'ಯಡಿಯೂರಪ್ಪರನ್ನು ಇಳಿಸಲು ಬಿಜೆಪಿ ಸಂಸದರಿಂದಲೇ ಕುತಂತ್ರ'
ವಿಜಯಪುರ, ಅಕ್ಟೋಬರ್ 9: ನೆರೆ ಪರಿಹಾರ ಬಿಡುಗಡೆಯಲ್ಲಿ ವಿಳಂಬವಾಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶೋಕಾಸ್ ನೋಟಿಸ್ಗೆ ಜಗ್ಗದೆ ಮತ್ತೆ ಸ್ವಪಕ್ಷೀಯರ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಉಳಿಸಲು ರಾಜ್ಯದ ಇಬ್ಬರು ಸಂಸದರು ಕುತಂತ್ರ ನಡೆಸಿದ್ದಾರೆ ಎಂದು ಬಸವನಗೌಡ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಯಾರಿಗೂ ಹೆದರೊಲ್ಲ: ಬಿಜೆಪಿ ನೋಟಿಸ್ಗೆ ಯತ್ನಾಳ್ ಸೆಡ್ಡು
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರ ರಾಜೀನಾಮೆಗೆ ಕೇಂದ್ರದಲ್ಲಿ ಇಬ್ಬರು ಸಂಸದರು ಒತ್ತಡ ಹೇರಿದ್ದಾರೆ. ನಾನು ಪರಿಹಾರದ ಕುರಿತು ಹೇಳಿಕೆ ನೀಡಿದ ಬಳಿಕ ಅವರು ದೆಹಲಿಗೆ ಹೋಗಿದ್ದರು. ಆದರೆ ಕೇಂದ್ರದಿಂದ ಪರಿಹಾರ ತರಲು ಅಲ್ಲ. ಅವರು ಹೋದ ಬಳಿಕ ನನಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇಂತಹ ಚಾಡಿಕೋರ ಸಂಸದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ ಅವರು, ಜನರ ಸಮಸ್ಯೆಗೆ ಸ್ಪಂದಿಸದ ನಿಮ್ಮನ್ನು ನಾಯಕರು ಎಂದು ಕರೆಯಬೇಕಾ? ಕೆಲಸ ಮಾಡುವುದನ್ನು ಬಿಟ್ಟು ಅವರ ವಿರುದ್ಧ ಷಡ್ಯಂತ್ರ ನಡೆಸುವ ಅಗತ್ಯವಿಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಹರಿಹಾಯ್ದರು.
ಯಡಿಯೂರಪ್ಪ ರಾಜೀನಾಮೆ ಪಡೆದುಕೊಳ್ಳಿ
ಯಡಿಯೂರಪ್ಪ ಅವರ ಮೇಲೆ ಅಸಮಾಧಾನವಿದ್ದರೆ ಅವರನ್ನು ಕರೆಯಿಸಿಕೊಂಡು ನಿಮಗೆ 76 ವರ್ಷ ವಯಸ್ಸಾಗಿದೆ ಎಂದು ರಾಜೀನಾಮೆ ಪಡೆದುಕೊಳ್ಳಿ ಎಂದ ಅವರು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ನನ್ನ ಪ್ರಯತ್ನಕ್ಕೆ ಈ ಇಬ್ಬರು ಸಂಸದರು ಅಡ್ಡಿಯಾಗಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಲು ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ಸಿಗುತ್ತದೆ. ಆದರೆ ನಮಗೆ ಸಿಗುವುದಿಲ್ಲ. ಸಂಸದರ ಈ ಚಟುವಟಿಕೆ ಬಗ್ಗೆ ನನಗೆ ದೆಹಲಿಯಿಂದಲೇ ಮಾಹಿತಿ ಸಿಕ್ಕಿದೆ ಎಂದು ಆರೋಪಿಸಿದರು.
