'ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ನನ್ನ ಪರಿಚಿತ'
ಉಡುಪಿ, ಫೆಬ್ರವರಿ 26 : ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾರನ್ನೋ ಹಿಡಿದು, ಹಂತಕರು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಯಾರನ್ನೋ ಬಂಧಿಸಿ, ಅವರನ್ನೇ ಆರೋಪಿಗಳು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಸಿಕ್ಕಿದೆ ಬಿಗ್ ಲೀಡ್
ಇದು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದಲ್ಲಿ ಸರಕಾರದ ವೈಫಲ್ಯವನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗೌರಿ ಲಂಕೇಶ್, ಕಲ್ಬುರ್ಗಿ ಹಂತಕರನ್ನು ಇದುವರೆಗೂ ಹಿಡಿಯಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಈ ಎರಡು ಪ್ರಕರಣಗಳು ಗೃಹ ಇಲಾಖೆಗೆ ಎದುರಾದ ಸವಾಲು. ಈಗ ಬಂಧಿತ ಆಗಿರುವವನು ನನ್ನ ಪರಿಚಯದ ಹಿಂದೂ ಸಂಘಟನೆ ಕಾರ್ಯಕರ್ತ. ಆತ ಕೊಲೆ ಮಾಡುವಂತಹ ಹುಡುಗನಲ್ಲ ಎಂದು ಹೇಳಿದ ಅವರು, ಆತನಲ್ಲಿ ಪಿಸ್ತೂಲು ಸಿಕ್ಕಿದ ಮಾತ್ರಕ್ಕೆ ಕೊಲೆ ಮಾಡಿರಲು ಸಾಧ್ಯವಿಲ್ಲ. ರಾಜ್ಯ ಸರಕಾರ ತನ್ನ ವೈಫಲ್ಯ ಮರೆ ಮಾಚಲು ಈ ರೀತಿ ವರ್ತಿಸುತ್ತಿದೆ ಎಂದು ಅವರು ಹೇಳಿದರು.