ಸೈನಿಕಾಕಾಂಕ್ಷಿಗಳು ಬೀದಿಯಲ್ಲಿ, ದೇಶಪ್ರೇಮದ ಭಾಷಣ ಬಿಗಿಯುವವರೆಲ್ಲಿ? ಜನರ ಪ್ರಶ್ನೆ!
ಉಡುಪಿ, ಮಾರ್ಚ್ 19: ದೇಶ, ದೇಶ ಪ್ರೇಮ, ಸೈನಿಕರು ಎಂದು ಭಾವನಾತ್ಮಕವಾಗಿ ಮಾತನಾಡುವ ಬಿಜೆಪಿ ಹಾಗೂ ಸಂಘ ಪರಿವಾರದ ಶಕ್ತಿ ಕೇಂದ್ರ ಉಡುಪಿಯಲ್ಲೇ ಸೈನಿಕಾಕಾಂಕ್ಷಿಗಳು ರಸ್ತೆ ಬದಿ, ಪಾರ್ಕ್ ಬಳಿ ಮಲಗಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಒಳಗಾಗಿದೆ.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಕಳೆದೆರಡು ದಿನಗಳಿಂದ ಸೇನಾ ನೇಮಕಾತಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಸೈನಿಕಾಕಾಂಕ್ಷಿಗಳಿಗೆ ಉಳಿದುಕೊಳ್ಳಲು ಒಂದು ಸೂರನ್ನೂ ಉಡುಪಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿಲ್ಲ.
ಸೇನೆಗೆ ಸೇರಬಯಸುವ ಯುವಕರಿಗೆ ಮಾಜಿ ಸೈನಿಕರಿಂದ ಶಿವಮೊಗ್ಗದಲ್ಲಿ ಉಚಿತ ತರಬೇತಿ
ಉಡುಪಿ ಜಿಲ್ಲೆಯ ಸಂಸದರಿಂದ ಹಿಡಿದು ಶಾಸಕರತನಕ, ನಗರಸಭೆಯಿಂದ ಹಿಡಿದು ಜಿಲ್ಲಾ ಪಂಚಾಯತ್ ತನಕ ಬಿಜೆಪಿಯೇ ಆಡಳಿತದಲ್ಲಿದೆ. ಭಾಷಣಕ್ಕೆ ಇಳಿದಾಗ ದೇಶಪ್ರೇಮ, ಸೈನಿಕರು ಎನ್ನುವ ಇವರಿಗೆ ಇದು ಗಮನಕ್ಕೆ ಬಂದಿಲ್ಲವೇ? ಅಥವಾ ಭಾಷಣಕ್ಕೆ ಮಾತ್ರ ದೇಶಪ್ರೇಮ, ಸೈನಿಕ ಪ್ರೇಮ ಸೀಮಿತವೇ ಎಂಬ ಚರ್ಚೆ ನಡೆಯುತ್ತಿದೆ.
ಬೆಳಿಗ್ಗೆ ನಾಲ್ಕು ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅವರಿಗೆಲ್ಲ ಸೇನಾ ನೇಮಕಾತಿ ರ್ಯಾಲಿ ಆರಂಭವಾಗುತ್ತದೆ. ಕಳೆದೆರಡು ದಿನಗಳಿಂದ ಮೊದಲ್ಗೊಂಡು ಮುಂದಿನ ಹತ್ತು ದಿನದ ತನಕ ಉಡುಪಿಯಲ್ಲಿ ಸೇನೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಭುಜಂಗ ಪಾರ್ಕಿನಿಂದ ಹಿಡಿದು ಸರಕಾರಿ ಆಸ್ಪತ್ರೆಯ ತನಕ ಉದ್ದಕ್ಕೂ ಈ ಹೊರಜಿಲ್ಲೆಯ ಆಕಾಂಕ್ಷಿಗಳು ಸಿಕ್ಕಸಿಕ್ಕಲ್ಲಿ ಮಲಗಿಕೊಂಡಿರುವ ದೃಶ್ಯ ಗುರುವಾರ (ಮಾ.18) ರಾತ್ರಿ ಎಲ್ಲೆಡೆ ಕಂಡುಬಂದಿದೆ.
Recommended Video
ಸೊಳ್ಳೆ ಕಚ್ಚುವ ಕಾರಣಕ್ಕೋ, ಬೀದಿ ದೀಪದ ಬೆಳಕು ನೇರವಾಗಿ ಮುಖಕ್ಕೆ ಪೋಕಸ್ ಆಗುವ ಕಾರಣಕ್ಕೋ, ನಿದ್ದೆ ಬರದೇ ಅತ್ತಿಂದಿತ್ತ ಓಡಾಡುತ್ತಿದ್ದ ಯುವಕರನ್ನು ನೈಟ್ ಬೀಟಿನ ಇಬ್ಬರು ಪೊಲೀಸರು ಗದರಿಸಿ ಸುಮ್ಮನೆ ಮಲಗುವಂತೆ ಎಚ್ಚರಿಕೆ ಕೊಟ್ಟು ಹೋಗಿದ್ದಾರೆಂದು ತಿಳಿದುಬಂದಿದೆ. ಸದ್ಯ ಸೈನಿಕಾಕಾಂಕ್ಷಿಗಳು ರಸ್ತೆ ಬದಿ, ಪಾರ್ಕ್ ಹೀಗೆ ಎಲ್ಲೆಂದರಲ್ಲಿ ಮಲಗಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.