ಉಡುಪಿಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ
ಉಡುಪಿ, ಆಗಸ್ಟ್ 22: ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಇಂದು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಮುಂದೆ ಪ್ರತಿಭಟಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
Recommended Video
ಆಗಸ್ಟ್ 21ರಂದು ಉಡುಪಿಯ ಇಂದಿರಾನಗರದ ನಿವಾಸಿ ಶ್ರೀ ರಕ್ಷಾ ತಲೆನೋವು ಎಂದು ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ವೈದ್ಯರು ಮಹಿಳೆಗೆ ಇಂಜೆಕ್ಷನ್ ಕೊಟ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿ ಮನೆಗೆ ಕಳುಹಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಶ್ರೀರಕ್ಷಾ ಮೃತಪಟ್ಟಿದ್ದಾರೆ. ತಕ್ಷಣ ಮನೆಯವರು ಮಹಿಳೆಯನ್ನು ಮತ್ತೆ ಅದೇ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಕೆಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಹಿಂದೇಟು ಹಾಕಿದೆ.
ಮೈಸೂರಿನಲ್ಲಿ 6 ತಿಂಗಳ ಗರ್ಭಿಣಿ-ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ನಗರದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಮೃತ ಶ್ರೀರಕ್ಷಾ ಅವರ rapid ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದು, ಗಂಟಲ ದ್ರವದ ವರದಿ ಪಾಸಿಟಿವ್ ಬಂದಿದೆ. ಜಿಲ್ಲಾಸ್ಪತ್ರೆ ನೀಡಿದ ಪಾಸಿಟಿವ್ ವರದಿಯಲ್ಲಿ ವೈದ್ಯರ ಹೆಸರು, ಸಹಿಯೂ ಇರದೇ ಇರುವುದನ್ನು ಗಮನಿಸಿದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಮಹಿಳೆ ಶ್ರೀರಕ್ಷಾ ಪತಿ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಯ ಸದಸ್ಯರು, ಮಹಿಳೆಯ ಸಂಬಂಧಿಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ನಾವೇ ಶವ ಸಂಸ್ಕಾರ ಮಾಡುತ್ತೇವೆ, ಮೃತದೇಹವನ್ನು ನಮಗೆ ಕೊಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಯಿತು. ಈ ವೇಳೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಹೆಚ್ಚುವರಿ ಪೊಲೀಸರ ರವಾನೆ ಮಾಡಲಾಯಿತು.