ಕಾರು ದೂರ ನಿಲ್ಲಿಸಿ ಶೀರೂರು ಶ್ರೀಗಳಿಗೆ ಊಟ ತರುತ್ತಿದ್ದ ಮಹಿಳೆ ಯಾರು?
Recommended Video
ಉಡುಪಿ, ಜುಲೈ 21: ಅಷ್ಟಮಠಗಳಲ್ಲೊಂದಾದ ಶೀರೂರು ಶ್ರೀಗಳ ಅಸಹಜ ಸಾವಿನ ಸುತ್ತ ಹಲವು ಗೊಂದಲ, ಅನುಮಾನಗಳು ದಿನಕ್ಕೊಂದು ಹೊಸರೂಪ ಪಡೆಯುತ್ತಿದೆ. ಈ ನಡುವೆ, ಶ್ರೀಗಳಿಗೆ ಊಟ ತಂದುಕೊಡುತ್ತಿದ್ದ ಮಹಿಳೆಯನ್ನು ಉಡುಪಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಹೊಸ ಮಹಿಳೆಯ ಜೊತೆ ಶೀರೂರು ಶ್ರೀಗಳಿಗೆ ಸಂಪರ್ಕ ಇತ್ತು. ಆಕೆ ಜತೆಗೆ ಏನಾದರೂ ಜಗಳ ಅಗಿರಬಹುದು ಎನ್ನುವ ಹಿರಿಯ ಪೇಜಾವರ ಶ್ರೀಗಳ ಹೇಳಿಕೆ, ಅಸಹಜ ಸಾವಿನ ಅನುಮಾನವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗಿದೆ.
ಶೀರೂರು ಶ್ರೀಗಳ ಸಾವಿನ ತನಿಖೆಗೆ ಏಳು ವಿಶೇಷ ತಂಡ ರಚನೆ
ಮೂರ್ನಾಲ್ಕು ತಿಂಗಳ ಕೆಳಗೆ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ದೈವದ ನೇಮದ ಧಾರ್ಮಿಕ ಕಾರ್ಯಕ್ರಮದ ವೇಳೆ, ಶೀರೂರು ಶ್ರೀಗಳು ದೈವದ ಜೊತೆ ವಿಢಂಬನಾತ್ಮಕವಾಗಿ ವರ್ತಿಸಿದರು. ಇದು ಶ್ರೀಗಳ ಸಾವಿಗೆ ಕಾರಣವಾಯಿತೇ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಈ ನಡುವೆ, ಶ್ರೀಗಳು ಬ್ರಹ್ಮಬೈದರ್ಕಳ (ಕೋಟಿ-ಚೆನ್ನಯ್ಯ) ದೈವಗರಡಿಯಲ್ಲಿನ ಕೋಲವೊಂದರಲ್ಲಿ ನನಗೆ ಇಬ್ಬರು ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದಾರೆಂದು ದೈವದ ಮೊರೆಹೋಗಿದ್ದ ವಿಡಿಯೋ ಈ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಉಡುಪಿ: ಶಿರೂರು ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?
ಮಠಕ್ಕೆ ಸಂಬಂಧಪಡದ ಮಹಿಳೆಯೊಬ್ಬಳು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳಿಗೆ ಊಟ- ಉಪಹಾರ ತಂದುಕೊಡುತ್ತಿದ್ದರು. ಮಠದ ಆಪ್ತರೊಬ್ಬರ ಮೂಲಕ, ಶ್ರೀಗಳಿಗೆ ಈ ಮಹಿಳೆಯ ಪರಿಚಯವಾಗಿತ್ತು. ಹೊಸ ಮಹಿಳೆಯ ಜೊತೆ ಶ್ರೀಗಳಿಗೆ ಸಂಪರ್ಕವಿದೆ ಎಂದು ಪೇಜಾವರ ಸ್ವಾಮೀಜಿಗಳು ಉಲ್ಲೇಖಿಸಿರುವುದು ಈಕೆಯನ್ನೇ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..
ಮೂಲ ಮಠದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಶ್ರೀಗಳು
ಉಡುಪಿ ರಥಬೀದಿಯಲ್ಲಿರುವ ಶೀರೂರು ಮಠದಲ್ಲಿ ಹೆಚ್ಚಿನ ಸಮಯವನ್ನು ಕಳೆಯದೇ, ತಮ್ಮ ಮೂಲ ಮಠದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಶ್ರೀಗಳಿಗಾಗಿ ವಿಶೇಷ ಊಟ-ಫಲಹಾರ ಸಿದ್ದವಾಗುತ್ತಿರಲಿಲ್ಲ. ಇತ್ತೀಚೆಗೆ ಏಕಾಂತದಲ್ಲೇ ಹೆಚ್ಚು ಇರಲು ಬಯಸುತ್ತಿದ್ದ ಶೀರೂರು ಶ್ರೀಗಳು, ತಮ್ಮ ಊಟವನ್ನು ತಾವೇ ಸಿದ್ದಪಡಿಸಿಕೊಳ್ಳುತ್ತಿದ್ದರು.
