ದೇವಸ್ಥಾನ ತೆರೆದರೂ ಪಾಲಿಸಲೇಬೇಕಿದೆ ಈ ನಿಯಮಗಳನ್ನು
ಉಡುಪಿ, ಮೇ 31: "ನಾಳೆ ಮುಜರಾಯಿ ದೇವಸ್ಥಾನಗಳು ತೆರೆಯುವುದಿಲ್ಲ. ಈ ಹಿಂದೆ ಜೂನ್ 1ರಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಜೂನ್ 8ರಿಂದ ದೇವಸ್ಥಾನ ತೆರೆಯಲು ಸೂಚಿಸಿದೆ" ಎಂದು ತಿಳಿಸಿದ್ದಾರೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ.
Recommended Video
ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜೂನ್ 8ರಿಂದ ದೇವಸ್ಥಾನ ತೆರೆಯಲು ಸೂಚಿಸಿದೆ. ಕೇಂದ್ರದ ಆದೇಶ ಪಾಲಿಸುತ್ತೇವೆ. ರಾಜ್ಯದ ಎಲ್ಲಾ ದೇವಾಲಯಗಳನ್ನೂ ಜೂ.8ರಿಂದ ತೆರೆಯಲಾಗುತ್ತದೆ ಎಂದು ತಿಳಿಸಿದರು.
ಜೂನ್ 1ರ ಬದಲಿಗೆ ಜೂನ್ 8ರಿಂದ ಮಂದಿರ, ಮಸೀದಿ, ಚರ್ಚ್ ಓಪನ್
ಧಾರ್ಮಿಕ ದತ್ತಿ ಇಲಾಖೆ ಹೊರತಾದ ದೇವಸ್ಥಾನಗಳೂ ಜೂ.8ರಿಂದ ಆರಂಭಗೊಳ್ಳಲಿವೆ. ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗರ್ಭಗುಡಿಯೊಳಗೆ ಅರ್ಚಕರಿಗೆ ಮಾತ್ರ ಪ್ರವೇಶವಿದೆ. ಗರ್ಭಗುಡಿಯ ಒಳಗೆ ಹೋಗಿ ಮುಟ್ಟಿ ಪೂಜೆ ಮಾಡುವ ಅವಕಾಶ ಇಲ್ಲ. ವಿಸ್ತೃತವಾದ ಮಾರ್ಗಸೂಚಿ ಶೀಘ್ರವೇ ಬಿಡುಗಡೆ ಮಾಡ್ತೇವೆ. ಖಾಸಗಿ ದೇವಾಲಯ, ಮಠ ತೆರೆಯುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ದೇವಾಲಯಗಳಲ್ಲಿ ಗಂಧ, ಕುಂಕುಮ ನೀಡಲಾಗುವುದು. ಆದರೆ ತೀರ್ಥ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಧಾರ್ಮಿಕ ಸಮಾರಂಭ, ಜಾತ್ರೆಗೆ ಅವಕಾಶ ಇಲ್ಲ. ಲಾಕ್ ಡೌನ್ ನಿಂದ ಮುಜರಾಯಿ ದೇವಸ್ಥಾನಗಳಿಗೆ ನಷ್ಟವಾಗಿದೆ. ಶೇ.30 ಕ್ಕೂ ಅಧಿಕ ಆದಾಯಕ್ಕೆ ಕಡಿವಾಣ ಬಿದ್ದಿದೆ. ಏಪ್ರಿಲ್-ಮೇ ತಿಂಗಳ ಧಾರ್ಮಿಕ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಿದೆ ಎಂದು ಹೇಳಿದರು.