'ಪದ್ಮವಿಭೂಷಣ' ರಾಮಚಂದ್ರ ರಾವ್ ಯಾರು ಗೊತ್ತೇ..?
ಉಡುಪಿ, ಜನವರಿ 25: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಹಾಗೂ ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ದೇಶದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರ ' ಪದ್ಮವಿಭೂಷಣ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟದ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಪಾತ್ರರಾದ ಮೊಟ್ಟಮೊದಲ ಭಾರತೀಯ ಎಂಬ ಖ್ಯಾತಿಯ ವಿಜ್ಞಾನಿ ಉಡುಪಿ ಮೂಲದವರು ಅನ್ನುವುದು ಖುಷಿಯ ವಿಚಾರ.[ಗೌರವ ಡಾಕ್ಟರೇಟ್ ನಿರಾಕರಿಸಿದ ರಾಹುಲ್ ದ್ರಾವಿಡ್]
ಯು.ಆರ್.ರಾವ್ ಅವರ ಪೂರ್ಣ ಹೆಸರು ಪ್ರೊ. ಉಡುಪಿ ರಾಮಚಂದ್ರ ರಾವ್. 1932ರಲ್ಲಿ ಉಡುಪಿಯಲ್ಲಿ ಜನಿಸಿದ ರಾವ್ ಬಾಹ್ಯಾಕಾಶ ನೌಕೆಗಳ ತಂತ್ರಜ್ಞಾನ ಅಭಿವೃದ್ಧಿಗೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ.
ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಿಂದ ರಾವ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಗುಜರಾತ್ ವಿಶ್ವವಿದ್ಯಾಲಯದಿಂದ ಸಂಶೋಧನಾ ಪದವಿಯನ್ನು ಪಡೆದಿದ್ದಾರೆ.[ 'ತೂಗು ಸೇತುವೆಗಳ ಸರದಾರ'ನಿಗೆ ಒಲಿದ ಪದ್ಮಶ್ರೀ]
ಪ್ರೊ. ಯು.ಆರ್.ರಾವ್, ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷರಾಗಿ 1984ರಿಂದ 1994ರವರೆಗೆ ಕಾರ್ಯ ನಿರ್ವಹಿಸಿದರು. 1975ರಲ್ಲಿ ಉಡಾವಣೆಗೊಂಡ ಆರ್ಯಭಟ ಉಪಗ್ರಹದ ಹಾಗೂ ಇನ್ನಿತರ ಮೊದಲನೆ ತಲೆಮಾರಿನ ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರ ನೇತೃತ್ವದಲ್ಲಿ ಭಾರತವು ಜಿಎಸ್ಎಲ್ವಿ ವಾಹಕ ಯಂತ್ರವನ್ನು ಅಭಿವೃದ್ಧಿಪಡಿಸುವ ಮಹತ್ವದ ಕಾರ್ಯಕ್ಕೆ ನಾಂದಿ ಹಾಡಿತ್ತು. ಜತೆಗೆ 1991ರಲ್ಲಿ ಕ್ರಯೊಜನಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಕೂಡಾ ಯು.ಆರ್.ರಾವ್ ಮಹತ್ವದ ಪಾತ್ರ ವಹಿಸಿದ್ದರು.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇನ್ಸಾಟ್ ಉಪಗ್ರಹಗಳ ಯಶಸ್ವಿ ಉಡಾವಣೆಯಲ್ಲಿ ಇವರ ಪಾತ್ರ ಹಿರಿದು. ಇಸ್ರೊದ 'ಆಂಟ್ರಿಕ್ಸ್ ಕಾರ್ಪೊರೇಷನ್'ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅಹಮದಾಬಾದ್ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಕರ್ನಾಟಕ ವಿಜ್ಞಾನ ಮತ್ತು ತಾಂತ್ರಿಕ ಅಕಾಡಮಿಯ ಅಧ್ಯಕ್ಷರಾಗಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟರಾಲಜಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಅಡ್ವೈಜರಿ ಕಮಿಟಿ ಫಾರ್ ಸ್ಪೇಸ್ ಸೈನ್ಸ್ ಮತ್ತು ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯ ಅಹ್ಮದಾಬಾದ್ನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಐಎಸ್ಟಿ), ತಿರುವನಂತಪುರದ ಕುಲಪತಿಗಳಾಗಿ ರಾವ್ ಸೇವೆ ಸಲ್ಲಿಸುತ್ತಿದ್ದಾರೆ.
1979ರಲ್ಲಿ ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ರಾವ್, 2013ರಲ್ಲಿ ವಾಷಿಂಗ್ಟನ್ನಲ್ಲಿ ಸೊಸೈಟಿ ಆಫ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್ ಸಂಸ್ಥೆಯೂ ಇವರಿಗೆ 'ಸೆಟಲೈಟ್ ಹಾಲ್ ಆಫ್ ಫೇಮ್' ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರಿಗೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.