ಬಿಜೆಪಿ ಉಗ್ರಗಾಮಿತ್ವ ಹುಟ್ಟುಹಾಕುತ್ತಿದೆ: ವೀರಪ್ಪ ಮೊಯ್ಲಿ
ವಿಜಯಪುರ, ಡಿಸೆಂಬರ್ 13: ಬಿಜೆಪಿ ಪಕ್ಷವು ದೇಶದಲ್ಲಿ ಉಗ್ರಗಾಮಿತ್ವ ಹುಟ್ಟುಹಾಕುತ್ತಿದೆ ಎಂದು ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಹರಿಹಾಯ್ದಿದ್ದಾರೆ.
ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಕೋಮು ಗಲಭೆ ಉಂಟಾಗಿರುವ ಬಗ್ಗೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರೇರಣೆಯಿಂದ ರಾಷ್ಟ್ರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಆರಂಭವಾಗಿವೆ ಎಂದು ಹೇಳಿದ್ದಾರೆ.
ಕೋಮು ಗಲಭೆ ಆಗಲು ಬಿಜೆಪಿಯೇ ಕಾರಣ ಎಂದ ಅವರು ಬಿಜೆಪಿ ಸುಮ್ಮನಾದರೆ ಕೋಮು ಗಲಭೆ ತಾನೇ ತಾನಾಗಿ ನಿಲ್ಲುತ್ತೆ, ಆದರೆ ಅದು ಅವರಿಗೆ ಬೇಕಿಲ್ಲ, ಚುನಾವಣೆಯಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗಲಿದೆ, ಶಾಂತಿ ಕದಡಿದರೆ ರಾಜಕೀಯ ಲಾಭ ಆಗುವುದಿಲ್ಲ, ಕೋಮು ಗಲಭೆ ಬಿಜೆಪಿಗೆ ನಷ್ಟ ಉಂಟುಮಾಡಲಿದೆ ಎಂದರು.
ಸಿಬಿಐ ಮತ್ತು ಎನ್.ಐ.ಎ ಸಂಸ್ಥೆಗಳು ಬಿಜೆಪಿಯರ ಕೈಯಲ್ಲೇ ಇವೆ, ಅವು ಬಿಜೆಪಿಯ ಕೈಗೊಂಬೆಗಳಾಗಿವೆ ಹಾಗಾಗಿ ಬಿಜೆಪಿಯವರು ಎಲ್ಲಾ ಪ್ರಕರಣಗಳನ್ನು ಸಿಬಿಐ ವಶಕ್ಕೆ ಒಪ್ಪಿಸಲು ಪಟ್ಟು ಹಿಡಿಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗುಜರಾತ್ ಚುನಾವಣೆ ಬಗ್ಗೆ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹತಾಶರಾಗಿದ್ದಾರೆ, ಗುಜರಾತ್ ನಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆಂಬ ಭಯ ಅವರಿಗೆ ಬಂದಿದೆ ಹಾಗಾಗಿ ಅವರು ಚುನಾವಣೆ ಗೆಲ್ಲಲು ವಾಮ ಮಾರ್ಗ ಹಿಡಿದಿದ್ದಾರೆ, ಆದರೆ ಗುಜರಾತ್ನಲ್ಲಿ ಕಾಂಗ್ರೆಸ್ ಗೆಲ್ಲುವುದು ಖಾಯಂ ಎಂದರು.