ನನ್ನ ಶಕ್ತಿ ನೋಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದು
ಪಕ್ಷದಿಂದ ಹೊರಹಾಕಿದರೆ ನನಗೆ ನಷ್ಟವಿಲ್ಲ. ನನ್ನ ಶಕ್ತಿಯನ್ನು ವಿಧಾನಪರಿಷತ್ನಲ್ಲಿ ತೋರಿಸಿದ್ದೇನೆ. ನಾನು ಪಕ್ಷಕ್ಕೆ ಸೇರುವಾಗ ಇವರೇನು ಸ್ವಾಗತಿಸಿರಲಿಲ್ಲ. ನನ್ನ ಶಕ್ತಿ ನೋಡಿ ಅಮಿತ್ ಶಾ ಅವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನನ್ನ ತಾಕತ್ತು ನನ್ನ ಜತೆಗೆ ಇದೆ. ಕಾಲ ಬಂದಾಗ ನನ್ನ ತಾಕತ್ತನ್ನು ತೋರಿಸುತ್ತೇನೆ. ಯಡಿಯೂರಪ್ಪ ಮತ್ತು ಅನಂತ ಕುಮಾರ್ ಜಗಳವಾಡುತ್ತಿದ್ದರು. ಆದರೆ ಪಕ್ಷ, ರಾಜ್ಯ ಮತ್ತು ದೇಶದ ಹಿತದ ವಿಚಾರ ಬಂದಾಗ ಒಂದಾಗುತ್ತಿದ್ದರು. ಆದರೆ ಈಗ ನಡೆದಿರುವುದೇ ಬೇರೆ ಎಂದರು.
ಪಕ್ಷದ ವಿರುದ್ಧವೇ ವಾಗ್ದಾಳಿ: ಬಸನಗೌಡ ಯತ್ನಾಳ್ಗೆ ಬಿಜೆಪಿ ನೋಟಿಸ್
ಜನರ ಪರವಾಗಿ ಧ್ವನಿ ಎತ್ತಿರುವುದು
ಪ್ರಧಾನಿ ಬಳಿ ಜನರ ಭಾವನೆ ಹೇಳಿಕೊಳ್ಳಲು ಹೆದರುವುದಿಲ್ಲ. ನಾನು ಆದಾಯ ತೆರಿಗೆ ಅವ್ಯವಹಾರ, ಭೂಹಗರಣ ಅಥವಾ ಮನೆಯೊಡೆಯುವ ಕೃತ್ಯ ನಡೆಸಿಲ್ಲ. ನಾನು ಜನರ ಪರವಾಗಿ ಸಮಸ್ಯೆ ಎತ್ತಿರುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು, ಸಂಸದರು ಜನರ ಕೂಗನ್ನು ಪ್ರಧಾನಿಗೆ ತಲುಪಿಸುವುದು ಕರ್ತವ್ಯ ಮತ್ತು ಆ ಹಕ್ಕು ಕೂಡ ಇದೆ. ಜನರ ಅಳು ನೋಡಿದಾಗ ನಮ್ಮಲ್ಲಿಯೂ ಕಣ್ಣೀರು ಬರುತ್ತಿದೆ. ಮಾಧ್ಯಮದಲ್ಲಿ ಕರುಳು ಕಿವುಚುವಂತಹ ನೋವಿನ ವರದಿಗಳು ಪ್ರಕಟವಾಗುತ್ತಿದೆ. ಮಾಧ್ಯಮದವರೂ ಕಣ್ಣೀರು ಸುರಿಸುತ್ತಿದ್ದಾರೆ ಎಂದರು.
ವಾಜಪೇಯಿ ಮೆಚ್ಚಿಕೊಂಡಿದ್ದರು
ಯತ್ನಾಳ್ ಮತ್ತು ಯಡಿಯೂರಪ್ಪ ಅವರನ್ನು ಕಡೆಗಣಿಸುವುದು ವೀರಶೈವ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಬಿತ್ತುತ್ತಿದೆ. ಆಲಮಟ್ಟಿ ಜಲಾಶಯದ ಎತ್ತರ ಏರಿಸದೆ ಇದ್ದರೆ ರಾಜೀನಾಮೆ ನೀಡುವುದಾಗಿ ವಾಜಪೇಯಿ ಅವರ ಬಳಿಯೂ ಹೇಳಿದ್ದೆ. ವಾಜಪೇಯಿ ಅದನ್ನು ನಕಾರಾತ್ಮಕವಾಗಿ ತೆಗೆದುಕೊಂಡಿರಲಿಲ್ಲ. ಶಹಬ್ಬಾಸ್ಗಿರಿ ಕೊಟ್ಟು ಮಂತ್ರಿ ಮಾಡಿದ್ದರು ಎಂದು ನೆನಪಿಸಿಕೊಂಡರು.