ಉಡುಪಿಗೆ ಬಂದ ಮೋದಿ ಕೃಷ್ಣಮಠಕ್ಕೆ ಬರಲೇ ಇಲ್ಲ ಏಕೆ?
Recommended Video
ಉಡುಪಿ, ಮೇ 2 : ಪ್ರಧಾನಿ ಮೋದಿಯವರು ಉಡುಪಿಗೆ ಆಗಮಿಸಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಹೋಗಿದ್ದಾರೆ. ಆದರೆ ಈಗ ಉಳಿದಿರುವ ಪ್ರಶ್ನೆ ಪ್ರಧಾನಿ ಏಕೆ ಕೃಷ್ಣಮಠಕ್ಕೆ ಹೋಗಿಲ್ಲ? ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಬಂದು ಕೃಷ್ಣದರ್ಶನ ಮಾಡಿಲ್ಲ ಏಕೆ ? ಎಂಬುದು.
ಹಾಗೆ ನೋಡಿದರೆ ಪ್ರಧಾನಿಯವರ ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಕೃಷ್ಣಮಠ ಭೇಟಿ ಇರಲಿಲ್ಲ ಆದರೂ ಪ್ರಧಾನಿಯವರ ವಿಶೇಷ ಭದ್ರತಾ ತಂಡ ಮಠದಲ್ಲಿ ಠಿಕಾಣಿ ಹೂಡಿತ್ತು. ಹೀಗಾಗಿ ಕೊನೆ ಕ್ಷಣಕ್ಕೆ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ ಮೋದಿ ಈ ನಿರೀಕ್ಷೆಯನ್ನೂ ಹುಸಿಗೊಳಿಸಿದ್ದಾರೆ.
ಉಡುಪಿಯನ್ನು ಹೊಗಳಿ ಅಟ್ಟಕ್ಕೇರಿಸಿದ ನರೇಂದ್ರ ಮೋದಿ
ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಒಮ್ಮೆಯೂ ಕೃಷ್ಣಮಠಕ್ಕೆ ಭೇಟಿ ಕೊಟ್ಟಿರಲಿಲ್ಲ.ಇದು ಬಿಜೆಪಿ ನಾಯಕರಿಗೆ ಅಸ್ತ್ರವಾಗಿತ್ತು. ಪದೇಪದೆ ಬಿಜೆಪಿ ಮುಖಂಡರು ಟೀಕೆ ಮಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯ ಮಠಕ್ಕೆ ಒಮ್ಮೆಯೂ ಹೋಗಿಲ್ಲ. ಇದು ಅವರ ಉದ್ಧಟತನದ ಪರಮಾವಧಿ ಎಂಬಂತೆ ಬಿಜೆಪಿ ನಾಯಕರು ಟೀಕಿಸುತ್ತಿದ್ದರು. ಆದ್ರೆ ಈ ಸಲ ಮೋದಿಯವರೇ ಕೃಷ್ಣಮಠಕ್ಕೆ ಹೋಗದಿರುವುದು ಬಿಜೆಪಿಗೆ ಇರಿಸುಮುರಿಸು ತಂದಿರುವುದು ನಿಜ.
ಅಲ್ಲದೆ ಇದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಎಲ್ಲ ಸಾಧ್ಯತೆಗಳೂ ಇವೆ. ಸಿದ್ಧರಾಮಯ್ಯನವರನನ್ನು ಟೀಕಿಸುವ ಬಿಜೆಪಿ ನಾಯಕರು ಮೊದಲು ತಮ್ಮ ನಾಯಕನನ್ನು ಕೃಷ್ಣಮಠಕ್ಕೆ ಭೇಟಿ ಕೊಡಿಸಲಿ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ರೂ ಅಚ್ಚರಿ ಇಲ್ಲ. ಈ ಮಧ್ಯೆ ಮಠಾಧೀಶರುಗಳ ವಲಯದಲ್ಲೂ ಪ್ರಧಾನಿ ಬಾರದೇ ಇದ್ದುದು ಅಸಮಾಧಾನಕ್ಕೆ ಕಾರಣವಾಗಿದೆ.
