ರಾಜ್ಯ, ಕೇಂದ್ರ ಸಚಿವರ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಚಾಟಿ
ವಿಜಯಪುರ, ಅಕ್ಟೋಬರ್ 03: ಬಿಜೆಪಿ ಶಾಸಕ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೆರೆ ಪರಿಹಾರ ವಿಷಯವಾಗಿ ಕೇಂದ್ರ ಹಾಗೂ ರಾಜ್ಯ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಸೇರಿದಂತೆ ರಾಜ್ಯದ ಎಲ್ಲ ಬಿಜೆಪಿ ಸಂಸದರ ವಿರುದ್ಧವೂ ಕಿಡಿ ಕಾರಿರುವ ಅವರು, ಕೇಂದ್ರದಿಂದ ನೆರೆ ಸಂತ್ರಸ್ತರಿಗಾಗಿ 10,000 ಕೋಟಿ ತಂದು ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಪ್ರಭಾವಿ ಬಿ.ಎಲ್.ಸಂತೋಶ್ ವಿರುದ್ಧವೇ ಶಾಸಕ ಯತ್ನಾಳ್ ವಾಗ್ದಾಳಿ
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದಾನಂದಗೌಡ ಅವರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಾಡಿದ ಆರೋಪದ ಬಗ್ಗೆಯೂ ಕಿಡಿಕಾರಿದ್ದು, 'ಆತ ಮೋದಿ ಪ್ರಧಾನಿ ಆಗಲೆಂದು ತಪಸ್ಸು ಮಾಡಿದ್ದ, ನಿಮ್ಮ ವೈಫಲ್ಯಗಳನ್ನು ಅವರ ಮೇಲೆ ಏಕೆ ಹಾಕುತ್ತೀರಿ' ಎಂದು ಪ್ರಶ್ನೆ ಮಾಡಿದ್ದಾರೆ.
ಸೂಲಿಬೆಲೆ ವಿರುದ್ಧ ಮಾತನಾಡಿದ್ದಕ್ಕೆ ಕಿಡಿ
ಒಬ್ಬರು ಬೆಂಗಳೂರಿನಲ್ಲಿ ಇನ್ನೊಬ್ಬರು ಹುಬ್ಬಳಿಯಲ್ಲಿ ಕುಳಿತಿದ್ದೀರಿ. ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ನಿಮ್ಮ ಸಾಮರ್ಥ್ಯ ತೋರಿಸಿ. ಇಲ್ಲಿ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡ್ತೀರಿ. ಏನು ಹುಡುಗಾಟಿಕೆ ಮಾಡುತ್ತಿದ್ದೀರಾ ಎಂಬುದಾಗಿ ಪರೋಕ್ಷವಾಗಿ ಸದಾನಂದ ಗೌಡರ ವಿರುದ್ಧ ಕಿಡಿಕಾರಿದ್ದಾರೆ.
ಕಾರು ಬಿಟ್ಟು ಓಡಿಹೋದವನಲ್ಲ ನಾನು: ಸಿಟಿ ರವಿಗೆ ಟಾಂಗ್
''ಯತ್ನಾಳ್ ಅವರು ಬೇರೆ 'ಉದ್ದೇಶದಿಂದ' ಮೋದಿ ವಿರುದ್ಧ ಪಕ್ಷದ ಸಂಸದರ ವಿರುದ್ಧ ಮಾತನಾಡುತ್ತಿದ್ದಾರೆ'' ಎಂದಿದ್ದ ಸಚಿವ ಸಿ.ಟಿ.ರವಿ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, 'ನನಗೆ ಮಂತ್ರಿ ಆಗುವ ಆಸೆಯಿಲ್ಲ, ಮಂತ್ರಿ ಗಿರಿ ಆಸೆಗೆ ಕಾರು ಬಿಟ್ಟು ನಾನು ಓಡಿಹೋಗಿರಲಿಲ್ಲ' ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆಯಷ್ಟೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಯಡಿಯೂರಪ್ಪ ಅವರನ್ನು ತುಳಿಯಲೆಂದು ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದಿದ್ದರು.
'ಬಿ.ಎಲ್.ಸಂತೋಷ್ ಗೆ ಗೆಲ್ಲಿಸುವ ಯೋಗ್ಯತೆ ಇಲ್ಲ'
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ಬಸನಗೌಡ ಪಾಟೀಲ್ ಯತ್ನಾಳ್, 'ಆತನಿಗೆ ಸಂಘಟನೆ ಮಾಡುವುದು ಗೊತ್ತಿಲ್ಲ, ಸುಮ್ಮನೇ ವೀರ, ಧೀರ ಎನ್ನುತ್ತಾರೆ, ಆತ ಉಸ್ತುವಾರಿ ವಹಿಸಿದ್ದ ಕೇರಳ, ಆಂದ್ರದಲ್ಲಿ ಬಿಜೆಪಿಗೆ ಒಂದು ಸೀಟು ಬರಲಿಲ್ಲ' ಎಂದರು.