ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ಯತ್ನಾಳ್ ಹೊಸ ಬಾಂಬ್
ವಿಜಯಪುರ, ಮೇ 3: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಾತಿಗೆ ಬಿಜೆಪಿಯಲ್ಲಿ ಎಷ್ಟು ಬೆಲೆ ಇದೆಯೋ ತಿಳಿದಿಲ್ಲ. ಆದರೆ, ರಾಜಕಾರಣದ ಸುತ್ತಮುತ್ತ ವಿವಾದಕಾರೀ ಹೇಳಿಕೆಯನ್ನು ನೀಡುವುದರಲ್ಲಿ ಅವರು ನಿಸ್ಸೀಮರು.
ಸ್ವಪಕ್ಷೀಯದವರನ್ನೇ ಅದರಲ್ಲೂ ಪ್ರಮುಖವಾಗಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಮುರುಗೇಶ್ ನಿರಾಣಿ ವಿರುದ್ದ ಕಿಡಿಕಾರುವ ಯತ್ನಾಳ್, ಅಮಿತ್ ಶಾ ಅವರು ರಾಜ್ಯ ಪ್ರವಾಸದಲ್ಲಿ ಇದ್ದಾಗಲೇ ಮತ್ತೊಂದು ಹೇಳಿಕೆಯನ್ನು ನೀಡಿ, ಪಕ್ಷದ ನಾಯಕರಿಗೆ ಮುಜುಗರ ತಂದಿದ್ದಾರೆ.
ಯಡಿಯೂರಪ್ಪ ಬಗ್ಗೆ'ಅಯ್ಯೋ ಪಾಪ' ಎಂದು ಬೇಸರ ವ್ಯಕ್ತ ಪಡಿಸಿದ ಯತ್ನಾಳ್
"ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿನಲ್ಲಿ ಇದ್ದಾರೆ, ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಮೋದಿಯವರ ನೇತೃತ್ವದಲ್ಲಿ ರಾಜ್ಯಕ್ಕೆ ಸಂಬಂಧ ಪಟ್ಟಂತೆ ಹೈವೋಲ್ಟೇಜ್ ಸಭೆ ನಡೆದಿದೆ" ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಯತ್ನಾಳ್ ಹೇಳಿದರು.
"ಮೇ 10ರ ಒಳಗಡೆ ಸಿಎಂ ಬಸವರಾಜ ಬೊಮ್ಮಾಯಿಯವರ ಬದಲಾವಣೆ ಆಗಬಹುದು, ಈ ಸಂಬಂಧ ಪ್ರಧಾನಿ ಮೋದಿಯವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸದ್ಯ ಅವರು ವಿದೇಶ ಪ್ರವಾಸದಲ್ಲಿದ್ದಾರೆ" ಎಂದು ಯತ್ನಾಳ್ ಹೇಳುವ ಮೂಲಕ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ.
"ಮುಖ್ಯಮಂತ್ರಿ ಬದಲಾವಣೆಯಾದರೆ ಒಬ್ಬರಿಗೆ ಜೈಲಿಗೆ ಹೋಗುತ್ತೇವೆ (ಡಿ.ಕೆ.ಶಿವಕುಮಾರ್) ಎನ್ನುವ ಭಯವಿದೆ. ಇನ್ನೊಬ್ಬರಿಗೆ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ (ಸಿದ್ದರಾಮಯ್ಯ) ಎನ್ನುವ ಭೀತಿಯಿದೆ"ಎಂದು ಯತ್ನಾಳ್ ಅವರು ಕಾಂಗ್ರೆಸ್ ನಾಯಕರ ವಿರುದ್ದ ವ್ಯಂಗ್ಯವಾಡಿದ್ದಾರೆ.
Recommended Video
"ಸೋಮವಾರ ಸಂಜೆ ನನಗೆ ಮುಖ್ಯಮಂತ್ರಿ ಕಚೇರಿಯಿಂದ ಕರೆ ಮಾಡಿ ಆಹ್ವಾನಿಸಲಾಗಿದೆ. ಆದರೆ ಇಂದು ಬಸವ ಜಯಂತಿ ಇರುವುದರಿಂದ, ಈ ಪವಿತ್ರ ದಿನದಂದು ವಿಜಯಪುರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ನಾನು ಭಾಗವಹಿಸಬೇಕಾಗಿದೆ, ಹೀಗಾಗಿ ನಾನು ಬೆಂಗಳೂರಿಗೆ ತೆರಳುತ್ತಿಲ್ಲ" ಎಂದು ತಿಳಿಸಿದರು.