ಚಿತ್ರಗಳಲ್ಲಿ ನೋಡಿ: ಕರ್ನಾಟಕದಲ್ಲಿ ಶುರುವಾಯ್ತು ಮೋದಿ ಮೋಡಿ
ಆದರೆ ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಿರಿಯ ಯತಿ ಪೇಜಾವರ ಶ್ರೀ ಪರ್ಯಾಯ ಸಂದರ್ಭ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿತ್ತು. ಆದ್ರೆ ಪರ್ಯಾಯ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಬಂದಿರಲಿಲ್ಲ. ಪ್ರಧಾನಿ ಬಂದಿಲ್ಲವೆಂದು ನಮಗೆ ಬೇಸರವಿಲ್ಲ. ಈ ಬಾರಿ ಮಠಕ್ಕೆ ಬರುವಂತೆ ಪತ್ರ ಬರೆದಿದ್ದೆ. ಚುನಾವಣೆ ಸಂದರ್ಭ ದೇವರ ಅನುಗ್ರಹವಾಗುತ್ತದೆ ಎಂದು ಹೇಳಿದ್ದೆ. ಪ್ರಣಬ್ ಮುಖರ್ಜಿ ಕರೆಯದೆ ಮಠಕ್ಕೆ ಬಂದಿದ್ದರು.
ಮಂತ್ರಿಗಳು ಬರ್ತಾರೆ ಹೋಗ್ತಾರೆ, ಕೆಲಸ ಆಗದಿದ್ದರೆ ನಮಗೆ ಬೇಸರವಾಗುತ್ತದೆ. ಮಠಕ್ಕೆ ಬಂದಿಲ್ಲವೆಂದು ನಮಗೆ ಬೇಸರವಿಲ್ಲ. ನಮ್ಮ ಆಪ್ತ ಕಾರ್ಯದರ್ಶಿಗೆ ಪ್ರಧಾನಿ ಕಾರ್ಯದರ್ಶಿ ಕರೆ ಮಾಡಿದ್ದಾರೆ. ರಾಜಕೀಯ ಸಮಾವೇಶ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪರ್ಯಾಯ ಪಲಿಮಾರು ಶ್ರೀ ಕೂಡ ಪ್ರಧಾನಿ ಬಾರದೇ ಇದ್ದುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗಳ ಬಗ್ಗೆ ಬಹಳ ಗೌರವ ಇದೆ. ಮಠಕ್ಕೆ ಬರುತ್ತಾರೆ ಎಂದು ಪ್ರಧಾನಿ ಹೇಳಿರಲಿಲ್ಲ. ಆದರೆ ಉಡುಪಿಗೆ ಬಂದು ಮಠಕ್ಕೆ ಬಾರದೇ ಇದ್ದದ್ದು ಸ್ವಲ್ಪ ಬೇಸರವಾಗಿದೆ. ಸ್ಥಳೀಯ ಬಿಜೆಪಿ ನಾಯಕರು ಮೋದಿ ಬರಬಹುದು ಎಂದಿದ್ದರು.
ಮಠದ ವ್ಯಾಪ್ತಿಯಲ್ಲಿ ಪೊಲೀಸರು ಭದ್ರತೆ ಮಾಡಿಕೊಂಡಿದ್ದರು. ಮೋದಿ ಆಗಮನಕ್ಕೆ ಸಣ್ಣಪುಟ್ಟ ಸಿದ್ಧತೆಯೂ ನಡೆದಿತ್ತು. ಹೀಗಾಗಿ ಸ್ವಲ್ಪ ಬೇಸರ ಆಗಿದೆ ಎಂದಿದ್ದಾರೆ. ಒಟ್ಟಾರೆ ಉಡುಪಿಗೆ ಬಂದ ಮೋದಿ ಕೃಷ್ಣಮಠಕ್ಕೆ ಬಾರದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.