋಗಬೇಕು, ಸುರೇಶ್ ಅಂಗಡಿಯವರ ಪರಿಸ್ಥಿತಿಯನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಮಕ್ಕಳನ್ನು ಹತ್ತಿರಕ್ಕೆ ಬಿಟ್ಟುಕೊಂಡು, ಕೋವಿಡ್ ಇಂಜೆಕ್ಷನ್, ಲಸಿಕೆಯಲ್ಲಿ ದುಡ್ಡು ಹೊಡೆದ ಹಲ್ಕಾ ಕೆಲಸವನ್ನು ಅವರು ಮಾಡಿದ್ದಾರೆ"ಎಂದು ಯತ್ನಾಳ್ ಆರೋಪಿಸಿದರು.
"ನನ್ನ ಮಾತನ್ನು ಅವರು ಕೇಳಿದ್ದರೆ, ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿಯಾಗಿ ಇರುತ್ತಿದ್ದರು. ಆದರೆ, ಇಡೀ ಅಧಿಕಾರವನ್ನು ಮಗ ವಿಜಯೇಂದ್ರನ ಕೈಗೆ ಕೊಟ್ಟು, ತಮ್ಮ ಅವನತಿಯನ್ನು ತಾವೇ ತೋಡಿಕೊಂಡರು. ಅವರ ಈಗಿನ ಪರಿಸ್ಥಿತಿಯನ್ನು ನೋಡಿದರೆ ಅಯ್ಯೋ ಪಾಪ ಎಂದೆನಿಸುತ್ತದೆ"ಎಂದು ಯತ್ನಾಳ್ ಬೇಸರ ವ್ಯಕ್ತ ಪಡಿಸಿದರು.
"ಯುವರಾಜ, ಬೆಟ್ಟದಹುಲಿ, ರಾಜಾಹುಲಿ ಎಂದು ಬಿಂಬಿಸಲಾಯಿತು, ಈಗ ಯಾವ ಯುವರಾಜನೂ ಇಲ್ಲ. ಈಗ ಮನೆಯಲ್ಲಿ ಅವರನ್ನು ಕೂರುವಂತೆ ಮಾಡಿದ್ದು, ಅವರ ಮಕ್ಕಳು. ಯಡಿಯೂರಪ್ಪನವರಿಗೆ ಮನೆಯಲ್ಲಿ ಕೂರುವಂತಹ ಪರಿಸ್ಥಿತಿ ಬಂದಿರುವುದಕ್ಕೆ ನಮಗೂ ಬೇಸರವಿದೆ. ಅಧಿಕಾರದ ದರ್ಪ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದು ಮಹಾಭಾರತದ ಕಾಲದಿಂದಲೂ ನಾವು ಕೇಳಿದ್ದೇವೆ"ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.