ಶಿರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರು ತೀರಿಕೊಂಡು ತುಂಬಿತು ವರ್ಷ
ಉಡುಪಿ, ಜುಲೈ 18: ಉಡುಪಿಯ ಅಷ್ಟ ಮಠಗಳ ಪೈಕಿ ಒಂದಾದ ಶಿರೂರು ಮಠದ ಪೀಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈವಾಧೀನರಾಗಿ ನಾಳೆ (ಶುಕ್ರವಾರ), ಜುಲೈ 19ಕ್ಕೆ ಒಂದು ವರ್ಷ. ಶಿರೂರು ಶ್ರೀಗಳು ದೈವಾಧೀನರಾಗಿ ಒಂದು ವರ್ಷ ಪೂರ್ಣವಾಗುತ್ತಿದ್ದರೂ ಮಠಕ್ಕೆ ಒಬ್ಬರು ಉತ್ತರಾಧಿಕಾರಿಯ ನೇಮಕವಾಗಿಲ್ಲ, ಅವರಿಗೊಂದು ಬೃಂದಾವನ ನಿರ್ಮಾಣವಾಗಿಲ್ಲ ಎಂಬ ಸಂಗತಿಗಳು ಚರ್ಚೆಗೆ ಗ್ರಾಸವಾಗಿದ್ದವು.
ಉಡುಪಿಯ ಅಷ್ಟ ಮಠಗಳ 800 ವರ್ಷಗಳಿಗೂ ಅಧಿಕ ಇತಿಹಾಸದಲ್ಲಿ ವರ್ಷಗಳ ಕಾಲ ಮಠಾಧೀಶರಿಲ್ಲದೆ ಪೀಠ ಖಾಲಿ ಬಿದ್ದಿರುವುದು ಇದೇ ಪ್ರಥಮ. ಬೃಂದಾವನ ಇಲ್ಲದೆ ಪ್ರಥಮ ಪುಣ್ಯಾರಾಧನೆ ನಡೆಯುತ್ತಿರುವುದು ಕೂಡ ಪ್ರಥಮ ಎಂಬ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಉಡುಪಿ ಶ್ರೀಕೃಷ್ಣನ ವಿಗ್ರಹ ಅಲಂಕರಿಸುವ ತುಳಸಿ ದಳ ಔಷಧಿಗೆ ಬಳಕೆ
ಈ ಮಧ್ಯೆ ಕಾರ್ಕಳದಲ್ಲಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶಿಲಾ ವೃಂದಾವನ ಕೆತ್ತನೆ ಕಾರ್ಯ ಪ್ರಗತಿಯಲ್ಲಿದೆ. ಇದೇ ಬರುವ ಆಗಸ್ಟ್ 7ರಂದು ನಡೆಯುವ ಪ್ರಥಮ ಆರಾಧನೆ ದಿನದಂದು ಶಿರೂರು ಮೂಲ ಮಠದಲ್ಲಿರುವ ಸ್ಥಳದಲ್ಲಿ ಸಂಪ್ರದಾಯಬದ್ಧವಾಗಿ ವೃಂದಾವನ ಪ್ರತಿಷ್ಠಾಪಿಸಲಾಗುತ್ತದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
25 ಲಕ್ಷ ರುಪಾಯಿ ವೆಚ್ಚದಲ್ಲಿ ಮೂಲ ಮಠ ನವೀಕರಣ
ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನದ ಬಳಿಕ ಶಿರೂರು ಮಠದ ಆಡಳಿತ ದ್ವಂದ್ವ ಮಠವಾದ ಸೋದೆ ಮಠದ ವಶಕ್ಕೆ ನೀಡಲಾಗಿತ್ತು. ಈಗ 25 ಲಕ್ಷ ರುಪಾಯಿ ವೆಚ್ಚದಲ್ಲಿ ಶಿರೂರು ಮೂಲ ಮಠವನ್ನು ನವೀಕರಿಸಲಾಗಿದೆ. ಮುಂದಿನ ಹಂತದಲ್ಲಿ ಸಾಂತ್ಯಾರು ಗೋಪಾಲಕೃಷ್ಣ ಮಠ ಜೀರ್ಣೋದ್ಧಾರಕ್ಕೆ ಸಮಿತಿ ರಚಿಸಲಾಗಿದೆ. 2021ಕ್ಕೆ ಬ್ರಹ್ಮಕಲಶ ನೆರವೇರಿಸಲು ನಿರ್ಧರಿಸಲಾಗಿದೆ. ಪಾಪುಜೆ ಮಠವನ್ನು ಶಿರೂರು ಮಠದಿಂದಲೇ ಜೀರ್ಣೋದ್ಧಾರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶ್ರೀಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಶಿರೂರು ಶ್ರೀಗಳ ಸಾವಿನ ಬಳಿಕ ಶಿರೂರು ಮಠದ ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಲಾಗಿತ್ತು.