ನಾಲ್ಕು ವರ್ಷಗಳ ಕೆಳಗೆ, ಶ್ರೀಗಳಿಗೆ ಮಹಿಳೆಯೊಬ್ಬರ ಪರಿಚಯ
ಸುಮಾರು ನಾಲ್ಕು ವರ್ಷಗಳ ಕೆಳಗೆ, ಶ್ರೀಗಳಿಗೆ ಮಹಿಳೆಯೊಬ್ಬರ ಪರಿಚಯವಾಗಿ, ನಿಕಟ ಸಂಪರ್ಕದಲ್ಲಿದ್ದರು. ವಾರಕ್ಕೆ ಮೂರ್ನಾಲ್ಕು ಬಾರಿ ಮಾತ್ರ ಹಿರಿಯಡ್ಕದಲ್ಲಿರುವ ಮಠಕ್ಕೆ ಬರುತ್ತಿದ್ದ ಮಹಿಳೆ ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರದವರು. ಮಠಕ್ಕೆ ಬರುವಾಗ ಕಾರಿನಲ್ಲಿ ಬರುತ್ತಿದ್ದ ಈ ಮಹಿಳೆ, ಕಾರನ್ನು ದೂರ ನಿಲ್ಲಿಸಿ ಮಠದೊಳಗೆ ತೆರಳುತ್ತಿದ್ದರು. ಈಕೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಪೂರ್ವಾಶ್ರಮದ ಸಹೋದರ ನನಗೆ ಫೋನಿನಲ್ಲಿ ಮಾತನಾಡುವಾಗ ತಿಳಿಸಿದ್ದಾರೆ
ಕಲಾಯಿ ಹಾಕದ ಪಾತ್ರೆಯಲ್ಲಿ ಸಿದ್ದವಾಗಿದ್ದ ಅಡುಗೆಯನ್ನು ಶೀರೂರು ಶ್ರೀಗಳು ಸೇವಿಸಿದ್ದರು ಎಂದು ಶ್ರೀಗಳ ಪೂರ್ವಾಶ್ರಮದ ಸಹೋದರ ನನಗೆ ಫೋನಿನಲ್ಲಿ ಮಾತನಾಡುವಾಗ ತಿಳಿಸಿದ್ದಾರೆ. ಹೊಸ ಮಹಿಳೆಯ ಜತೆ ಶೀರೂರು ಶ್ರೀಗಳಿಗೆ ಸಂಪರ್ಕ ಇತ್ತು. ಆಕೆ ಜತೆಗೆ ಏನಾದರೂ ಜಗಳ ಅಗಿರಬಹುದು. ಒಟ್ಟಾರೆ ಅವರ ಸಾವಿನ ಬಗ್ಗೆ ಸರಿಯಾದ ವಿಚಾರಣೆ ಆಗಲಿ. ಬೇರೆ ಮಠದ ಕಡೆಯಿಂದ ವಿಷಪ್ರಾಶನ ಅಗುವ ಸಾಧ್ಯತೆ ಇಲ್ಲ. ಒಂದು ವೇಳೆ ಇದ್ದರೆ ಮಠದ ಒಳಗಿನವರದೇ ಕೈವಾಡ ಇರಬಹುದು - ಪೇಜಾವರ ಶ್ರೀ.
ಖುದ್ದು ಶ್ರೀಗಳೇ ವಾಹನ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿದ್ದರು
ಜುಲೈ 16ರಂದು ಮಠದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ನಂತರ ಶ್ರೀಗಳು ಅಸ್ವಸ್ಥರಾದರು ಎಂದು ಅವರ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿದೆ. ಆದರೆ, ಅಂದು ಶ್ರೀಗಳು ಉಪಹಾರವಾಗಲಿ, ಊಟವನ್ನಾಗಿ ಸೇವಿಸಿರಲಿಲ್ಲ. ಜುಲೈ ಹದಿನೇಳರಂದು ಖುದ್ದು ಶ್ರೀಗಳೇ ವಾಹನ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಸಂತೋಷ ಗುರೂಜಿ ಗೊಂದಲ ಮೂಡಿಸುತ್ತಿದ್ದಾರೆ
ಕೇಮಾರು ಮಠದ ಈಶ ವಿಠಲದಾಸ ಶ್ರೀಗಳು ಮತ್ತು ಸಂತೋಷ ಗುರೂಜಿ ಗೊಂದಲ ಮೂಡಿಸುತ್ತಿದ್ದು, ನನ್ನನ್ನು ಸಹಿತ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಬಹುದು. ಆಚಾರ್ಯ ಮಧ್ವರು ಹಾಕಿಕೊಟ್ಟ ನಿಯಮಗಳನ್ನು ಶೀರೂರು ಶ್ರೀಗಳು ಪಾಲಿಸುತ್ತಿರಲಿಲ್ಲ ಎನ್ನುವ ವಿಚಾರದಲ್ಲಿ ಅವರಿಗೂ ನಮಗೂ ಭಿನ್ನಾಭಿಪ್ರಾಯವಿತ್ತೇ ಹೊರತು ದ್ವೇಷವಿರಲಿಲ್ಲ. ವೈಯಕ್ತಿಕವಾಗಿ ಅವರ ನಿಧನ ನಮಗೂ ಬೇಸರತಂದಿದೆ - ಪೇಜಾವರ ಶ್ರೀ.