ಮರವಂತೆಯಲ್ಲಿ ಅಮಾವಾಸ್ಯೆಯಂದು ವರಾಹ ದೇವರ ಮೊರೆ ಹೊಕ್ಕ ಭಕ್ತರು
ಉಡುಪಿ, ಮರವಂತೆ, ಆಗಸ್ಟ್ 11 : ಕರಾವಳಿ ಜನರ ಆರಾಧ್ಯ ದೇವರು, ನಂಬಿದ ಭಕ್ತರ ವರ ನೀಡುವ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಶನಿವಾರ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಕಲ ಧಾರ್ಮಿಕ ಪೂಜಾ ಕಾರ್ಯಕ್ರಮದಿಂದ ನಡೆಯಿತು.
ವಿಶ್ವವಿಖ್ಯಾತ ಮರವಂತೆ ಕಡಲತೀರ, ಪೂರ್ವದಲ್ಲಿ ಸೌಪರ್ಣಿಕಾ ನದಿ, ಪಶ್ಚಿಮದಲ್ಲಿ ಸಮುದ್ರ ರಾಜನ ನರ್ತನ ನಡುವೆ ರಾಷ್ಟ್ರೀಯ ಹೆದ್ದಾರಿ ಈ ಪ್ರಕೃತಿಯ ಸೊಬಗಿನ ತಾಣ.
ಇಂಥ ಪ್ರದೇಶದಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ಬೆಳಗ್ಗಿನ ಜಾವದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರುಶನ ಪಡೆದು ಕಷ್ಟ, ಕಾರ್ಪಣ್ಯವನ್ನು ನಿವಾರಿಸಿ, ಸಂತೋಷ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕರಾವಳಿ ಪ್ರದೇಶದ ಮೀನುಗಾರರು, ಕೃಷಿಕರು ಸಮೃದ್ಧಿಯನ್ನು ಕರುಣಿಸುವಂತೆ ಪ್ರಾರ್ಥಿಸುವ ಸಂಪ್ರದಾಯದಂತೆ ನೂರಾರು ಭಕ್ತಾದಿಗಳು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ, ವರಾಹ ದೇವರಿಗೆ, ಗಂಗಾಧರೇಶ್ವರ ದೇವರಿಗೆ ಅಭಿಷೇಕ, ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ಹರಕೆಗಳನ್ನು ಸಲ್ಲಿಸಿದರು. ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ದೇಗುಲದ ಒಳ ಬಂದು ಶ್ರೀ ವರಾಹ ದೇವರ ಕೃಪೆಗೆ ಪಾತ್ರರಾದರು.
ಬೈಂದೂರಿನಲ್ಲಿ ಪುಣ್ಯಪ್ರಾಪ್ತಿಗಾಗಿ ದಂಪತಿಗಳ ಸಮುದ್ರ ಸ್ನಾನ : ಬೈಂದೂರಿನ ಪ್ರಸಿದ್ದ ಪಡುವರಿ ಸೋಮೇಶ್ವರ ದೇವಸ್ಥಾನದ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಆಗಸ್ಟ್ 11ರಂದು ಸಂಭ್ರಮ ಸಡಗರದಿಂದ ನಡೆಯಿತು. ಪ್ರತಿ ವರ್ಷ ಕರ್ಕಾಟಕ ಅಮಾವಾಸ್ಯೆಯಂದು ಜಾತ್ರೆ ನಡೆಯುತ್ತದೆ. ನವ ದಂಪತಿಗಳು ಸಮುದ್ರ ಸ್ಥಾನ ಮಾಡಿ ದೇವರ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಬೇರೆ ಬೇರೆ ಊರುಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.
ಸೋಮೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆಯಂದು ಇಲ್ಲಿನ ನಾಗತೀರ್ಥಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಗುಡ್ಡದ ಅಡಿ ಭಾಗದಿಂದ ಹರಿಯುವ ತೊರೆಯಿಂದ ವರ್ಷ ಪೂರ್ತಿ ನೀರಿನಿಂದ ಕೂಡಿರುತ್ತದೆ. ದೇವಸ್ಥಾನದ ಎಲ್ಲಾ ಕಾರ್ಯಕ್ಕೆ ನಾಗತೀರ್ಥ ನೀರನ್ನು ಬಳಸುತ್ತಾರೆ.