ಸೋಂದಾ ಗುರು ಕುಲದಲ್ಲಿ ಉತ್ತರಾಧಿಕಾರಿಗೆ ಶಿಕ್ಷಣ
ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರ ವೃಂದಾವನ ಆದ ಮೇಲೆ ಪಟ್ಟದ ದೇವರು ದ್ವಂದ್ವ ಮಠಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅನ್ನವಿಠಲ ದೇವರಿಗೆ ಶಿರೂರು ದ್ವಂದ್ವ ಮಠವಾದ ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರು ಪೂಜೆ ಸಲ್ಲಿಸುತ್ತಿದ್ದಾರೆ. ಮಠಕ್ಕೆ ಸಂಬಂಧಿಸಿದ ಕನಕ ಮಾಲ್ ಸಹಿತ 2 ಭೂ ವ್ಯಾಜ್ಯ ಇತ್ಯರ್ಥದ ಬಳಿಕ ಶಿಷ್ಯ ಸ್ವೀಕಾರ ಮಾಡಲು ಸೋದೆ ಶ್ರೀ ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಉತ್ತಮ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬೇಕು ಎಂಬುದು ಭಕ್ತರ ಆಗ್ರಹ. ಹೀಗಾಗಿ ವಟುವನ್ನು ಗುರುತಿಸಿ, ಸೋಂದಾ ಕ್ಷೇತ್ರದ ಗುರುಕುಲದಲ್ಲಿ ಧಾರ್ಮಿಕ ಶಿಕ್ಷಣ ನೀಡುತ್ತಿದ್ದೇವೆ. ಪ್ರಾಪ್ತ ವಯಸ್ಕರಾದ ಬಳಿಕ ಸಂನ್ಯಾಸ ದೀಕ್ಷೆ ನೀಡಿ, ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು" ಎಂದು ತಿಳಿಸಿದ್ದಾರೆ.
ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಸುವರ್ಣ ಶಿಖರ ಪ್ರತಿಷ್ಠಾಪನೆ
ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮಕ್ಕೆ ವ್ಯವಸ್ಥೆ
ಈ ನಡುವೆ ಶಿರೂರು ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮಕ್ಕೆ ನಾಳೆ ವ್ಯವಸ್ಥೆ ಮಾಡಲಾಗಿದೆ. ಶಿರೂರು ಶ್ರೀ ಲಕ್ಷ್ಮೀವರ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರುಷ ಕಳೆದ ಹಿನ್ನೆಲೆಯಲ್ಲಿ ಶಿರೂರು ಶ್ರೀ ಅಭಿಮಾನಿಗಳು ಶಿರೂರು ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಿದ್ದಾರೆ. ಶಿರೂರು ಶ್ರೀಗಳು ವೃಂದಾವನಸ್ಥರಾಗಿ ಒಂದು ವರುಷ ಕಳೆದರೂ ಅವರ ವೃಂದಾವನವನ್ನು ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಶಿರೂರು ಅಭಿಮಾನಿಗಳು ಸಂಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಸಂಸ್ಮರಣೆ ಕಾರ್ಯಕ್ರಮ ಜರುಗಲಿದೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಕೇಮಾರು ಶ್ರೀಗಳು ಸೇರಿ ಹಲವು ಗಣ್ಯರು ಭಾಗಿ
ಈ ಕಾರ್ಯಕ್ರಮಕ್ಕೆ ಕೇಮಾರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಪಂದನ ಶಾಲೆಯ ಮಕ್ಕಳಿಗೆ ಶಿರೂರು ಸ್ವಾಮೀಜಿ ಹೆಸರಿನಲ್ಲಿ ಅನ್ನದಾನ ಕೂಡ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಮಸ್ತ ಶಿರೂರು ಸ್ವಾಮೀಜಿ ಅಭಿಮಾನಿಗಳು ಭಾಗವಹಿಸುವಂತೆ ಅಭಿಮಾನಿ ಸಮಿತಿ ವಿನಂತಿಸಿಕೊಂಡಿದೆ. ವರ್ಷದ ಕೆಳಗೆ ಶಿರೂರು ಶ್ರೀಗಳು ನಿಧನರಾದಾಗ ನಾನಾ ಬಗೆಯಲ್ಲಿ ಚರ್ಚೆಗಳು ನಡೆದಿದ್ದವು. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹಬ್ಬಿಕೊಂಡು, ಅಂತಿಮವಾಗಿ ವೈದ್ಯಕೀಯ ವರದಿ ಬಂದ ಮೇಲೆ ಅನುಮಾನಗಳು ನಿವಾರಣೆ ಆಗಿದ್ದವು. ಆದರೆ ಸ್ವಾಮೀಜಿ ಸಾವಿನ ವಿಚಾರದಿಂದ ಅಷ್ಟ ಮಠಗಳಲ್ಲಿ ಬಾಲ ಸನ್ಯಾಸಿಗಳನ್ನು ನೇಮಕ ಮಾಡುವ ಬಗ್ಗೆಯೇ ಅಪಸ್ವರ ಕೇಳಿಬಂದಿತ್ತು.